ಕೃಷ್ಣನೂರಲ್ಲಿ ಇಂದು ಭಣಭಣ: ಅಷ್ಟಮಿ ಆಚರಣೆ ಮುಂದಿನ ತಿಂಗಳು
ಉಡುಪಿ, ಆಗಸ್ಟ್ 11: ನಾಡಿನಾದ್ಯಂತ ಇಂದು ಕೃಷ್ಣ ಜನ್ಮಾಷ್ಟಮಿ ಆಚರಣೆ ಸಡಗರದಿಂದ ಸಾಗುತ್ತಿದೆ. ಆದರೆ ಕೃಷ್ಣನೂರು ಉಡುಪಿ ಮಾತ್ರ ಇಂದು ಭಣಗುಡುತ್ತಿದೆ.
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವೈಭವದ ಕೃಷ್ಣಜನ್ಮಾಷ್ಟಮಿ ಆಚರಣೆಗೆ ನಿರ್ಬಂಧ ಹೇರಲಾಗಿದೆ. ಆದರೆ ಕೃಷ್ಣಮಠದಲ್ಲಿ ಆಚರಣೆ ಇಲ್ಲದಿರುವುದಕ್ಕೆ ಬೇರೆಯೇ ಕಾರಣ ಇದೆ. ಇಂದು ನಡೆಯುತ್ತಿರುವುದು ಚಂದ್ರಮಾನ ಅಷ್ಟಮಿ. ಮುಂದಿನ ತಿಂಗಳು 10ರಂದು ಸೌರಮಾನ ಪಂಚಾಂಗದ ಪ್ರಕಾರ ಅಷ್ಟಮಿ ನಡೆಯಲಿದೆ. ಹೀಗಾಗಿ ಮುಂದಿನ ತಿಂಗಳು ಹನ್ನೊಂದಕ್ಕೆ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ.
ಶ್ರೀಕೃಷ್ಣನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು
ಕೃಷ್ಣಮಠದಲ್ಲಿ ಹಿಂದಿನಿಂದಲೂ ಸೌರಮಾನ ಪಂಚಾಂಗ ಅನುಸರಣೆ ಮಾಡಲಾಗುತ್ತಿದೆ. ಹೀಗಾಗಿ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಂದು ಅಷ್ಟಮಿ ಆಚರಣೆ ಇಲ್ಲ, ಬದಲಾಗಿ ಸೌರಮಾನ ಪಂಚಾಂಗದ ಪ್ರಕಾರ ಕೃಷ್ಣಮಠದಲ್ಲಿ ಸೆಪ್ಟೆಂಬರ್ 10ರಂದು ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಸೆಪ್ಟೆಂಬರ್ 10ರಂದು ಮಧ್ಯರಾತ್ರಿ 12.15 ಗಂಟೆಗೆ ಚಂದ್ರೋದಯ ಸಮಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಸೆ. 11 ರಂದು ಶ್ರೀಕೃಷ್ಣ ಲೀಲೋತ್ಸವ ನಡೆಸಲಾಗುತ್ತದೆ.