ಉಡುಪಿಯಲ್ಲಿ ಮಳೆ: ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು
ಉಡುಪಿ, ಆಗಸ್ಟ್ 04: ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬೆಳಿಗ್ಗೆಯಿಂದಲೇ ವಿಪರೀತ ಮಳೆಯಿದ್ದು, ಸಂಜೆಯಾಗುತ್ತಿದ್ದಂತೆ ಭಾರೀ ಗಾಳಿಮಳೆ ಶುರುವಾಗಿದೆ. ಗಾಳಿ ಸಹಿತ ಮಳೆ ಬೀಳುತ್ತಿರುವುದರಿಂದ ನಗರ ಭಾಗದ ವಾಹನ ಸವಾರರು, ಪಾದಚಾರಿಗಳು ಓಡಾಡಲು ಪರದಾಡಿದರು. ಮಳೆ ಇನ್ನೆರಡು ದಿನ ಮುಂದುವರೆಯುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ, ನದಿ ಪಾತ್ರದ ಜನ ಎಚ್ಚರಿಕೆಯಲ್ಲಿರುವಂತೆ ಸಂದೇಶ ರವಾನಿಸಲಾಗಿದೆ.
Recommended Video
ಇದೇ ವೇಳೆ ಇತಿಹಾಸ ಪ್ರಸಿದ್ಧ ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ನುಗ್ಗಿದೆ. ಕುಬ್ಜಾ ನದಿಯಿಂದ ಆವೃತ್ತವಾಗಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗೆಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ.
ಬಳ್ಳಾರಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆ; ನಾಶವಾದ ಬೆಳೆಗಳು
ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ ಪ್ರವೇಶ ಮಾಡಿದ ಸಮಯದಲ್ಲಿ ಊರಿನ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿ ಇರುವ ಕಾರಣ ದೇವಾಲಯದ ಆಸುಪಾಸಿನ ಒಂದಷ್ಟು ಕುಟುಂಬಗಳು ಮಾತ್ರ ಈ ವಿಶೇಷ ಸಂದರ್ಭದಲ್ಲಿ ದೇವರ ದರ್ಶನ ಗೈದರು.