ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿ ನಿಧನ
ಉಡುಪಿ, ಜುಲೈ 04 : ಕಾಂಗ್ರೆಸ್ ನಾಯಕ, ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿ ಬಸ್ನಲ್ಲಿಯೇ ವಿಧಿವಶರಾದರು. ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರು ಹೃದಯಾಘಾತದಿಂದಾಗಿ ಬಸ್ನಲ್ಲಿ ಮೃತಪಟ್ಟರು. ಗುರುವಾರ ಮಧ್ಯಾಹ್ನ ಅವರು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಕೈಗೊಂಡಿದ್ದರು.
ಮಂಗಳೂರು ಬಂದರೂ ಗೋಪಾಲ್ ಭಂಡಾರಿ ಅವರು ಎಚ್ಚರಗೊಳ್ಳಲಿಲ್ಲ. ಬಸ್ ನಿರ್ವಾಹಕರು ಗಮನಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಗೋಪಾಲ್ ಭಂಡಾರಿ ಅವರ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಶುಕ್ರವಾರ ಬೆಳಗ್ಗೆ ಅಂತ್ಯ ಸಂಸ್ಕಾರದ ಸ್ಥಳದ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಗೋಪಾಲ್ ಭಂಡಾರಿ ಅವರು ಅವರು 2008ರ ಚುನಾವಣೆಯಲ್ಲಿ 56,529 ಮತಗಳನ್ನು ಪಡೆದು ಬಿಜೆಪಿಯ ವಿ.ಸುನೀಲ್ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ 60,785 ಮತಗಳನ್ನು ಪಡೆದು ಸುನೀಲ್ ಕುಮಾರ್ ವಿರುದ್ಧ ಸೋತಿದ್ದರು.
2018ರ ವಿಧಾನಸಭೆ ಚುನಾವಣೆಯಲ್ಲಿ 48,679 ಮತಗಳನ್ನು ಪಡೆದು ಬಿಜೆಪಿಯ ಸುನೀಲ್ ಕುಮಾರ್ ಅವರ ವಿರುದ್ಧ ಸೋಲು ಕಂಡಿದ್ದರು.
ಪ್ರಮೋದ್ ಮಧ್ವರಾಜ್ ಸಂತಾಪ : ಉಡುಪಿ ಕ್ಷೇತ್ರದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಗೋಪಾಲ್ ಭಂಡಾರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
'ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು, ನನಗೆ ಸದಾ ಸಲಹೆ ಸೂಚನೆ ನೀಡುತ್ತಾ ಮಾರ್ಗದರ್ಶನ ಮಾಡುತ್ತಾ ನನ್ನ ಆತ್ಮೀಯರಾಗಿದ್ದಂತಹ ಸನ್ಮಾನ್ಯ ಗೋಪಾಲ ಭಂಡಾರಿಯವರ ನಿಧನದ ಸುದ್ದಿ ನಿಜಕ್ಕೂ ನಂಬಲಸಾಧ್ಯವಾದಂತಹ ಸಂಗತಿ' ಎಂದು ಹೇಳಿದರು.
'ಸದಾ ಕ್ರೀಯಾಶೀಲರಾಗಿ ಜನಸೇವೆ ಮಾಡುತ್ತಾ, ಪಕ್ಷದ ಮತ್ತು ಕಾರ್ಯಕರ್ತರ ಶಕ್ತಿಯಾಗಿದ್ದಂತಹ ನಾಯಕರೊಬ್ಬರನ್ನು ನಾವು ಕಳೆದುಕೊಂಡಿರುವುದು ನಿಜಕ್ಕೂ ಅತೀವ ದುಖಃವನ್ನುಂಟು ಮಾಡಿದೆ. ಅವರ ದಿವ್ಯ ಆತ್ಮಕ್ಕೆ ಶಾಂತಿಯನ್ನು ಭಗವಂತ ನೀಡಲಿ. ಕುಟುಂಬದ ಸದಸ್ಯರಿಗೆ, ಪಕ್ಷದ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಂತಾಪ ಸೂಚಿಸಿದರು.