ಪ್ರಚಾರಕ್ಕೆ ಬರುವ ಮೋದಿ ಉಡುಪಿಯಲ್ಲಿ ಇರೋದು ಎಷ್ಟು ಹೊತ್ತು?
Recommended Video
ಉಡುಪಿ, ಮೇ 1: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ನಗರ ಸಜ್ಜಾಗಿದೆ.
ಕರಾವಳಿಯ ಜಿಲ್ಲೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಾಬಲ್ಯವಿದೆ. ಕೋಮು ಸಂಘರ್ಷದ ಕಾರಣದಿಂದ ರಾಷ್ಟ್ರದಾದ್ಯಂತ ಸುದ್ದಿ ಮಾಡುತ್ತಿರುವ ಈ ಭಾಗವನ್ನು ಸಂಪೂರ್ಣ ತಮ್ಮ ಕೈವಶ ಮಾಡಿಕೊಳ್ಳಬೇಕು ಎಂದು ಬಿಜೆಪಿ ಪಣತೊಟ್ಟಿದೆ. ಹೀಗಾಗಿ, ಪ್ರಧಾನಿ ಮೋದಿ ಅವರ ಭೇಟಿ ಪ್ರಾಮುಖ್ಯ ಪಡೆದುಕೊಂಡಿದೆ.
ಮೇ 1ರಿಂದ ಮೋದಿ ರಾಜ್ಯ ಪ್ರವಾಸ, ಎಲ್ಲೆಲ್ಲಿ ಪ್ರಚಾರ?
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳುತ್ತಿದ್ದಾರೆ. ಮೈದಾನದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಮಧ್ಯಾಹ್ನ 2.50ಕ್ಕೆ ಮೋದಿ ಆದಿ ಉಡುಪಿ ಹೆಲಿಪ್ಯಾಡ್ಗೆ ಆಗಮಿಸಿ, ಸಮಾವೇಶದ ಸ್ಥಳಕ್ಕೆ ಬರಲಿದ್ದಾರೆ. ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೋದಿ ಅವರು ಬರುವ ಮುನ್ನವೇ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಒಂದು ಲಕ್ಷ ಜನ ಸೇರುವ ನಿರೀಕ್ಷೆ
ಸಮಾವೇಶ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಯಿಂದಲೇ ಪ್ರಾರಂಭಗೊಳ್ಳಲಿದೆ. ಈ ಸಂಬಂಧ ಎಲ್ಲ ತಯಾರಿಗಳೂ ಪೂರ್ಣಗೊಂಡಿದ್ದು, ಇಡೀ ನಗರಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸಮಾವೇಶಕ್ಕೆ ಕರಾವಳಿ ಮತ್ತು ಆಸುಪಾಸಿನ ಜಿಲ್ಲೆಗಳ ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದ್ದು, ಬಿಸಿಲಿನಿಂದ ರಕ್ಷಣೆಗಾಗಿ ಇಡೀ ಮೈದಾನಕ್ಕೆ ಪೆಂಡಾಲ್ ಹಾಕಲಾಗಿದೆ. ಸಮಾವೇಶ ಸುಗಮವಾಗಿ ನಡೆಯಲು 10 ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಶ್ರಮಿಸಲಿದ್ದಾರೆ .
ನಾಯಕರ ದಂಡು
ಮೋದಿ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರು, ಮಾಜಿ ಸಿಎಂ ಯಡಿಯೂರಪ್ಪ ಸಹಿತ ರಾಜ್ಯ ನಾಯಕರ ದಂಡೇ ಉಡುಪಿಗೆ ಬರುತ್ತಿದೆ. ಜೊತೆಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ,ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳ ಮುಖಂಡರು , ಅಭ್ಯರ್ಥಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಕೃಷ್ಣಮಠಕ್ಕೆ ಹೋಗುವುದು ಅನುಮಾನ
ಉಡುಪಿಗೆ ಬರುವ ಪ್ರಧಾನಿಯವರು ಕೃಷ್ಣಮಠಕ್ಕೆ ಭೇಟಿ ಕೊಡೋದು ಅನುಮಾನ. ಪ್ರಧಾನಿಯವರು ಉಡುಪಿಯಲ್ಲಿ ಇರುವುದು ಒಂದು ಗಂಟೆ ಮಾತ್ರ. ಮಧ್ಯಾಹ್ನ ಹೆಲಿಪ್ಯಾಡ್ ಗೆ ಬರುವ ಮೋದಿ, ಅಲ್ಲಿಂದ ನೇರ ಸಮಾವೇಶ ನಡೆಯಲಿರುವ ಎಂಜಿಎಂ ಮೈದಾನಕ್ಕೆ ತೆರಳಲಿದ್ದಾರೆ. ಅಲ್ಲಿ ಮೂರು ಗಂಟೆಗೆ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿ, 3.50ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ಗೆ ತೆರಳಲಿದ್ದಾರೆ. ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ಕಾರ್ಯಕ್ರಮವಿದೆ.
ಬಿಗಿ ಭದ್ರತೆ ನಿಯೋಜನೆ
ಒಂದು ವಾರದಿಂದಲೇ ನಗರದಲ್ಲಿ ಠಿಕಾಣಿ ಹೂಡಿರುವ ಎಸ್ಪಿಜಿ ತಂಡ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಭದ್ರತಾ ತಂಡ ಕೃಷ್ಣಮಠಕ್ಕೂ ತೆರಳಿ ಪರಿಶೀಲನೆ ನಡೆಸಿದ್ದು ಬಿಗಿ ಭದ್ರತೆ ಕೈಗೊಂಡಿದೆ. ಮಠದ ಸುತ್ತಮುತ್ತಲ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದ್ದು, ಅಷ್ಟಮಠಗಳ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಸಾರ್ವಜನಿಕರಿಗೆ ಪ್ರವೇಶವಿಲ್ಲ
ಅಧಿಕೃತ ಕಾರ್ಯಕ್ರಮದಲ್ಲಿ ಕೃಷ್ಣಮಠ ಭೇಟಿ ಇಲ್ಲದಿದ್ದರೂ, ಮೋದಿಯವರು ಕೊನೆ ಕ್ಷಣದಲ್ಲಿ ಮಠ ಭೇಟಿ ಬಯಸಬಹುದು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತ ಎಸ್ಪಿಜಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಮೋದಿಯವರು ಬಂದು ಹೋಗುವ ತನಕ ಕೃಷ್ಣಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.