ಕಡಲ ತೀರದ ಭಾರ್ಗವ ಕಾರಂತಜ್ಜನಿಗೆ ನುಡಿ ನಮನ
ಉಡುಪಿ, ಅಕ್ಟೋಬರ್ 10: ಮೂಕಜ್ಜಿಯ ಕನಸುಗಳ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದವರು ಡಾ. ಶಿವರಾಮ ಕಾರಂತರು. ಕಡಲ ತೀರದ ಭಾರ್ಗವ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಕಾರಂತರಿಗೆ ಇಂದು 116 ನೇ ಹುಟ್ಟು ಹಬ್ಬದ ಸಂಭ್ರಮ. ಕಾರಂತರು ನಮ್ಮನ್ನಗಲಿ ದಶಕಗಳೇ ಕಳೆದಿದೆ ಆದರೆ ಅವರ ಚಿಂತನೆ, ಬರಹ , ವ್ಯಕ್ತಿತ್ವ ಇಂದಿಗೂ ಚಿರಾಯುವಾಗಿದೆ.
ಕಾರಂತಜ್ಜ ಎಂಬ ವಿಸ್ಮಯಕ್ಕೆ ನುಡಿ ನಮನ
"ಚಿಗರೆಯಂತೆ ಜಿಗಿಯುತ್ತಾನೆ, ಬುಗುರಿಯಂತೆ ತಿರುಗುತ್ತಾನೆ, ದಿಸೆಯ ಬಾಚಿ ಹಿಂಡುತ್ತಾನೆ, ಕ್ರಾಂತಿ ಗಿಟ್ಟು ತೊಳೆಸುತ್ತಾನೆ " ಎಂದು ವಿ. ಸೀತರಾಮಯ್ಯನವರು ಪ್ರೀತಿಯಿಂದ ಕರೆಯುವ ಕಾರಂತರದ್ದು ನಿರೀಶ್ವರವಾದಿ ವ್ಯಕ್ತಿತ್ವ. ಯಾವುದೇ ಮುಲಾಜಿಗೆ ಬೀಳದೆ ನೇರ ನಿಷ್ಠುರವಾದಿ ತನಕ್ಕೆ ಕಾರಂತರು ಹೆಸರುವಾಸಿಯಾಗಿದ್ದರು.
ಕಡಲತೀರದ ಭಾರ್ಗವ ಶಿವರಾಮ ಕಾರಂತರ ಮಾತುಗಳಲ್ಲಿ...
ಸಾಹಿತಿಯಾಗಿ, ಕಲಾವಿದರಾಗಿ, ಹೃದಯವಂತ ಸಾಮಾಜಿಕ ಚಿಂತಕರಾಗಿದ್ದ ಕಾರಂತರದ್ದು ಬಹುಮುಖ ಪ್ರತಿಭೆ . ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ; ಒಂಟಿಸಲಗದಂತೆ ನಡೆದವರು.
ಗಾಂಧಿ ತತ್ವಕ್ಕೆ ಮಾರುಹೋದ ಕಾರಂತರು
ಉಡುಪಿಯ ಕುಂದಾಪುರ ತಾಲ್ಲೂಕಿನ ಸಮೀಪದ ಕೋಟಾದಲ್ಲಿ 1902 ರ ಅಕ್ಟೋಬರ್ 10 ರಂದು ಜನಿಸಿದ ಶಿವರಾಮ ಕಾರಂತರು ತಮ್ಮ ಯವ್ವನದಲ್ಲಿ ಗಾಂಧಿ ತತ್ವಕ್ಕೆ ಮಾರು ಹೋಗಿ ಹೋರಾಟಕ್ಕೆ ಧುಮುಕಿದರು.
ಶ್ರೇಷ್ಠ ಕಾದಂಬರಿಕಾರರಾದ ಕಾರಂತರು, ಕಲಾವಿದರಾಗಿ, ಅಲೆಮಾರಿಯಾಗಿ, ಪತ್ರಕರ್ತರಾಗಿ, ಪರಿಸರವಾದಿಯಾಗಿ, ಸಿನಿಮಾ ನಿರ್ಮಾಪಕರಾಗಿ, ನೃತ್ಯಪಟುವಾಗಿ, ಛಾಯಾಗ್ರಾಹಕರಾಗಿ ಹೀಗೆ ಸಾಹಿತ್ಯ ಸಾಂಸ್ಕೃತಿಯ ಹತ್ತು ಹಲವು ಪ್ರಕಾರಗಳಲ್ಲಿ ಕೈಯಾಡಿಸಿ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿ ಪಡೆದವರು.
ಪತ್ರಿಕೋದ್ಯಮದಲ್ಲೂ ಕೈಯಾಡಿಸಿದ್ದರು ಕಾರಂತಜ್ಜ
ಪತ್ರಿಕೋದ್ಯಮದಲ್ಲೂ ಕೈಯಾಡಿಸಿದ ಕಾರಂತಜ್ಜ ವಸಂತ, ವಿಚಾರ ವಾಣಿ ಪತ್ರಿಕೆ ನಡೆಸಿದರು. ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಪ್ರಶಂಸೆಗೂ ಟೀಕೆಗೂ ಗುರಿಯಾದರು.
