ಶೀರೂರು ಶ್ರೀ ನಿಗೂಢ ಅಗಲಿಕೆ: ಅನುಮಾನ ವ್ಯಕ್ತಪಡಿಸಿದ ಆಪ್ತರು
Recommended Video
ಉಡುಪಿ, ಜುಲೈ 19: ಉಡುಪಿಯ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಗಳು(55) ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರ ಕುರಿತು ಅವರ ಆಪ್ತ ವರ್ಗ ಅನುಮಾನ ವ್ಯಕ್ತಪಡಿಸಿದೆ.
ಕೆಲವು ಸಣ್ಣ ಪುಟ್ಟ ಆರೋಗ್ಯ ಸಂಬಂಧೀ ಸಮಸ್ಯೆಗಳಿದ್ದರೂ ಚಟುವಟಿಕೆಯಿಂದಲೇ ಇದ್ದ ಶ್ರೀಗಳು ಇದ್ದಕ್ಕಿದ್ದಂತೇ ಫುಡ್ ಪಾಯ್ಸನ್ ಸಮಸ್ಯೆಯಿಂದ ವಿಧಿವಶರಾಗುತ್ತಾರೆ ಎಂದರೆ ನಂಬುವುದಕ್ಕೆ ಅಸಾಧ್ಯ ಎಂದು ಅವರ ಆಪ್ತ ವರ್ಗದ ಸ್ವಾಮೀಜಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಐಡಿ ತನಿಖೆ ನಡೆಯಬೇಕು ಎಂದು ಅವರ ಆಪ್ತ ವಲಯ ಒತ್ತಾಯಿಸಿದೆ.
ಜನಸಾಮಾನ್ಯರ ಸ್ವಾಮೀಜಿ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ವ್ಯಕ್ತಿಚಿತ್ರ
ಫುಡ್ ಪಾಯ್ಸನ್ ಆಗುವುದಾದರೆ ಅದು ಕೇವಲ ಸ್ವಾಮೀಜಿಗಳಿಗೆ ಮಾತ್ರ ಏಕೆ? ಆ ಆಹಾರ ಸೇವಿಸಿದ ಎಲ್ಲರಿಗೂ ಆಗಬೇಕಿತ್ತು. ಇತ್ತೀಚೆಗೆ ದೇವರ ವಿಗ್ರಹದ ಸ್ಥಳ ಬದಲಾವಣೆಯಂಥ ಕೆಲವು ಸಂಗತಿಗಳು ಸ್ವಾಮೀಜಿಗಳಿಗೆ ತೀವ್ರ ಬೇಸರ ತಂದಿದ್ದವು. ಜೊತೆಗೆ ಅವರ ನೇರ ಸ್ವಭಾವವೂ ಅವರಿಗೆ ಮುಳುವಾಗಿರಬಹುದು ಎಂದು ಬರ್ಕೂರು ಸಂಸ್ಥಾನದ ಸ್ವಾಮೀಜಿ ಸಂತೋಷ ಭಾರತಿ ಶ್ರೀ ಮತ್ತು ಪೇಜಾವರದ ಮಾಜಿ ಕಿರಿಯ ಶ್ರೀಗಳಾದ ವಿಶ್ವವಿಜಯ ಸ್ವಾಮೀಜಿ ಸಂಶಯ ಹೊರಹಾಕಿದ್ದಾರೆ.
ನೇರ ಸ್ವಭಾವವೇ ಮುಳುವಾಯಿತೇ?
"ಸ್ವಾಮಿಗಳು ನನಗೆ ಅತ್ಯಂತ ಆಪ್ತರಾಗಿದ್ದರು. ಅವರು ಯಾರಿಗೂ ಕ್ಯಾರೇ ಎನ್ನುತ್ತಿರಲಿಲ್ಲ. ಇದ್ದಿದ್ದನ್ನು ಇದ್ದ ಹಾಗೆಯೇ ಹೇಳುವ ಅವರ ನೇರ ಸ್ವಭಾವವೇ ಅವರಿಗೆ ಮುಳಲುವಾಯಿತು ಅನ್ನಿಸುತ್ತೆ. ಅವರ ಸಾವು ಸಹಜವಲ್ಲ ಎಂಬ ಬಲವಾದ ಅನುಮಾನ ನಮಗಿದೆ. ಫುಡ್ ಪಾಯ್ಸನ್ ಆಗಿದ್ದರೆ ಆ ಆಹಾರ ತಿಂದಿದ್ದ ಎಲ್ಲರಿಗೂ ಆಗಬೇಕಿತ್ತು. ಕೇವಲ ಸ್ವಾಮೀಜಿಗಳಿಗೆ ಮಾತ್ರ ಹೇಗಾಗುತ್ತದೆ? ಇತ್ತೀಚೆಗಷ್ಟೇ ಪ್ರೆಸ್ ಮೀಟ್ ಮಾಡಿ, ಚೆನ್ನಾಗಿಯೇ ಮಾತನಾಡಿದ್ದ ಸ್ವಾಮೀಜಿ ಇಂದು ಇಲ್ಲ ಎಂದರೆ ನಂಬುವುದು ಹೇಗೆ? ಈ ಕುರಿತು ಪಾರದರ್ಶಕ ತನಿಖೆ ನಡೆಯಲೇಬೇಕು" ಎಂದು ಶ್ರೀಗಳ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಬರ್ಕೂರು ಸಂಸ್ಥಾನದ ಸ್ವಾಮೀಜಿ ಸಂತೋಷ ಭಾರತಿ ಶ್ರೀ ಆಗ್ರಹಿಸಿದ್ದಾರೆ.
ಶೀರೂರು ಶ್ರೀ ದೈವಾಧೀನ: ಕಂಬನಿ ಮಿಡಿದ ಗಣ್ಯರು
ಮಾನವೀಯ ಅಂತಃಕರಣದ ವ್ಯಕ್ತಿ
"ಸ್ವಾಮಿಗಳ ಏಕಾಏಕಿ ಅಗಲಿಕೆ ತೀವ್ರ ಆಘಾತ ತಂದಿದೆ. ಅವರ ಋಣ ನನ್ನ ಮೇಲೆ ಸಾಕಷ್ಟಿದೆ. ನನ್ನಂಥ ಕಿರಿಯ ಸ್ವಾಮೀಜಿಗಳನ್ನು ಅವರು ಗೌರವದಿಂದ ಕಾಣುತ್ತಿದ್ದರು. ಬಹಳ ಮಾನವೀಯ ಅಂತಃಕರಣದ ವ್ಯಕ್ತಿ. ಅವರು ನನಗೆ ಮಾಡಿದ ಉಪಕಾರ, ಸಂಕಷ್ಟದ ದಿನಗಳಲ್ಲಿ ನನಗೆ ಬೆಂಬಲ ನೀಡಿದ್ದನ್ನು ನಾನು ಎಂದಿಗೂ ಮರೆಯಲಾರೆ. ಅವರ ಅಗಲಿಕೆ ತುಂಬಲಾರದ ನಷ್ಟ" ಎಂದು ಸಂತೋಷ ಭಾರತೀ ಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನುಮಾನ ವ್ಯಕ್ತಪಡಿಸಿದ ಪೇಜಾವರದ ಮಾಜಿ ಕಿರಿಯ ಶ್ರೀ
ಪೇಜಾವರ ಮಠದ ಮಾಜಿ ಕಿರಿಯ ಶ್ರೀ ವಿಶ್ವವಿಜಯ ಸ್ವಾಮೀಜಿ ಅವರು ಸಹ ಶೀರೂರು ಸ್ವಾಮೀಜಿಗಳ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಲ್ಲದೆ, ಇದು ಸಹಜ ಸಾವಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
"ಅವರು ಇತ್ತೀಚೆಗೆ ಹಲವು ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಅವರು ಹೀಗೆ ಏಕಾಏಕಿ ದೈವಾಧೀನರಾಗಿದ್ದಾರೆಂದರೆ ಈ ಕುರಿತು ಸಂಶಯ ಸಹಜವಾಗಿಯೇ ಮೂಡುತ್ತದೆ. ಅವರ ಅಗಲಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಸಮಗ್ರ, ಪಾರದರ್ಶಕ ತನಿಖೆ ನಡೆಯಬೇಕ" ಎಂದು ಶ್ರೀ ವಿಶ್ವವಿಜಯ ಸ್ವಾಮೀಜಿ ಹೇಳಿದ್ದಾರೆ.
ಇಂದು ಬೆಳಿಗ್ಗೆ ದೈವಾಧೀನರಾದ ಶೀರೂರು ಸ್ವಾಮೀಜಿ
55 ವರ್ಷ ವಯಸ್ಸಿನ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳು ಇಂದು(ಜು.19) ಬೆಳಿಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದೈವಾಧೀನರಾದರು. ಫುಡ್ ಪಾಯ್ಸನ್ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದ ಅವರು ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು.