ಕೋವಿಡ್ ಕಿಟ್ ವಿತರಣೆಯಲ್ಲಿ ಕಾರ್ಕಳ ಶಾಸಕರಿಂದ ಲಕ್ಷಾಂತರ ಅವ್ಯವಹಾರ: ಕಾಂಗ್ರೆಸ್ ಆರೋಪ
ಉಡುಪಿ, ಅಕ್ಟೋಬರ್ 5: ಕೊರೊನಾ ಲಾಕ್ ಡೌನ್ ಸಂದರ್ಭವನ್ನೇ ದುರುಪಯೋಗ ಮಾಡಿಕೊಂಡಿರುವ ಕಾರ್ಕಳ ಶಾಸಕ, ಸರಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್, ಜನರಿಗೆ ನೀಡಬೇಕಾದ ಕಿಟ್ ಹೆಸರಿನಲ್ಲಿ ಲಕ್ಷಾಂತರ ರೂ. ಗುಳುಂ ಮಾಡಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಮತ್ತು ಪುರಸಭೆ ಸದಸ್ಯ ಶುಭದ್ ರಾವ್ ಆರೋಪ ಮಾಡಿದ್ದಾರೆ.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದ್ದು, ಕಾರ್ಕಳ ಶಾಸಕರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಕಾರ್ಕಳ ಕಾಂಗ್ರೆಸ್ ಮುಖಂಡರು, ಇದಕ್ಕೆ ಪೂರಕ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿ ಬಂಧನ
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿಯು ಕಾರ್ಕಳಕ್ಕೆ 5000 ಆಹಾರ ಕಿಟ್ ನ್ನು ವಿತರಿಸಲು ರೂ. 44,95,000 ಬಿಡುಗಡೆ ಮಾಡಿತ್ತು.
ಆದರೆ ಆಹಾರ ಕಿಟ್ ನ್ನು ನ್ಯಾಯಯುತವಾಗಿ ವಿತರಿಸದೆ ಕಾರ್ಕಳ ಶಾಸಕರು ತಮ್ಮದೇ ಸರಕಾರಕ್ಕೆ ಮತ್ತು ಜನತೆಗೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ಕಿಟ್ ಗೆ 899 ರೂ. ನಂತೆ 5000 ಕಿಟ್ ಗೆ 45 ಲಕ್ಷ ರೂ. ತನಕ ಆಗುತ್ತದೆ. ಕಿಟ್ ಪಡೆದ ಫಲಾನುಭವಿಗಳ ಪಟ್ಟಿಯನ್ನು ಮಾಹಿತಿ ಹಕ್ಕಿನ ಮೂಲಕ ಪರಿಶೀಲಿಸಿದಾಗ ಇದೊಂದು ಬೋಗಸ್ ಪಟ್ಟಿ ಎಂಬುದು ತಿಳಿದುಬಂದಿದೆ. ಇದೇ ಪಟ್ಟಿಯನ್ನು ಸರಕಾರಕ್ಕೆ ನೀಡಿ ವಂಚಿಸಲಾಗಿದೆ ಎಂದಿದ್ದಾರೆ.
ಈ ಪಟ್ಟಿಯಲ್ಲಿ ಇರುವ ಅನೇಕರು ಕಿಟ್ ಪಡೆಯದವರಾಗಿದ್ದು, ಬೇರೆ ಯೋಜನೆಯ ಫಲಾನುಭಾವಿಗಳಾಗಿದ್ದಾರೆ. ಮೃತಪಟ್ಟವರ ಹೆಸರೂ ಈ ಪಟ್ಟಿಯಲ್ಲಿದೆ ಎಂದು ಶುಭದ್ ರಾವ್ ದಾಖಲೆಗಳೊಂದಿಗೆ ಆರೋಪ ಮಾಡಿದ್ದಾರೆ.
Recommended Video
ಈ ಅವ್ಯವಹಾರದ ಹೊಣೆ ಹೊತ್ತು ಸರಕಾರದ ಮುಖ್ಯ ಸಚೇತಕರೂ ಆದ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡುವುದರ ಜೊತೆಗೆ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.