ಸನ್ಯಾಸಿಯ ಬದುಕಿನೊಂದಿಗೆ ಆರಂಭಗೊಂಡು ಚೋಮನ ದುಡಿಯ ಮೂಲಕ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ತೋರಿಸುತ್ತಾ, ಮೂಕಜ್ಜಿಯ ಕನಸುಗಳನ್ನು ತೆರೆದಿಟ್ಟು ಮರಳಿ ಮಣ್ಣಿಗೆ ಜಾರಿದ ಕಾರಂತರು 44 ಕಾದಂಬರಿಗಳನ್ನು, 16 ನಾಟಕ , 3 ಕಥಾ ಸಂಕಲನ, 4 ಸಂಪುಟಗಳ ವಿಜ್ಞಾನ ಪ್ರಪಂಚ , ಸಿರಿಗನ್ನಡ ಅರ್ಥಕೋಶ , 6 ಪ್ರಬಂಧ , 5 ಆತ್ಮಕತೆ ಬರೆದರು .
ಮಕ್ಕಳೆಂದರೆ ಅಕ್ಕರೆ
ಕಾರಂತರಿಗೆ ಮಕ್ಕಳೆಂದರೆ ಅಕ್ಕರೆ. ಮಕ್ಕಳಿಗಾಗಿ ಅವರು 240 ಮಕ್ಕಳ ಪುಸ್ತಕ, ಪ್ರವಾಸ ಕಥನ, ಕಿರಿಯರ ವಿಶ್ವಕೋಶ, ಗೀತ ರೂಪಕ ಹೀಗೆ ಹತ್ತು ಹಲವಾರು ಕೃತಿಗಳನ್ನು ರಚಿಸಿದರು .
ಕೋಟ ಶಿವರಾಮ ಕಾರಂತ ಹುಟ್ಟೂರಿನಲ್ಲಿ ಕಾರಂತರ ನೆನಪಿಗಾಗಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಕೋಟ ಕಾರಂತ ಥೀಂ ಪಾರ್ಕ್ ನಲ್ಲಿ ಸಾಹಿತ್ಯಾಸಕ್ತರಿಗೆ ಪ್ರಿಯವಾದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯುವ ಮೂಲಕ ಪ್ರಸಿದ್ಧಿ ಪಡೆದಿದೆ.
ಶ್ರೀನಿವಾಸ ಪೂಜಾರಿಗಳ ಪರಿಶ್ರಮದ ಫಲ
ಕಾರಂತರ ಹುಟ್ಟೂರಾದ ಕೋಟ ತಟ್ಟು ಗ್ರಾಮದಲ್ಲಿ 2011 ರಲ್ಲಿ ಲೋಕಾಪರ್ಣೆಗೊಂಡ ಕೋಟ ಕಾರಂತ ಥೀಂ ಪಾರ್ಕ್ ನಿರ್ಮಾಣದ ಹಿಂದೆ ಕಾರಂತರ ಅಭಿಮಾನಿ, ವಿಧಾನ ಪರಿಷತ್ ಸದ್ಯಸ ಕೋಟ ಶ್ರೀನಿವಾಸ ಪೂಜಾರಿ ಕೆಲಸ ಮಾಡಿದ್ದಾರೆ. ಅವರ ಶ್ರಮದ ಪ್ರತಿರೋಪವಾಗಿ ಥೀಂ ಪಾರ್ಕ್ ಕೋಟಾದಲ್ಲಿ ತಲೆ ಎತ್ತಿ ನಿಂತಿದೆ.
ಇದೀಗ ಕಾರಂತ ಥೀಂ ಪಾರ್ಕ್ ನಲ್ಲಿ ಸುಮಾರು 15ಲಕ್ಷ ರೂ. ವೆಚ್ಚದಲ್ಲಿ ರಂಗವೇದಿಕೆ, ಪ್ರೇಕ್ಷಕರ ಗ್ಯಾಲರಿ, ನವೀಕರಣ ಕಾರ್ಯ ನಡೆಯುತ್ತಿದೆ. ಜತೆಗೆ ಸೆಲ್ಕೊ ಇಂಡಿಯಾದ ಡಾ. ಎಚ್. ಹರೀಶ್ ಹಂದೆ ನೇತೃತ್ವದಲ್ಲಿ 3.5ಲಕ್ಷ ರೂ. ವೆಚ್ಚದಲ್ಲಿ ಕಾರಂತ ಪಾರ್ಕ್ ನಲ್ಲಿ ಸಂಪೂರ್ಣ ಸೌರ ವಿದ್ಯುತ್ ಯೋಜನೆ ಜಾರಿಗೆ ತರಲಾಗಿದೆ.
ಕಾರಂತರ ನೆನಪುಗಳನ್ನು ಉಳಿಸುವ ಕೆಲಸ
ಒಂದಷ್ಟು ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾರಂತರ ಹುಟ್ಟೂರಿನಲ್ಲಿ ಅವರ ನೆನಪನ್ನು ಶಾಶ್ವತವಾಗಿ ಇಡುವ ಕೆಲಸ ನಡೆಯುತ್ತಿದೆ.
"ಅದ್ಭುತ ಸಾಹಿತಿಯಾದ ಕೋಟ ಶಿವರಾಮ ಕಾರಂತರು ನಮ್ಮೂರಿನವರು ಎಂಬ ಹೆಮ್ಮೆ ನಮಗಿದೆ. ಕೋಟತಟ್ಟು ಗ್ರಾಮ ಪಂಚಾಯತ್ ಮೂಲಕ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ," ಎನ್ನುತ್ತಾರೆ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು.