ಹೆಚ್ಚುವರಿ ಮಾಹಿತಿ ಕೇಳಿದರೆ ವರದಿ ವಾಪಸ್ ಅಂತಲ್ಲ; ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಅಕ್ಟೋಬರ್ 4: "ಕೇಂದ್ರ ಸರ್ಕಾರ ನಮ್ಮ ವರದಿ ತಿರಸ್ಕರಿಸಿಲ್ಲ, ಹೆಚ್ಚುವರಿ ಮಾಹಿತಿ ಕೇಳಿರಬಹುದು. ಮಾಹಿತಿ ಕೇಳಿದೆ ಅಂದರೆ ವಾಪಸ್ ವರದಿ ಕಳಿಸಿದೆ ಎಂದರ್ಥವಲ್ಲ. ಕೇಂದ್ರ ಮಾಹಿತಿ ಕೇಳಿದೆ ಅಂದರೆ ಹಣ ಕೊಡಲು ನಿರ್ಧಾರ ಮಾಡಿದೆ ಎಂದರ್ಥ" ಎಂದು ರಾಜ್ಯ ಸಿದ್ಧಪಡಿಸಿದ ನಷ್ಟದ ವರದಿಯ ನಿರಾಕರಣೆ ವಿಚಾರವಾಗಿ ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು.
"ನೆರೆಯಿಂದಾಗಿ ಅಪಾರ ಪ್ರಮಾಣದ ಮನೆಗಳಿಗೆ ಹಾನಿಯಾಗಿದೆ. ಅರ್ಧಂಭರ್ದ ಬಿದ್ದ ಮನೆಗಳಲ್ಲಿ ವಾಸಿಸಲು ಅಸಾಧ್ಯವಾಗಿದೆ. ಹಾಗಾಗಿ ಕೆಲವೊಂದು ಅಂಕಿ ಅಂಶಗಳ ಬಗ್ಗೆ ಮಾಹಿತಿ ಕೇಳಿರಬಹುದು. ಮುರ್ನಾಲ್ಕು ದಿನಗಳಲ್ಲಿ ಗರಿಷ್ಠ ಮೊತ್ತದ ಹಣ ರಾಜ್ಯಕ್ಕೆ ಬರುತ್ತದೆ. ಎಲ್ಲಾ ಗೊಂದಲಗಳು ಶೀಘ್ರ ಬಗೆಹರಿಯುತ್ತದೆ" ಎಂದು ಭರವಸೆ ನೀಡಿದರು.
ಕೋಟ ಶ್ರೀನಿವಾಸ್ ಪೂಜಾರಿಗೆ ಜಿಲ್ಲೆಯ ಶಾಸಕರೇ ಅಡ್ಡಗಾಲು: ಬಿಲ್ಲವ ಮುಖಂಡರ ಆಕ್ರೋಶ
"ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ಬಹುದೊಡ್ಡ ದುರಂತಗಳು ನಡೆದಾಗ ಹಣ ಎಷ್ಟಿದ್ದರೂ ಬೇಕು ಅನಿಸುತ್ತೆ. ಇದರರ್ಥ ಹಣಕಾಸಿನ ಕೊರತೆ ಇದೆ ಎಂದಲ್ಲ. ಯಡಿಯೂರಪ್ಪನವರು ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳಿಲ್ಲ. ರಸ್ತೆ, ನೀರಾವರಿ ಯೋಜನೆಗಳಿಗೆ ದೊಡ್ಡ ಮೊತ್ತದ ಹಣ ಕೇಳಿರುತ್ತಾರೆ. ನೆರೆ ಎದುರಿಸಬೇಕಾದ ಕಾರಣ ಸದ್ಯ ತರಾತುರಿ ಬೇಡ ಎಂದು ಸಿಎಂ ಹೇಳಿರುತ್ತಾರೆ ಅಷ್ಟೆ" ಎಂದರು.
ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೋಟ ಶ್ರೀನಿವಾಸ್
ಸಿದ್ದರಾಮಯ್ಯ ಅವರ ಟೀಕೆಗೆ ಉತ್ತರಿಸುತ್ತಾ, "ವಿಪಕ್ಷದಲ್ಲಿ ಇರುವುದರಿಂದ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಾರೆ. ಸಿದ್ದರಾಮಯ್ಯನ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತೇವೆ. ಅವರ ಅಭಿಪ್ರಾಯವನ್ನು ಗೌರವಿಸುತ್ತೇವೆ. ವಿಧಾನಸಭೆ ವಿಪಕ್ಷ ನಾಯಕ ಆಯ್ಕೆ ವಿಚಾರದಲ್ಲಿ ಅವರಿಗಿರುವ ಆತಂಕ ಅವರೇ ಸರಿಪಡಿಸಿಕೊಳ್ಳಬೇಕು. ಕಾಂಗ್ರೆಸ್ ನಲ್ಲಿ ನಾಯಕತ್ವ ಕೊರತೆ ಜಠಿಲವಾಗಿದೆ. ಅವರ ಸಮಸ್ಯೆಗಳನ್ನು ಶೀಘ್ರ ಪರಿಹಾರಪಡಿಸಿಕೊಳ್ಳಲಿ" ಎಂದು ವ್ಯಂಗ್ಯ ಮಾಡಿದರು.