ಕೃಷ್ಣಮಠದಲ್ಲಿ ಕನ್ನಡ ನಾಮಫಲಕ ಮಾಯ: ವಿವಾದದ ನಿಜವಾದ ಕಾರಣವೇನು?
ಉಡುಪಿ, ಡಿಸೆಂಬರ್ 01: ಉಡುಪಿ ಶ್ರೀಕೃಷ್ಣಮಠದ ಮುಖ್ಯ ಪ್ರವೇಶದ್ವಾರದಲ್ಲಿ ಕನ್ನಡದ ನಾಮಫಲಕ ತೆಗೆದು ತುಳು ಮತ್ತು ಸಂಸ್ಕೃತದ ನಾಮಫಲಕ ಹಾಕಿದ್ದರ ಬಗ್ಗೆ ಉಡುಪಿಯಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ. ಹಿಂದಿನಿಂದಲೂ ಕೃಷ್ಣಮಠದ ಪ್ರಧಾನ ನಾಮಫಲಕ ಕನ್ನಡದಲ್ಲಿ ಇತ್ತು. ಆದರೆ ಏಕಾಏಕಿ ಎರಡು ದಿನಗಳ ಹಿಂದೆ ಕನ್ನಡ ನಾಮಫಲಕ ಮಾಯವಾಗಿದೆ. ಇಷ್ಟು ವರ್ಷ ಇದ್ದ ಕನ್ನಡ ನಾಮಫಲಕ ತೆಗೆದು ತುಳು ಮತ್ತು ಸಂಸ್ಕೃತ ನಾಮಫಲಕ ಅಳವಡಿಸುವ ಹಿಂದಿನ ಉದ್ದೇಶವಾದರೂ ಏನು?
ಇಂದು ತುಳು ಮತ್ತು ಸಂಸ್ಕೃತದಲ್ಲಿ ಕೃಷ್ಣಮಠ ಎಂದು ಬರೆಯಲಾಗಿರುವ ಬೋರ್ಡನ್ನು ಕಂಡ ಭಕ್ತರು ಮತ್ತು ಕನ್ನಡಾಭಿಮಾನಿಗಳು ಏಕಾಏಕಿ ಅಸಮಾಧಾನಕ್ಕೆ ಒಳಗಾಗಿದ್ದಾರೆ. ಜೊತೆಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಮಾತನಾಡಿ ಇದು ಸರಕಾರದ ನಿಯಮದ ಸ್ಪಷ್ಟ ಉಲ್ಲಂಘನೆ ಇದನ್ನು ಒಪ್ಪಲು ಸಾಧ್ಯವಿಲ್ಲ, ಮಠದ ವಿರುದ್ಧ ಹೋರಾಟ ಅನಿವಾರ್ಯ ಎಂಬ ಮಾತನ್ನು ಕೂಡ ಸ್ಪಷ್ಟವಾಗಿ ಹೇಳಿದ್ದರು. ಇದೇ ಹೊತ್ತಿಗೆ ನಾಮಫಲಕ ವಿವಾದಕ್ಕೆ ಸಂಬಂಧಪಟ್ಟಂತೆ ಮಠದ ಮೂಲಗಳಿಂದ ಸ್ಪಷ್ಟನೆಗಳು ಬಂದಿವೆ.
ಉಡುಪಿಯ ಕೃಷ್ಣ ಮಠದಲ್ಲಿ ಕನ್ನಡ ಮಾಯ! ಏಕಾಏಕಿ ಬದಲಾಯಿತೇಕೆ ಫಲಕ?
ಫಲಕ ಬದಲಾವಣೆ ಕುರಿತು ಮಠದ ಸ್ಪಷ್ಟನೆ
ಪ್ಲಾಸ್ಟಿಕ್ ನಿಷೇಧ ಆಗಿದ್ದರಿಂದ ಮರದ ಫಲಕವನ್ನು ಅಳವಡಿಸಲು ಮಠವು ನಿರ್ಧರಿಸಿದೆ. ಹೀಗಾಗಿ ಹಳೆಯ ಪ್ಲಾಸ್ಟಿಕ್ ಬೋರ್ಡ್ ಕಿತ್ತುಹಾಕಿ ಕನ್ನಡ ತುಳು ಮತ್ತು ಸಂಸ್ಕೃತ ಭಾಷೆಯಲ್ಲಿ ಬೇರೆ ನಾಮಫಲಕ ಅಳವಡಿಸುವ ನಿರ್ಧಾರ ಮಾಡಲಾಗಿದೆ. ಮೊದಲ ಹಂತದಲ್ಲಿ ಸಂಸ್ಕೃತ ಮತ್ತು ತುಳುವಿನ ನಾಮಫಲಕ ಸಿದ್ಧಗೊಂಡಿತ್ತು. ಕನ್ನಡ ನಾಮಫಲಕದ ಮರದ ಕೆತ್ತನೆ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಕೃಷ್ಣಮಠದಲ್ಲಿ ಲಕ್ಷದೀಪೋತ್ಸವ ನಡೆಯುತ್ತಿರುವುದರಿಂದ ಮರದ ಕೆತ್ತನೆಯನ್ನು ಹೊಂದಿದ ಕನ್ನಡ ನಾಮಫಲಕವನ್ನು ಅಳವಡಿಸಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ಕನ್ನಡ ನಾಮಫಲಕವನ್ನು ಕೂಡ ಅಳವಡಿಸಲಾಗುವುದು ಎಂದು ಮಠದ ಮೂಲಗಳು ಸ್ಪಷ್ಟಪಡಿಸಿವೆ.
"ಕನ್ನಡ ಕಡೆಗಣಿಸುವ ಪ್ರಶ್ನೆ ಇಲ್ಲ"
ಈ ಸಂಬಂಧ ಮಾತನಾಡಿರುವ ಬೋರ್ಡ್ ಅಳವಡಿಕೆ ಉಸ್ತುವಾರಿ ಕಲಾವಿದ ಪುರುಷೋತ್ತಮ ಅಡ್ವೆ, ಹಳೆ ಬೋರ್ಡನ್ನು ತೆಗೆದಿದ್ದೇವೆ. ಕನ್ನಡದ ಮರದ ಬೋರ್ಡನ್ನು ಸದ್ಯದಲ್ಲಿ ಹಾಕಲಿದ್ದೇವೆ. ಮೊದಲ ಹಂತದಲ್ಲಿ ಸಂಸ್ಕೃತ ಮತ್ತು ತುಳು ಭಾಷೆಯ ಬೋರ್ಡ್ ಸಿದ್ಧಗೊಂಡಿದ್ದರಿಂದ ಅದನ್ನು ಅಳವಡಿಸಿದ್ದೇವೆ. ಕನ್ನಡವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮರದ ಕೆತ್ತನೆ ಕಾರ್ಯ ಪೂರ್ಣಗೊಂಡ ಬಳಿಕ ಕನ್ನಡ ಬೋರ್ಡನ್ನು ಅಳವಡಿಸುತ್ತೇವೆ ಎಂದಿದ್ದಾರೆ.
ಕೆಲವೇ ದಿನಗಳಲ್ಲಿ ಕನ್ನಡ ಫಲಕ ಅಳವಡಿಸುವ ಭರವಸೆ
ರಾಜ್ಯಾದ್ಯಂತ ಕನ್ನಡಪರ ಹೋರಾಟಗಳು ನಡೆಯುತ್ತಿರುವ ಹೊತ್ತಿಗೆ ಮತ್ತು ಸರಕಾರ ಕೂಡ ಈಚೆಗೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ಕೆಲವೇ ದಿನಗಳಲ್ಲಿ ನಡೆದ ಈ ಬೆಳವಣಿಗೆಯಿಂದ ಕನ್ನಡಾಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗುವುದು ಸಹಜ. ಇದೀಗ ಕೃಷ್ಣಮಠದ ಆಡಳಿತ ಮಂಡಳಿ ಜನರ ಆಕ್ರೋಶದಿಂದ ಎಚ್ಚೆತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಭರವಸೆ ನೀಡಿದೆ.
"ತುಳು-ಕನ್ನಡ ಭಾಷಿಕರ ನಡುವೆ ಜಗಳ ಹಚ್ಚುವ ಕೆಲಸ"
ಕೃಷ್ಣ ಮಠದಲ್ಲಿ ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಅಳವಡಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕನ್ನಡ ಫಲಕ ಅಳವಡಿಸದ ಕುರಿತು ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಗೊಂಡಿದೆ. ಕರ್ನಾಟಕದಲ್ಲಿ ಹಿಂದಿ ಬೋರ್ಡ್ ಗಳು ಬೇಡ ಎಂದಿದ್ದಕ್ಕೆ ಕನ್ನಡ ಮತ್ತು ತುಳುವರ ನಡುವೆ ತಂದಿಡುವ ಮತ್ತೊಂದು ಯತ್ನ ಇದಾಗಿದೆ. ಉಡುಪಿಯ ಪೇಜಾವರ ಶ್ರೀಗಳು ಅಪ್ಪಟ ಕನ್ನಡ ಮತ್ತು ತುಳು ಪ್ರೀತಿಸುತ್ತಿದ್ದರು. ಈ ಅನ್ಯಾಯ ಆಗಲು ಅವರು ಖಂಡಿತಾ ಬಿಡುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮಠಕ್ಕೂ ಕನ್ನಡಕ್ಕೂ ನೂರಾರು ವರ್ಷಗಳ ನಂಟಿದೆ. ಈಗ ಏಕಾಏಕಿ ಕನ್ನಡವನ್ನು ತೆಗೆದುಹಾಕಿರೋದು ಇಲ್ಲದೇ ಇರೋ ಒಡಕನ್ನು ಹುಟ್ಟುಹಾಕೋದಕ್ಕೆ ಅಂತ ಅನ್ನಿಸ್ತಿದೆ. ಇಂತಹ ಒಡಕನ್ನು ಬುಡದಲ್ಲೇ ಚಿವುಟಿ ಹಾಕೋದು ಒಳ್ಳೆಯದು ಎಂದಿದ್ದಾರೆ. ತುಳು-ಕನ್ನಡ ಭಾಷಿಕರ ನಡುವೆ ಜಗಳ ಹಚ್ಚುವ ಕೆಲಸ ಇದು ಎಂದು ಕೆಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ.