ಚುನಾವಣೆಯಲ್ಲಿ ಗೆಲ್ಲಲು ನನ್ನ ಬಳಿ ಕಾಸಿಲ್ಲ ಆದ್ರೆ ಕನಸಿದೆ: ಉಪ್ಪಿ
ಉಡುಪಿ, ಡಿಸೆಂಬರ್ 7 : "ಬೆಕ್ಕಿಗೆ ಗಂಟೆ ಕಟ್ಟಿದ್ದೇನೆ ಗಂಟೆ ಬಾರಿಸುವ ಜನ ಬೇಕಾಗಿದೆ" ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸಂಸ್ಥಾಪಕ ನಟ ಉಪೇಂದ್ರ ತಮ್ಮ ಪಕ್ಷ ಸೇರಲು ಕರೆ ನೀಡಿದ್ದಾರೆ.
ಉಪೇಂದ್ರ ಕೆಪಿಜೆಪಿಗೆ 224 ಮಂದಿ ಸಿಎಂ ಬೇಕಿದ್ದಾರೆ
ಕೆಪಿಜೆಪಿ ಪ್ರಚಾರದ ಸಲುವಾಗಿ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ, "ನರೇಂದ್ರ ಮೋದಿಯೊಬ್ಬರಿಂದ ಬದಲಾವಣೆ ಸಾಧ್ಯವಿಲ್ಲ, ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ. ನಾನು ಪ್ರಾಕ್ಟಿಕಲ್ ಇಲ್ಲ ಅಂತ ಜನ ನಗುತ್ತಿದ್ದಾರೆ. ಆದರೆ ಪ್ರಜೆಗಳು ಮಾತನಾಡುವ ಕಾಲ ಬಂದಿದೆ. ಎಂಎಲ್ ಎ ಸೀಟು ಗೆಲ್ಲಲು 50 ಕೋಟಿ ಬೇಕಂತೆ. ನನ್ನ ಬಳಿ ಕಾಸಿಲ್ಲ ಆದರೆ ಕನಸಿದೆ" ಎಂದು ತಿಳಿಸಿದರು.
ದೇಶದಲ್ಲಿ ಸತ್ಯ ಸಾಯಲ್ಲ- ಸತ್ಯನೇ ಗೆಲ್ಲೋದು ಎಂದು ಹೇಳಿದ ಅವರು ಹಣ ಇಲ್ಲದಿದ್ದರೂ ಸ್ಮಾರ್ಟ್ ಆಗಿ ನಾನು ಪಕ್ಷ ಬಲಪಡಿಸುತ್ತೇನೆ. ಆಪ್ ಪಾರ್ಟಿ ಪಾರ್ಟಿ ಫಂಡ್ ನಿಂದ ಹಾಳಾಯ್ತು. ಅಣ್ಣಾ ಹಜಾರೆ ಬೆಂಬಲ ಕೇಜ್ರಿವಾಲ್ ಗೆ ಇತ್ತು. ಆದರೆ, ಅರವಿಂದ ಕೇಜ್ರಿವಾಲ್ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು .
ನನಗೆ ರಾಷ್ಟೀಯ ಪಕ್ಷಗಳಿಂದ ಪಕ್ಷ ಸೇರಲು ಬೇಡಿಕೆ ಬಂದಿದೆ. 15 ವರ್ಷಗಳಿಂದ ಆಹ್ವಾನ ಬರ್ತಾನೇ ಇದೆ. ನನ್ನ ಕಲ್ಪನೆ ಅವರ ಜೊತೆ ಹೊಂದಾಣಿಕೆಯಾಗುತ್ತಿಲ್ಲ. ನನಗೆ ಈವರೆಗೆ 50 ಸಾವಿರ ಇ ಮೇಲ್ ಬಂದಿದೆ. 30 ಸಾವಿರ ಮಂದಿ ಕ್ರಿಯಾಶೀಲ ಜನ ನನ್ನ ಜೊತೆಗಿದ್ದಾರೆ. ಆತ್ಮತೃಪ್ತಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.