SSLC Result: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೈಂದೂರಿನ ಸುರಭಿ ಶೆಟ್ಟಿ
ಉಡುಪಿ, ಆಗಸ್ಟ್ 10: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸುರಭಿ ಎಸ್. ಶೆಟ್ಟಿಯು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.
Recommended Video
625ಕ್ಕೆ 624 ಅಂಕ ಗಳಿಸುವ ಮೂಲಕ ಸುರಭಿ ಶೆಟ್ಟಿ ಕಲಿತ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾಳೆ. ಸುರಭಿಯು ಬೈಂದೂರಿನ ಸಾಂದೀಪಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ.
ಎಸ್ಎಸ್ಎಲ್ಸಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುರಭಿ, 625ಕ್ಕೆ 625 ಅಂಕವನ್ನೂ ನಿರೀಕ್ಷೆ ಮಾಡಿದ್ದೆ. ಆದರೆ ಒಂದು ವಿಷಯದಲ್ಲಿ ಅಂಕ ಕಡಿಮೆ ಬಂದಿದೆ ಎಂದು ಹೇಳಿದಳು.
ಕಡಿಮೆ ಅಂಕ ಬಂದ ವಿಷಯವನ್ನು ಮರುಮೌಲ್ಯಮಾಪನಕ್ಕೆ ಕಳಿಸುವ ಯೋಚನೆ ಇದ್ದು, ಅದಕ್ಕೂ ಮುನ್ನ ಶಿಕ್ಷಕರ ಸಲಹೆಯನ್ನು ಪಡೆಯುತ್ತೇನೆ. ಈ ಸಾಧನೆಯಿಂದ ಬಹಳ ಖುಷಿಯಾಗಿದೆ ಎಂದು ತಿಳಿಸಿದಳು.
ಈ ಸಂದರ್ಭದಲ್ಲಿ ನನ್ನ ಹೆತ್ತವರು ಮತ್ತು ಶಿಕ್ಷಕರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಮುಖ್ಯವಾಗಿ ನನ್ನ ಸ್ನೇಹಿತೆಗೆ ಧನ್ಯವಾದ ಹೇಳಲೇಬೇಕು. ಲಾಕ್ ಡೌನ್ ಸಮಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಎಕ್ಸ್ ಚೇಂಜ್ ಮಾಡಿ ನಾನು ಮತ್ತು ಸ್ನೇಹಿತೆ ಒಟ್ಟಿಗೇ ಅಭ್ಯಾಸ ಮಾಡಿದ್ದೇವೆ. ನನ್ನ ಸಾಧನೆಯಲ್ಲಿ ಮುಖ್ಯೋಪಾಧ್ಯಾಯರ ಪಾಲು ಹೆಚ್ಚು ಇದೆ ಎಂದು ಪ್ರತಿಕ್ರಿಯೆ ನೀಡಿದಳು.
625ಕ್ಕೆ 623 ಅಂಕ ಪಡೆದ ಕೋಲಾರದ ವಿದ್ಯಾರ್ಥಿನಿ
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಕೋಲಾರದ ಚಿನ್ಮಯಿ ಶಾಲೆಯ ವಿದ್ಯಾರ್ಥಿನಿ ರಚನಾ.ಕೆ 625ಕ್ಕೆ 623 ಅಂಕ ಪಡೆದಿದ್ದಾಳೆ. ತಂದೆ ಕೃಷ್ಣಪ್ಪ ಕೆ.ಎಸ್.ಆರ್.ಟಿ.ಸಿ ನಿರ್ವಾಹಕನಾಗಿದ್ದು, ತಾಯಿ ಗೀತಾ ಗೃಹಿಣಿಯಾಗಿದ್ದಾರೆ. ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಓದುತ್ತಿದ್ದ ವಿದ್ಯಾರ್ಥಿನಿ ರಚನಾ, ಮುಂದೆ ವೈದ್ಯೆ ಆಗಲು ಕನಸು ಕಟ್ಟಿಕೊಂಡಿದ್ದಾಳೆ.