ಹರಿಪ್ರಸಾದ್ ಪುಲ್ವಾಮಾ ಮ್ಯಾಚ್ ಫಿಕ್ಸಿಂಗ್ ಹೇಳಿಕೆಗೆ ಶ್ರೀನಿವಾಸ ಪೂಜಾರಿ ಆಕ್ರೋಶ
ಉಡುಪಿ, ಮಾರ್ಚ್ 08: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪುಲ್ವಾಮಾ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಮ್ಯಾಚ್ ಫಿಕ್ಸಿಂಗ್ ಹೇಳಿಕೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಹರಿಪ್ರಸಾದ್ ಅವರ ಈ ವಿವಾದಿತ ಹೇಳಿಕೆ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಕೆ ಹರಿಪ್ರಸಾದ್ ನೇರ ನಡೆ ನುಡಿಯ ವ್ಯಕ್ತಿ ಎಂದು ನಾನಂದುಕೊಂಡಿದ್ದೆ. ಆದರೆ ಅವರ ಬಾಯಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಪುಲ್ವಾಮಾ 'ಮ್ಯಾಚ್ ಫಿಕ್ಸಿಂಗ್': ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ವಿವಾದಕಾರಿ ಹೇಳಿಕೆ
ಸೈನಿಕರು ರಕ್ತ ತರ್ಪಣೆ ಮಾಡಿ, ಪಾಕ್ ಪ್ರೇರಿತ ಭಯೋತ್ಪಾದಕರನ್ನು ಧೂಳಿಪಟ ಮಾಡಿದ ಬಗ್ಗೆ ಹೆಮ್ಮೆ ಪಡಬೇಕೆ ಹೊರತು, ಮೋದಿ ಅವರ ಮೇಲಿನ ದ್ವೇಷದಿಂದ ಸೈನಿಕರಿಗೆ ಅಪಮಾನ ಮಾಡಬಾರದಿತ್ತು. ಕಸಬ್ ತಂಡದ ಮುಂಬೈ ದಾಳಿಯೂ ಸೇರಿದಂತೆ ಕಾಂಗ್ರೆಸ್ ಕಾಲದಲ್ಲಿ ನಡೆದದ್ದೆಲ್ಲಾ ಮ್ಯಾಚ್ ಫಿಕ್ಸಿಂಗಾ? ಎಂದು ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದ ಪ್ರಶ್ನೆ ಬಂದಾಗ ಜನರಿಗೆ ಅಸಹ್ಯ ಹುಟ್ಟಿಸುವ ಮಾತನಾಡಬಾರದು. ಇದು ಕಾಂಗ್ರೆಸ್ ಮುಖಂಡರಿಗೆ ಅರ್ಥವಾಗಬೇಕು ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲೂ ಶ್ರೀನಿವಾಸ್ ಪೂಜಾರಿ ಬರೆದುಕೊಂಡಿದ್ದಾರೆ.