ಚುನಾವಣಾ ಕಣಕ್ಕಿಳಿಯದಂತೆ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ!
ಉಡುಪಿ, ಮೇ 04: ಬೈಂದೂರು ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿಯವರಿಗೆ ದುಬೈಯಿಂದ ಜೀವ ಬೆದರಿಕೆ ಕರೆ ಬಂದಿದ್ದು , ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ಸಂಜೆ ದುಬೈಯಿಂದ ಕರೆ ಮಾಡಿದ ವ್ಯಕ್ತಿಯೋರ್ವ ಚುನಾವಣಾ ಕಣದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇನೆ ಎಂದು ಧಮಕಿ ಹಾಕಿದ್ದಾನೆ.
ಈ ಸಂಬಂಧ ರವಿ ಶೆಟ್ಟಿ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬೈಂದೂರಿನಲ್ಲಿ ಜೆಡಿಎಸ್ ಬಗ್ಗೆ ಯುವಜನತೆ ಒಲವು ಹೊಂದಿದ್ದಾರೆ.
ಚುನಾವಣೆ ಹೊತ್ತಿಗೆ ಮತ್ತೆ ಕೊಲ್ಲೂರು ಅನುದಾನ ವಿವಾದ !
ಬಹಳ ದಿನಗಳಿಂದ ಮನೆಮನೆಗೆ ಭೇಟಿ ಕೊಟ್ಟು ಮತಯಾಚನೆ ಮಾಡುತ್ತಿದ್ದೇನೆ. ನನ್ನ ಜೊತೆ ನೂರಾರು ಕಾರ್ಯಕರ್ತರೂ ಮತಯಾಚನೆಗೆ ಬರುತ್ತಿದ್ದಾರೆ. ಇದನ್ನು ಸಹಿಸದ ರಾಷ್ಟ್ರೀಯ ಪಕ್ಷದವರು ನನ್ನ ವಿರುದ್ಧ ಸಂಚು ಮಾಡಿದ್ದಾರೆ ಅಂತ ಆರೋಪಿಸಿದರು.
ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುಕ ಹುಟ್ಟಿದ್ದು, ತಮ್ಮ ಮತಗಳ ವಿಭಜನೆಯಾಗಬಹುದೆಂದು ಈ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ರವಿ ಶೆಟ್ಟಿ ದೂರಿದ್ದಾರೆ.
ರಾಜಕೀಯಕ್ಕೆ ಸೇರಿದ್ದು ಬದಲಾವಣೆಗೋಸ್ಕರ. ಇಂತಹ ಬೆದರಿಕೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ. ಬದಲಾಗಿ ಪಕ್ಷದ ಪರ ಇನ್ನಷ್ಟು ಪ್ರಚಾರ ಮಾಡುವ ಹುಮ್ಮಸ್ಸು ಬಂದಿದೆ ಎಂದರು.
ಕ್ಷೇತ್ರ ಪರಿಚಯ: ಬೈಂದೂರಲ್ಲಿ ಗೋಪಾಲ ಪೂಜಾರಿಗೆ ಸಿಗುವುದೇ 5ನೇ ಗೆಲುವು?
ರವಿ ಶೆಟ್ಟಿ ನೀಡಿದ ದೂರನ್ನಾಧರಿಸಿ ಅವರಿಗೆ ಗನ್ ಮ್ಯಾನ್ ನಿಯೋಜಿಸಲಾಗಿದೆ. ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷನಾಗಿರುವ ರವಿ ಶೆಟ್ಟಿ ಕಳೆದ ಒಂದು ವರ್ಷದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.