ಉಡುಪಿಯಲ್ಲಿ ಕೃಷ್ಣಜನ್ಮಾಷ್ಟಮಿ ಸಡಗರ; ಉತ್ಸವದಲ್ಲಿ ಮಿಂದ ಭಕ್ತಸಾಗರ
ಉಡುಪಿ, ಆಗಸ್ಟ್ 23: ಉಡುಪಿಯಲ್ಲಿಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ; ಹೀಗಾಗಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠದತ್ತ ಹರಿದುಬರುತ್ತಿದೆ. ಉತ್ಸವದ ಪ್ರಯುಕ್ತ ಕೃಷ್ಣಮಠವನ್ನು ಬಗೆಬಗೆಯ ಹೂವಿನಿಂದ ಅಲಂಕಾರಗೊಳಿಸಲಾಗಿದೆ. ಭಕ್ತರು ಮಠಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ತೊಡಗಿದ್ದಾರೆ. ಪರ್ಯಾಯ ಶ್ರೀಗಳು ಬೆಳಿಗ್ಗೆ ಕೃಷ್ಣನಿಗೆ ಮಹಾಪೂಜೆ ನೆರವೇಸಿದರು. ಅಷ್ಟಮಿ ಹಬ್ಬ ಬಂದಿರುವುದನ್ನು ಸಾರುವಂತೆ ಉಡುಪಿಯಾದ್ಯಂತ ಹುಲಿವೇಷಧಾರಿಗಳು ಸಂಚರಿಸಿ ನೃತ್ಯ ಮಾಡುತ್ತಿದ್ದು, ಅದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಹುಲಿಕುಣಿತಗಳು ಉಡುಪಿಯಲ್ಲಿ ಅಧಿಕೃತವಾಗಿ ಪ್ರಾರಂಭವಾಗುವುದೇ ಅಷ್ಟಮಿ ದಿವಸ. ಹೀಗಾಗಿ ಇಂದು ಬೆಳಿಗ್ಗೆಯೇ ಹುಲಿಕುಣಿತ ತಂಡಗಳು ನಗರ ಸಂಚಾರ ಮಾಡುತ್ತಿವೆ. ನೋಟಿನ ಮಾಲೆಗಳನ್ನು ಹಾಕಿದ ಹುಲಿವೇಷಧಾರಿಗಳು ಮೊದಲ ದಿನವಾದ ಇಂದು ಕೃಷ್ಣನಿಗೆ ಪೂಜೆ ಸಲ್ಲಿಸಿ ಸಂಚಾರ ಪ್ರಾರಂಭಿಸಿದರು. ಒಂದೊಂದು ತಂಡದಲ್ಲಿ ಹತ್ತಾರು ವೇಷಧಾರಿಗಳು ಕುಣಿದು ಕುಪ್ಪಳಿಸುವುದು ನೋಡುವುದೇ ಚೆಂದ. ನಗರದ ಜನತೆ ಕೂಡ ನಾಮುಂದು ತಾಮುಂದು ಎಂಬಂತೆ ಹುಲಿವೇಷಧಾರಿಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. ಹುಲಿವೇಷದ ತಂಡಗಳಿಗೆ ಪ್ರೋತ್ಸಾಹ ನೀಡಲು ಜನರೂ ನೂರು, ಐನೂರು ಮತ್ತು ಸಾವಿರದ ನೋಟುಗಳನ್ನು ನೀಡಿ ಹುರಿದುಂಬಿಸುತ್ತಿದ್ದಾರೆ. ಕೆಲವೆಡೆ ಹುಲಿವೇಷಧಾರಿಗಳಿಗೆ ನೋಟಿನ ಮಾಲೆಯನ್ನೂ ಹಾಕುತ್ತಿದ್ದಾರೆ.
ಮುದ್ದು ಮುಖದ ತುಂಟ ಕೃಷ್ಣರು ನಮ್ಮ ಗ್ಯಾಲರಿಯಲ್ಲಿ
ಬೆಳಿಗ್ಗಿನಿಂದಲೇ ರಥಬೀದಿಯ ಸುತ್ತ ಭಕ್ತಾದಿಗಳು ಜಮಾಯಿಸುತ್ತಿದ್ದು, ಹೊತ್ತೇರುತ್ತಿದ್ದಂತೆ ಹಬ್ಬದ ಕಳೆ ಬರುತ್ತಿದೆ. ಮಠದ ಸುತ್ತ ಹೂ ಮಾರಾಟದ ಅಬ್ಬರ ಜೋರಾಗಿದ್ದು, ಭಕ್ತಾದಿಗಳು ಸಂಭ್ರಮದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಉಳಿದಂತೆ ಮುದ್ದುಕೃಷ್ಣವೇಷ ಸ್ಪರ್ಧೆಯಲ್ಲಿ ನೂರಾರು ಚಿಣ್ಣರು ಪಾಲ್ಗೊಂಡರು. ಪುಟಾಣಿ ಕಂದಮ್ಮಗಳ ಕೃಷ್ಣಲೀಲೆ ನೋಡಲು ಪೋಷಕರು ಮತ್ತು ಭಕ್ತರ ದಂಡೇ ಹರಿದುಬಂದಿತ್ತು. ಈ ಬಾರಿ ದಾಖಲೆ ಸಂಖ್ಯೆಯ ಚಿಣ್ಣರು ಮುದ್ದುಕೃಷ್ಣ ಮತ್ತು ಮುದ್ದುರಾಧೆ ವೇಷದಲ್ಲಿ ಮಿಂಚಿ ಕೃಷ್ಣಲೀಲೆಯನ್ನು ಅನಾವರಣಗೊಳಿಸಿದರು.
ಇಂದು ರಾತ್ರಿ ಕೃಷ್ಣನಿಗೆ ಅಘ್ರ್ಯ ಪ್ರಧಾನ ವಿಧಿ ನಡೆಯಲಿದೆ. ಅಷ್ಟಮಿಗೆ ಇನ್ನಷ್ಟು ರಂಗು ನಾಳಿನ ವಿಟ್ಲಪಿಂಡಿ ಉತ್ಸವದಂದು ಬರಲಿದೆ. ನಾಳೆ ರಥೋತ್ಸವ ನಡೆಯಲಿದ್ದು ಈ ವೇಳೆ ಸ್ವಾಮೀಜಿಗಳು ಭಕ್ತರತ್ತ ಉಂಡೆ ಚಕ್ಕುಲಿ ಎಸೆಯಲಿದ್ದಾರೆ. ಮಾತ್ರವಲ್ಲ, ಸ್ವರ್ಣರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ವಿರಾಜಮಾನವಾಗಲಿದೆ. ಉಡುಪಿಯಲ್ಲಿ ಶಾಲೆಗಳಿಗೆ ರಜೆ ಇದ್ದ ಕಾರಣ ಇಂದು ಕೃಷ್ಣಮಠದಲ್ಲಿ ಭಕ್ತರ ನೂಕುನುಗ್ಗಲೇ ಕಂಡುಬಂದಿತು.