ಮರಾಠಿಗೂ ಅಡಿಯಿಡಲು ಸಜ್ಜಾಗಿದೆ ನಮ್ಮ ಹೆಮ್ಮೆಯ ಯಕ್ಷಗಾನ
ಉಡುಪಿ, ಜುಲೈ 17: ಕರಾವಳಿ ನೆನೆಯುತ್ತಿದ್ದಂತೆ ಕಡಲ ತೀರದೊಂದಿಗೆ ಯಕ್ಷಗಾನವೂ ನೆನಪಾಗದೇ ಇರಲು ಸಾಧ್ಯವೇ? ಯಕ್ಷಗಾನ ಕಲೆಯ ಕರಾಮತ್ತು, ತಾಕತ್ತೇ ಅಂಥದ್ದು. ಕರಾವಳಿಯ ಹೆಮ್ಮೆಯ ಯಕ್ಷಗಾನ ಗಂಡು ಕಲೆ ಎಂದೇ ಪ್ರಸಿದ್ಧ.
ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಎಲ್ಲವನ್ನೂ ಮಿಳಿತಗೊಂಡ ರಂಗಭೂಮಿಯ ಈ ಕಲಾಪ್ರಕಾರ ಕಂಡು ಮನಸ್ಸು ತುಂಬಿಕೊಳ್ಳದೇ ಇರಲು ಸಾಧ್ಯವೇ ಇಲ್ಲ.
'ಭುವನ ಮೋಹಿನಿ' ಹಾಡಿಗೆ ಹೆಜ್ಜೆ ಹಾಕಿದ ಯುವತಿ ಈಗ ಸಖತ್ ಫೇಮಸ್!
ಇಂಥ ಯಕ್ಷಗಾನವನ್ನು ಮರಾಠಿಗರಿಗೂ ದಾಟಿಸಿದರೆ ಹೇಗೆ? ಇದೇ ಆಲೋಚನೆಯೊಂದಿಗೆ ಕರಾವಳಿಯ ಚೆಂಡೆಯ ನಾದ ಮರಾಠಿಗೂ ಕಾಲಿಡಲು ಸಜ್ಜಾಗಿದೆ. ಈಗ ಮರಾಠಿ ಭಾಷೆಯಲ್ಲೂ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧವಾಗಿದೆ. ಬೆಳಗಾವಿಯ ಗಡಿಯಲ್ಲಿ ಕಚ್ಚಾಟಗಳೇನೇ ಇರಲಿ, ಕರಾವಳಿಯ ಯಕ್ಷಗಾನಕ್ಕೆ ಮರಾಠಿಗರು ಮಾರುಹೋಗಿರುವುದು ಸುಳ್ಳಲ್ಲ. ಕಲೆಗೇಕೆ ಭಾಷೆಯ ಹಂಗು? ಇದೇ ನೆವದೊಂದಿಗೆ ಇದೇ ಮೊದಲ ಬಾರಿಗೆ ಕನ್ನಡ ನೆಲದ 'ಯಕ್ಷಗಾನ' ಮರಾಠಿ ಭಾಷೆಯಲ್ಲಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.
ಇದುವರೆಗೂ ಕನ್ನಡ, ತುಳು ಸೇರಿದಂತೆ ಕೊಂಕಣಿ ಭಾಷೆಯಲ್ಲೂ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಂಡಿವೆ. ಇದೀಗ ಮರಾಠಿ ಭಾಷೆಯಲ್ಲಿ ತರ್ಜುಮೆಗೊಳ್ಳಲಿದೆ.
ಕೋಟ ಶಿವರಾಮ ಕಾರಂತರಿಂದ ಮರುಜೀವ ಪಡೆದ ಬಡಗುತಿಟ್ಟು ಯಕ್ಷಗಾನಕ್ಕೆ ಉಡುಪಿಯ ಯಕ್ಷಗಾನ ಕೇಂದ್ರವೇ ಮೂಲಸ್ಥಾನ. ಈ ಕಲೆಗೆ ಮಾರುಹೋದ ಮರಾಠಿ ವಿದ್ವಾಂಸರ ತಂಡವೊಂದು ಈಚೆಗೆ ಮಹಾರಾಷ್ಟ್ರದ ಪುಣೆಯಿಂದ ಯಕ್ಷಗಾನದ ಬಗ್ಗೆ ತಿಳಿದುಕೊಳ್ಳಲು ಉಡುಪಿಗೆ ಭೇಟಿ ನೀಡಿತ್ತು. ಮರಾಠಿಯಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಉಮೇದಿನೊಂದಿಗೆ ಬಂದ ಈ ತಂಡ ಕನ್ನಡ ಭಾಷೆಯಲ್ಲಿರುವ ಯಕ್ಷಗಾನದ ಅಪರೂಪದ ಕೃತಿಗಳನ್ನು ಅನುವಾದ ಮಾಡಿ, ಮರಾಠಿ ಭಾಷೆಯಲ್ಲೇ ಪ್ರದರ್ಶನ ನೀಡಲು ತಯಾರಾಗಿದೆ.
ನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆ
"ಯಕ್ಷಗಾನ ಮಹಾರಾಷ್ಟ್ರ ಮಂದಿಗೆ ಸಂಪೂರ್ಣ ಪರಿಚಯವಿಲ್ಲ. ಅದಕ್ಕೆ ನಾವು ಯಕ್ಷಗಾನವನ್ನು ಸಂಪೂರ್ಣವಾಗಿ ಮರಾಠಿಯಲ್ಲಿ ಅನುವಾದ ಮಾಡಿದ್ದೇವೆ. ಈ ಕಾರಣಕ್ಕೆ ನಾವು ಉಡುಪಿಗೆ ಬಂದಿದ್ದೇವೆ. ಮೊದಲು ಯಕ್ಷಗಾನದ ಪ್ರಕಾರದಲ್ಲಿ ಇರುವ ಏಳೆಂಟು ಪ್ರಸಂಗಗಳನ್ನು ಅನುವಾದ ಮಾಡುತ್ತೇವೆ. ಅದರ ಕಾವ್ಯ, ಗದ್ಯವನ್ನು ಅನುವಾದ ಮಾಡಿ ಪ್ರಕಟಿಸುತ್ತೇವೆ" ಎಂದು ವಿದ್ವಾಂಸರ ತಂಡ ಹೇಳಿದೆ.
ವಿವಾದಕ್ಕೆ ಕಾರಣವಾಯ್ತು ಉಡುಪಿಯ ಈ ಮದುವೆ
ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಐದು ಮಹತ್ವದ ಯಕ್ಷಗಾನ ಕೃತಿಗಳು ಭಾಷಾನುವಾದ ಆಗಲಿವೆ. ಯಕ್ಷಗಾನ ಕೇಂದ್ರದ ಗುರುಗಳೇ ಪುಣೆಗೆ ತೆರಳಿ ಯಕ್ಷಗಾನ ತರಬೇತಿ ನೀಡಲಿದ್ದಾರೆ. ನಂತರ ಮರಾಠಿಯಲ್ಲೂ ಯಕ್ಷಗಾನ ಕಲೆಯ ಸಾರ ಸಾಬೀತುಗೊಳ್ಳಲಿದೆ.