ಮಾತ್ರೆಗಳ ಪಾರ್ಸೆಲ್ ತಂದ ಸಂಕಷ್ಟ, ಕಳಂಜೆ ವ್ಯಕ್ತಿ ಕುವೈತ್ ಜೈಲಿನಲ್ಲಿ!
ಉಡುಪಿ, ಸೆಪ್ಟೆಂಬರ್.10: ಕುಂದಾಪುರ ತಾಲೂಕಿನ ಕಳಂಜೆ ಎಂಬಲ್ಲಿನ ಶಂಕರ ಪೂಜಾರಿ ಎಂಬುವವರು ಕುವೈಟ್ ದೇಶದಲ್ಲಿ ಅನ್ಯಾಯವಾಗಿ ಜೈಲುಪಾಲಾದ ಕಳವಳಕಾರಿ ಘಟನೆ ಇದು.
ಪತಿಯನ್ನು ಕುವೈಟ್ ಜೈಲಿನಿಂದ ಬಿಡಿಸುವಂತೆ ಶಂಕರ್ ಪತ್ನಿ ಜ್ಯೋತಿ ಇದೀಗ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮೊದಲಾದವರ ಮೊರೆಹೋಗಿದ್ದಾರೆ.
ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ
ಶಂಕರ ಪೂಜಾರಿ ಕಳೆದ ನಾಲ್ಕು ವರ್ಷಗಳಿಂದ ಕುವೈಟ್ ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಜ್ಯೋತಿ ಮತ್ತು ಇಬ್ಬರು ಮಕ್ಕಳು ಊರಿನಲ್ಲಿ ನೆಲೆಸಿದ್ದರು. ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದ ಶಂಕರ ಪೂಜಾರಿಯವರು ಕುವೈಟ್ ದೇಶಕ್ಕೆ ತನ್ನ ಉದ್ಯೋಗ ನಿಮಿತ್ತ ಮರಳುವಾಗ ಸಹೋದ್ಯೋಗಿಯೋರ್ವರ ವಿನಂತಿ ಮೇರೆಗೆ ಮಾತ್ರೆಗಳ ಪಾರ್ಸೆಲ್ ಕೊಂಡೊಯ್ದಿದ್ದಾರೆ.
ಕುವೈಟ್ ವಿಮಾನ ನಿಲ್ದಾಣದಲ್ಲಿ ಶಂಕರ ಪೂಜಾರಿಯವರ ವಸ್ತುಗಳನ್ನು ಅಧಿಕಾರಿಗಳು ಪರಿಶೀಲಿಸಿದ ಸಂದರ್ಭ ಅವರು ಮಾತ್ರೆಗಳನ್ನು ತಂದಿರುವುದು ಪತ್ತೆಯಾಗಿದೆ. ಶಂಕರ ಪೂಜಾರಿಯವರು ನೀಡಿದ ವಿವರಣೆಗೆ ಪೊಲೀಸರಿಗೆ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಕಾನೂನಿನ ಪ್ರಕಾರ ಜೈಲಿಗೆ ಹಾಕಲಾಗಿದೆ.
ಇದಾಗಿ ಈಗ ಮೂರು ತಿಂಗಳುಗಳು ಕಳೆದಿವೆ. ಶಂಕರ ಪೂಜಾರಿ ಹತ್ತು ದಿನಗಳ ರಜೆ ಮುಗಿಸಿ ಕುವೈಟಿಗೆ ಹೋಗುವ ಸಂದರ್ಭ ಅವರ ಸಹೋದ್ಯೋಗಿ ಸಾದಿಕ್ ಎಂಬುವವರ ವಿನಂತಿ ಮೇರೆಗೆ ಉಡುಪಿಯ ಮುಬಾರಕ್ ಮತ್ತು ಅವರ ಪತ್ನಿ ನೀಡಿದ ಪಾರ್ಸೆಲ್ ಅನ್ನು ಕುವೈಟ್ ನಲ್ಲಿರುವ ಅವರ ಅತ್ತೆ ತಸ್ಲೀಂ ಫಾತಿಮಾ ಎಂಬುವವರಿಗೆ ನೀಡಲು ತೆಗೆದುಕೊಂಡು ಹೋಗಿದ್ದರು.
ಗಂಗಾಧರ ಚಡಚಣ ಹತ್ಯೆ : 373 ಪುಟದ ಚಾರ್ಜ್ ಶೀಟ್ ಸಲ್ಲಿಕೆ
ಆ ಪಾರ್ಸೆಲ್ ನಲ್ಲಿ 210 ಮಾತ್ರೆಗಳಿದ್ದವು. ಈ ಸಂದರ್ಭ ಮಾತ್ರೆಗಳನ್ನು ಕೊಂಡೊಯ್ದ ಶಂಕರ ಪೂಜಾರಿ ತನ್ನದಲ್ಲದ ತಪ್ಪಿಗೆ ಜೈಲು ಪಾಲಾಗಿದ್ದಾರೆ. ಕುವೈಟ್ ಪೊಲೀಸರು ಶಂಕರ ಪೂಜಾರಿಯವರನ್ನು ಬಂಧಿಸಿದ ಸಂದರ್ಭ ಅವರ ಸಹೋದ್ಯೋಗಿ ಎನ್ನಲಾದ ಸಾದಿಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಸಾದಿಕ್ ಅವರು ಶಂಕರ ಪೂಜಾರಿಯವರು ತಂದ ಪಾರ್ಸೆಲ್ ನಲ್ಲಿ ಮಾತ್ರೆಗಳಿದ್ದ ಸಂಗತಿ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ತಾನು ಶಂಕರ ಪೂಜಾರಿಯವರಿಗೆ ಯಾವುದೇ ಪಾರ್ಸೆಲ್ ತರುವಂತೆ ಹೇಳಿಲ್ಲ ಎಂದು ಸಾದಿಕ್ ಹೇಳಿದ್ದಾರೆ.
