ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ ಶೀರೂರು ಶ್ರೀ, ಕಾಪುವಿನಲ್ಲಿ ಅನುಪಮಾ
Recommended Video
ಉಡುಪಿ, ಏಪ್ರಿಲ್ 21 : ಪಕ್ಷೇತರ ಅಭ್ಯರ್ಥಿಯಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಕಣಕ್ಕೆ ಧುಮುಕಿರುವುದರಿಂದ ಉಡುಪಿ ವಿಧಾನಸಭೆ ಕ್ಷೇತ್ರ ರಂಗೇರಿದೆ.
ಇವತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳು ಉಮೇದುವಾರಿಕೆ ಸಲ್ಲಿಸಿದರು. ಮಧ್ಯಾಹ್ನ ಹನ್ನೆರಡೂವರೆ ಗಂಟೆ ಸುಮಾರಿಗೆ ತಾಲೂಕು ಕಚೇರಿಗೆ ಆಗಮಿಸಿದ ಶ್ರೀಗಳು ಚುನಾವಾಧಿಕಾರಿಗಳಿಗೆ ನಾಮಪತ್ರ ನೀಡಿದರು.
ಇದಕ್ಕೂ ಮುನ್ನ ಶ್ರೀಗಳು ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶೀರೂರು ಶ್ರೀಗಳು, ಅಲ್ಲಿಂದ ನೇರ ನಾಮಪತ್ರ ಸಲ್ಲಿಸಲು ಆಗಮಿಸಿದರು.
ಈ ವೇಳೆ ಮಾತನಾಡಿದ ಅವರು, ನಾನು ಪಕ್ಷೇತರನಾಗಿ ನಾಮಪತ್ರ ಸಲ್ಲಿಸ್ತಿದ್ದೇನೆ. ಈಗಾಗಲೇ ಪ್ರಚಾರ ಶುರು ಮಾಡಿದ್ದೇನೆ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಅಂದರು.
ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ. ಆದ್ರೆ ಮೋದಿ ಅಥವಾ ಅಮಿತ್ ಶಾ ಮನವೊಲಿಸಿದ್ರೆ ಈ ಕುರಿತು ಚಿಂತನೆ ನಡೆಸುತ್ತೇನೆ. ಪಕ್ಷೇತರನಾಗಿ ಗೆದ್ದರೆ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡ್ತೇನೆ ಅಂತ ಪ್ರತಿಕ್ರಿಯೆ ನೀಡಿದ್ರು.
ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮನವಿ : ರಘುಪತಿ ಭಟ್
ಶೀರೂರು ಶ್ರೀಗಳ ಆಶೀರ್ವಾದ ಪಡೆಯುತ್ತೇನೆ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ವಿನಂತಿ ಮಾಡುತ್ತೇನೆ ಎಂದು ಉಡುಪಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಘುಪತಿ ಭಟ್, ಶೀರೂರು ಸ್ವಾಮೀಜಿಗಳು ನಾಮಪತ್ರ ಸಲ್ಲಿಸಿದರೂ, ಹಿಂಪಡೆಯುವ ಅವಕಾಶ ಇದ್ದೇ ಇದೆ. ಕೃಷ್ಣಮಠದ ಸಮಸ್ಯೆಗೆ ಗಟ್ಟಿಯಾಗಿ ನಿಂತಿದ್ದು ಬಿಜೆಪಿ. ಕನಕ ಗೋಪುರ ಗಲಾಟೆ ಸಂದರ್ಭದಲ್ಲೂ ಬಿಜೆಪಿ ಮಠದ ಪರವಾಗಿತ್ತು. ಈ ವಿಷಯ ಶೀರೂರು ಶ್ರೀಗಳಿಗೂ ತಿಳಿದಿದೆ ಎಂದರು.
ಉಡುಪಿಯ ಜನತೆ ಬುದ್ಧಿವಂತರು, ಶೀರೂರು ಶ್ರೀಗಳ ಸ್ಪರ್ಧೆಯಿಂದ ಪ್ರಮೋದ್ ಮಧ್ವರಾಜ್ ಗೆ ಅನುಕೂಲವಾಗುವುದಿಲ್ಲ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಗೊತ್ತಾದ ತಕ್ಷಣ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದರು. ಆದ್ರೆ ಈ ಬಾರಿ ನೂರಕ್ಕೆ ನೂರು ಗೆಲ್ಲುವ ವಿಶ್ವಾಸ ಇದೆ. ಇದೇ 23ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
ಅನುಪಮಾ
ಶೆಣೈ
ನಾಮಪತ್ರ
ಕೂಡ್ಲಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಇಂದು ಅಧಿಕೃತವಾಗಿ ಚುನಾವಣೆ ಕಣಕ್ಕೆ ಧುಮುಕಿದ್ದಾರೆ.
ಸ್ವಕ್ಷೇತ್ರ ಕಾಪುವಿನಲ್ಲಿ ಅನುಪಮಾ ತಮ್ಮ ಸ್ವಂತ ಪಕ್ಷ ಭಾರತೀಯ ಜನಶಕ್ತಿ ಕಾಂಗ್ರೆಸ್ ನಿಂದ ಉಮೇದುವಾರಿಕೆ ಸಲ್ಲಿಸಿದರು. ಉಡುಪಿ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಸೊರಕೆ ಕೆಲಸ ಮಾಡಿದ್ದರೆ ಸಚಿವ ಸ್ಥಾನ ಕೈತಪ್ಪಿದ್ದು ಹೇಗೆ ಎಂದು ಪ್ರಶ್ನಿಸಿದ ಅನುಪಮಾ, ಚುನಾವಣೆ ಹತ್ತಿರವಾದಾಗ ರಸ್ತೆಗೆ ಡಾಂಬಾರು ಹಾಕಿಸಿದ್ದಾರೆ. ಕಾಪುವನ್ನು ವಿನಯ್ ಕುಮಾರ್ ಸೊರಕೆ ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.