ಚಂದ್ರಯಾನ-2ರ ಯಶಸ್ಸಿಗೆ ಉಡುಪಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿದ ಇಸ್ರೋ ಅಧ್ಯಕ್ಷ
ಉಡುಪಿ, ಜುಲೈ 8: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2ರ ಯಶಸ್ಸಿಗೆ ಉಡುಪಿ ಶ್ರೀ ಕೃಷ್ಣನ ಮೊರೆ ಹೋಗಲಾಗಿದೆ. ಚಂದ್ರಯಾನ-2 ರ ಯೋಜನೆ ಯಶಸ್ಸಿಗಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ಮತ್ತು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭಾನುವಾರ ಸಂಜೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಂದ್ರಯಾನ-2 ತಡವಾಗಲು ಯುಪಿಎ ಕಾರಣ: ಮಾಧವನ್ ನಾಯರ್
ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಪತ್ನಿ ಮತ್ತು ಪುತ್ರನ ಜತೆ ವಿಶೇಷ ಪೂಜೆ ಸಲ್ಲಿಸಿದ ಕೆ. ಶಿವನ್, ಪ್ರಸಾದ ಸೇವಿಸಿದರು. ನಂತರ ಸಂಜೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣನಲ್ಲಿ ಚಂದ್ರಯಾನ-2ರ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಪ್ರಸಾದ ಸ್ವೀಕರಿಸಿ, ಇತ್ತೀಚೆಗೆ ಸಮರ್ಪಣೆಯಾದ ಸ್ವರ್ಣಗೋಪುರ ವೀಕ್ಷಿಸಿ ಮಾಹಿತಿ ಪಡೆದರು.
'ಚಂದ್ರಯಾನದ ಮೂಲಕ ಭಾರತ ಹೊಸ ಮೈಲಿಗಲ್ಲು ಸಾಧಿಸಲಿದೆ. ಇಸ್ರೋ ವಿಜ್ಞಾನಿಗಳ ತಂಡದ ಹಲವು ದಿನಗಳ ಪರಿಶ್ರಮ ಇದರಲ್ಲಿದೆ. ಯೋಜನೆ ಸಫಲವಾಗಲು ದೈವಾನುಗ್ರಹ ಅಗತ್ಯ' ಎಂದು ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.