ಪ್ರೇಮ ಪ್ರಕರಣ, ಕೊಲ್ಲೂರು ಠಾಣೆ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು
ಉಡುಪಿ, ಫೆಬ್ರವರಿ 5: ಪೊಲೀಸ್ ಸಿಬ್ಬಂದಿಗಳಿಬ್ಬರ ಪ್ರೇಮ ಪ್ರಕರಣ ಆತ್ಮಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಪೊಲೀಸ್ ಸಿಬ್ಬಂದಿ ನಾಗರಾಜ್ (27) ಎಂದು ಗುರುತಿಸಲಾಗಿದೆ.
ನಾಗರಾಜ್ ಮೂಲತಃ ದಾವಣಗೆರೆಯ ಮಲೆಬೆನ್ನೂರು ಹಿಡನಗಟ್ಟದವರು. ಕಳೆದ 2 ವರ್ಷಗಳಿಂದ ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇಂದು ಏಕಾಏಕಿ ನಾಗರಾಜ್ ಕೊಲ್ಲೂರು ಸೌಪರ್ಣಿಕ ವಸತಿಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯಗೆ ಶರಣಾದ ನಾಗರಾಜ್ ಹಾಗು ಕೊಲ್ಲೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ರೇಷ್ಮಾ ಎಂಬವರ ನಡುವೆ ಪ್ರೇಮಾಂಕುರವಾಗಿತ್ತು. ನಾಗರಾಜ್ ಹಾಗೂ ರೇಷ್ಮಾ ಇಬ್ಬರೂ ಒಂದೇ ಪೊಲೀಸ್ ಬ್ಯಾಚ್ ನ ಸಿಬ್ಬಂದಿಗಳಾಗಿದ್ದರು. ಆದರೆ ಈ ಜೋಡಿ ಮಧ್ಯೆ ಇತ್ತೀಚೆಗೆ ಜಗಳ ನಡೆದಿತ್ತು. ಈ ವಿರಸವೇ ನಾಗರಾಜ್ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.
ನಾಗರಾಜ್ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ರೇಷ್ಮಾ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಸಹ ಪೊಲೀಸರು ರೇಷ್ಮಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಲಾಗಿದ್ದು ತನಿಖೆ ನಡೆಯುತ್ತಿದೆ.