ಉಡುಪಿಯ ಕೃಷ್ಣ ಮಠದಲ್ಲಿ ಕನ್ನಡ ಮಾಯ! ಏಕಾಏಕಿ ಬದಲಾಯಿತೇಕೆ ಫಲಕ?
ಉಡುಪಿ, ಡಿಸೆಂಬರ್ 01: ಕರ್ನಾಟಕದಲ್ಲಿ ನೆಲದ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಬೇಕು, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂಬ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತಲೇ ಇದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಉಡುಪಿಯಲ್ಲಿ ಸಂಗತಿಯೊಂದು ಬೆಳಕಿಗೆ ಬಂದಿದೆ.
ಉಡುಪಿಯ ಪ್ರಸಿದ್ಧ ಕೃಷ್ಣ ಮಠದಲ್ಲಿ ಇದುವರೆಗೂ ಇದ್ದ ಕನ್ನಡ ಫಲಕವನ್ನು ತೆಗೆದು ಹಾಕಿ ತುಳು ಮತ್ತು ಸಂಸ್ಕೃತಿ ಭಾಷೆಯಲ್ಲಿ ಬರೆಯಲಾದ ಹೊಸ ಫಲಕವನ್ನು ಹಾಕಲಾಗಿದೆ. ಇದು ಭಾಷೆಗೆ ಸಂಬಂಧಿಸಿದಂತೆ ವಿವಾದವನ್ನು ಹುಟ್ಟುಹಾಕಿದೆ. ಮುಂದೆ ಓದಿ...
ಇದ್ದಕ್ಕಿದ್ದಂತೆ ಕನ್ನಡ ಫಲಕ ಮಾಯ!
ಮಠದ ಮಹಾದ್ವಾರದ ಫಲಕದಲ್ಲಿ ಇದ್ದಕ್ಕಿದ್ದಂತೆ ಕನ್ನಡ ಮಾಯವಾಗಿದ್ದು, ಶ್ರೀ ಕೃಷ್ಣ ಮಠ, ರಜತಪೀಠ ಪುರಂ ಎಂದು ಸಂಸ್ಕೃತ, ತುಳುವಿನಲ್ಲಿ ಬರೆದ ಹೊಸ ಫಲಕವನ್ನು ಅಳವಡಿಸಲಾಗಿದೆ. ಈವರೆಗೆ ಕನ್ನಡ ಫಲಕವೇ ಇತ್ತು. ಕೃಷ್ಣಮಠ ಎಂದು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಬರೆಯಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಫಲಕ ಬದಲಾವಣೆ ಮಾಡಲಾಗಿದೆ. ಇದು ಚರ್ಚೆಗೆ ಕಾರಣವಾಗಿದೆ. ಪರ್ಯಾಯ ಅದಮಾರು ಮಠದಿಂದ ಫಲಕ ಬದಲಾವಣೆಯಾಗಿದ್ದು, ಇದಕ್ಕೆ ಕಾರಣ ತಿಳಿದುಬಂದಿಲ್ಲ.
"ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ"
ಈ ಘಟನೆಗೆ ಪ್ರತಿಕ್ರಿಯಿಸಿದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ತೆಗೆದು ಹಾಕಿದ್ದು ಸರಿಯಾದ ಕ್ರಮವಲ್ಲ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ. ನಾಮಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ ಎಂದು ಆಪಾದಿಸಿದ್ದಾರೆ.
"ತುಳು ಸೋದರ ಭಾಷೆ, ಆದರೆ ಕನ್ನಡಕ್ಕೆ ಆದ್ಯತೆ ಬೇಕು"
ನಾಮಫಲಕದ ಈ ಪ್ರಕರಣ ಸರ್ಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೂ ಹೋರಾಟ ಅನಿವಾರ್ಯ. ಸಮಾಜಕ್ಕೆ ಮಾರ್ಗದರ್ಶನ ಮಾಡುವವರೇ ಇಂತಹ ಕುಚೋದ್ಯ ಕೆಲಸಕ್ಕೆ ಕೈ ಹಾಕಿರುವುದು ಕ್ಷಮಿಸಲಾಗದ ಅಪರಾಧ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಉಗ್ರವಾಗಿ ಖಂಡಿಸುತ್ತದೆ. ಸಂಬಂಧಪಟ್ಟವರು ತಕ್ಷಣ ಇದನ್ನು ಸರಿಪಡಿಸಬೇಕು. ಒಂದು ಧಾರ್ಮಿಕ ಸಂಸ್ಥೆ, ಸಮಾಜಕ್ಕೆ ಬುದ್ಧಿ ಹೇಳಬೇಕಾದ ಸಂಸ್ಥೆ ಕೃಷ್ಣ ಮಠದಲ್ಲಿ ಹೀಗೆ ನಡೆದಿದ್ದು ಸರಿಯಲ್ಲ. ತುಳು ಸೋದರ ಭಾಷೆ ಹೌದು. ಆದರೆ ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
"ನಮ್ಮ ಭಾಷೆಗಳ ನಡುವೆ ಬೇಧ ಯಾಕೆ?"
ಕನ್ನಡ ಭಾಷೆಯನ್ನು ಕೈ ಬಿಟ್ಟು, ಬೇರೆ ಭಾಷೆಯನ್ನು ಫಲಕದಲ್ಲಿ ಬಳಸಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಮೊದಲು ಕನ್ನಡ. ಆನಂತರ ಇತರೆ ಭಾಷೆ ನಾಮಫಲಕದಲ್ಲಿ ಇರಲಿ. ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಹೀಗೆ ಕಂದಕ ನಿರ್ಮಾಣ ಮಾಡುವುದು ಸರಿಯಲ್ಲ. ಈ ಬೆಳವಣಿಗೆಯನ್ನು ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.