ಸರಕಾರ ಹಿಂದೂ ವಿರೋಧಿ ಎನ್ನುವುದು ಸ್ಪಷ್ಟಗೊಳ್ಳುತ್ತಿದೆ: ಪೇಜಾವರ ಶ್ರೀ
ಉಡುಪಿ, ಫೆಬ್ರವರಿ 7: ದೇವಾಲಯ ಮತ್ತು ಮಠಗಳ ಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇವಾಲಯ ಮತ್ತು ಮಠಗಳ ಸ್ವಾಧೀನಕ್ಕೆ ಕೈ ಹಾಕುವ ಮೂಲಕ ಸರಕಾರವೇ ವಿಪಕ್ಷದ ಹೋರಾಟಕ್ಕೆ ಅಸ್ತ್ರ ಕೊಟ್ಟಂತಾಗಿದೆ. ಆದರೆ ನಾನು ಇದರ ವಿರುದ್ಧ ಹೋರಾಟ ಮಾಡುವುದಿಲ್ಲ. ಈ ಹೋರಾಟವನ್ನು ಜನತೆಗೆ ಬಿಟ್ಟಿದ್ದೇನೆ," ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದರು.
"ಸರಕಾರ ಹಿಂದೂ ವಿರೋಧಿ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ. ಜಾತ್ಯಾತೀತ ಸರಕಾರ ಈ ರೀತಿ ನಡೆದುಕೊಳ್ಳಬಾರದು. ಅಲ್ಪಸಂಖ್ಯಾತ, ಬಹುಸಂಖ್ಯಾತರನ್ನು ಸಮಾನವಾಗಿ ನೋಡಬೇಕು. ಆದರೆ ಸರಕಾರ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ," ಎಂದು ಅವರು ವಾಗ್ದಾಳಿ ನಡೆಸಿದರು.
"ಇತ್ತೀಚೆಗೆ ಸರಕಾರ ಅಲ್ಪಸಂಖ್ಯಾತರ ಮೇಲಿನ ಪ್ರಕರಣವನ್ನು ಕೈ ಬಿಡಲು ಮುಂದಾಗಿತ್ತು. ಮುಗ್ಧರಾದ ಎಲ್ಲರ ಮೇಲಿನ ಪ್ರಕರಣವನ್ನೂ ಸರಕಾರ ಕೈ ಬಿಡಲಿ," ಎಂದು ಪೇಜಾವರ ಶ್ರೀಗಳು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
"ಕೃಷ್ಣಮಠವನ್ನು ಸ್ವಾಧೀನಪಡಿಸಿದರೆ, ನಾನು ಮಠದಿಂದ ಹೊರಬರುವೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಇರಲಾರೆ. ಆದರೆ ಮಠವನ್ನು ಸರಕಾರಕ್ಕೆ ಸ್ವಾಧೀನ ಪಡಿಸಿಕೊಳ್ಳುವ ವಿಚಾರ ಈವರೆಗೆ ಯಾವುದೇ ಮೂಲಗಳಿಂದ ಖಚಿತವಾಗಿಲ್ಲ," ಎಂದು ಹೇಳಿರುವ ವಿಶ್ವೇಶತೀರ್ಥರು, "ಸ್ವಾಧೀನಪಡಿಸುವ ಪ್ರಕ್ರಿಯೆ ಇಲ್ಲದೇ ಇದ್ದಲ್ಲಿ ನಮ್ಮ ವಿರೋಧವಿಲ್ಲ," ಎಂದು ಸ್ಪಷ್ಟವಾಗಿ ಹೇಳಿದರು.