ಕೊರೊನಾ ಭೀತಿ: ಕೊಲ್ಲೂರು ಭಕ್ತರ ಮೇಲೆ ನಿಗಾ
ಉಡುಪಿ, ಮಾರ್ಚ್ 12: ಕೊರೊನಾ ಭೀತಿ ಧಾರ್ಮಿಕ ಪುಣ್ಯಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇದೇ ತಿಂಗಳ 17 ರಂದು ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ರಥೋತ್ಸವ ನಡೆಯಲಿದ್ದು, ದೂರದ ಊರುಗಳಿಂದ ಬರುವ ಭಕ್ತರ ಮೇಲೆ ನಿಗಾ ಇಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಮುಖ್ಯವಾಗಿ ಕೊಲ್ಲೂರು ದೇವಸ್ಥಾನದ ರಥೋತ್ಸವ ಸಂದರ್ಭದಲ್ಲಿ ಕೇರಳದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೇರಳದಲ್ಲಿ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಶಂಕಿತ ವ್ಯಕ್ತಿಗಳು ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಮುಖ್ಯವಾಗಿ ಭಕ್ತರಲ್ಲಿ ಕೆಮ್ಮು, ಜ್ವರ, ಕಫ ಕಂಡುಬಂದರೆ ತಕ್ಷಣ ಮಾಹಿತಿ ನೀಡಬೇಕು. ಅವರ ಮೇಲೆ ನಿಗಾ ಇರಿಸುವುದರ ಜೊತೆಗೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.
ವಸತಿ ಗೃಹಗಳು ಮತ್ತು ದೇವಸ್ಥಾನದ ಆಸುಪಾಸಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಸೂಚಿಸಿದ್ದು, ಈಗಾಗಲೇ ಸಮುದ್ರ ತೀರ ಮತ್ತು ಮಣಿಪಾಲದ ಮಾಹೆ ಯೂನಿವರ್ಸಿಟಿ ಕ್ಯಾಂಪಸ್ ಗಳಲ್ಲಿ ಜಾಗೃತಿಗಾಗಿ ಫಲಕ, ಹೋರ್ಡಿಂಗ್ ಗಳನ್ನು ಅಳವಡಿಸಲಾಗಿದೆ.