ದುಬೈನಲ್ಲಿ ಕಠಿಣ ಕಾನೂನು ಜಾರಿಯಲ್ಲಿದೆ. ಶಂಕರ್ ಪೂಜಾರಿ ಒಯ್ದಿದ್ದ ಮಾತ್ರೆಗಳ ಜೊತೆಗೆ ಪೂರಕ ವೈದ್ಯರ ಚೀಟಿ ಇರಲಿಲ್ಲ. ಮಾತ್ರವಲ್ಲ, ಅಷ್ಟೊಂದು ಮಾತ್ರೆ ಇರುವುದೂ ಅವರಿಗೆ ತಿಳಿದಿರಲಿಲ್ಲ. ಪೊಲೀಸರು ವಿಚಾರಣೆ ಮಾಡಿದಾಗ ಶಂಕರ ಪೂಜಾರಿ ತಬ್ಬಿಬ್ಬಾಗಿದ್ದಾರೆ. ತನಗೆ ಮಾತ್ರೆಗಳ ಬಗ್ಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ.
ಈ ಉತ್ತರದಿಂದ ತೃಪ್ತರಾಗದ ಕುವೈಟ್ ಪೊಲೀಸರು ನಿಮ್ಮ ಕಂಪೆನಿಯ ಮಾಲೀಕರು ಬಂದು ಬಿಡಿಸಿಕೊಂಡು ಹೋಗಲಿ ಎಂದಿದ್ದಾರೆ. ಆದರೆ ಉದ್ಯೋಗದಾತ ಕಂಪೆನಿಯ ಮುಖ್ಯಸ್ಥ ಮುಂದೆ ಬಾರದೆ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ತನ್ನ ಗಂಡ ಶಂಕರ ಪೂಜಾರಿ ಯಾವ ತಪ್ಪು ಮಾಡದೇ ಜೈಲು ಪಾಲಾಗಿದ್ದಾರೆ. ಉಡುಪಿಯ ಮುಬಾರಕ್ ನೀಡಿದ ಮಾತ್ರೆಗಳ ಪಾರ್ಸೆಲ್ ಕೊಂಡೊಯ್ದ ಕಾರಣಕ್ಕೆ ಅವರು ಜೈಲು ಪಾಲಾಗಿದ್ದಾರೆ ಎಂಬುದು ಪತ್ನಿ ಜ್ಯೋತಿ ಪೂಜಾರಿ ಮಾಡುವ ಆರೋಪ.
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮತ್ತು ಹಲವು ಜನಪ್ರತಿನಿಧಿಗಳ ಮೊರೆಹೋಗಿದ್ದರೂ ಶಂಕರ ಪೂಜಾರಿಯವರನ್ನು ಕುವೈಟ್ ಜೈಲಿನಿಂದ ಬಿಡಿಸಲು ಸಾಧ್ಯವಾಗಿಲ್ಲ. ತನ್ನಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ ಪತ್ನಿ ಜ್ಯೋತಿ ಪೂಜಾರಿಯವರು ಇದೀಗ ಕಂಗಾಲಾಗಿದ್ದಾರೆ.
ಇದೊಂದು ಕ್ಲಿಷ್ಟ ಪ್ರಕರಣವಾಗಿರೋದರಿಂದ ವಿದೇಶಾಂಗ ಇಲಾಖೆ ಮಧ್ಯ ಪ್ರವೇಶಿಸಿದರೆ ಶಂಕರ್ ಪೂಜಾರಿ ಜೈಲಿನಿಂದ ಹೊರಬರಬಹುದು. ಆದರೆ ಉಡುಪಿ ಮತ್ತು ಮಂಗಳೂರು ಸಂಸದರು ಈ ಕುರಿತು ಹೆಚ್ಚಿನ ಆಸಕ್ತಿ ವಹಿಸದೇ ಇರುವ ಕಾರಣ ಶಂಕರ್ ಪೂಜಾರಿ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.
ಇದೀಗ ಅವರ ಪತ್ನಿ ಜ್ಯೋತಿ ಪೂಜಾರಿ , ಕುವೈಟ್ ನಲ್ಲಿರುವ ಕನ್ನಡಿಗರು ತಮ್ಮ ಪತಿಯನ್ನು ಬಿಡಿಸಲು ಪ್ರಯತ್ನಗಳನ್ನು ಮುಂದುವರಿಸುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.