ತೀವ್ರ ಜ್ವರದಿಂದ ಬಳಲುತ್ತಿದ್ದ ಕೊಲ್ಲೂರು ದೇವಳದ ಆನೆ ಇಂದಿರಾ ಸಾವು
ಉಡುಪಿ, ಆಗಸ್ಟ್ 14: ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಕ್ಷೇತ್ರ ಶ್ರೀ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 22 ವರ್ಷಗಳಿಂದ ಸೇವೆಯಲ್ಲಿದ್ದ ಆನೆ ಇಂದಿರಾ (62) ನಿನ್ನೆ ರಾತ್ರಿ ಅಸುನೀಗಿದೆ. ಹಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಇಂದಿರಾ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದೆ.
ಜ್ಯೋತಿಷಿ ಸಲಹೆಯಂತೆ ಕೊಲ್ಲೂರಿನಲ್ಲಿ ಶ್ರೀಲಂಕಾ ಪ್ರಧಾನಿ ವಿಶೇಷ ಪೂಜೆ!
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಮಂಗಳವಾರ ಬೆಳಿಗ್ಗೆ ನಿತ್ರಾಣಗೊಂಡು ಕುಸಿದು ಬಿದ್ದಿತ್ತು. ಬಳಿಕ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ರಾತ್ರಿ ಮೃತಪಟ್ಟಿದೆ. ತೀವ್ರ ಜ್ವರ ಮಿದುಳಿಗೆ ಏರಿದ ಕಾರಣ ಆನೆ ಸಾವಿಗೀಡಾಗಿರಬಹುದು ಎಂದು ಪಶು ವೈದ್ಯರು ತಿಳಿಸಿದ್ದಾರೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಕೇರಳ ಮೂಲದ ಟಿಂಬರ್ ಮರ್ಚೆಂಟ್ ಒಬ್ಬರು ದಾನವಾಗಿ ನೀಡಿದ್ದ ಆನೆ ಇದಾಗಿದ್ದು, ಆನೆಯನ್ನು ಬಾಳೆಹೊನ್ನೂರಿನಿಂದ ಕರೆತರಲಾಗಿತ್ತು. ಇಂದಿರಾಗೆ 62 ವರ್ಷ ವಯಸ್ಸಾಗಿತ್ತು, ಕಳೆದ 22 ವರ್ಷದಿಂದ ಮೂಕಾಂಬಿಕೆ ದೇವಿಯ ಸೇವೆಯಲ್ಲಿತ್ತು. ಭಕ್ತರಿಗೆ ಮಾತ್ರವಲ್ಲದೇ ಊರಿನವರಿಗೂ ಆನೆ ಪ್ರೀತಿ ಪಾತ್ರವಾಗಿತ್ತು.