ಆಂತರಿಕ ಭದ್ರತೆಗೆ ಆಧುನಿಕ ತಂತ್ರಜ್ಞಾನ ಬಳಕೆ: ಭಾಸ್ಕರ್ ರಾವ್
ಉಡುಪಿ, ಆಗಸ್ಟ್ 26: ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ರಾಜ್ಯದ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ.
Recommended Video
ಮಲ್ಪೆಯ ಕರಾವಳಿ ಕವಲು ಪಡೆಯ ಕಚೇರಿಯಲ್ಲಿ ಮೀನುಗಾರ ಮುಖಂಡರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ರಾಜ್ಯದ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕರಾವಳಿ ಕಾವಲು ಪಡೆಗೆ ಅಗತ್ಯ ಉಪಕರಣಗಳ ಖರೀದಿ, ಪ್ರತ್ಯೇಕ ಸಿಬ್ಬಂದಿ ನೇಮಕ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಕರ್ತನ ಹತ್ಯೆ ಖಂಡಿಸಿದ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್
ಸಿಬ್ಬಂದಿಗಳಲ್ಲಿ ದೈಹಿಕ, ತಾಂತ್ರಿಕ, ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುವ ಮೂಲಕ ಅವರ ಕಾರ್ಯಕ್ಷಮತೆ ಹೆಚ್ಚಿಸಲು ಸಹ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಕರಾವಳಿಯ ರಕ್ಷಣೆಗೆ 3 ಹೊಸ ಜೆಟ್ ಸ್ಕೀಗಳನ್ನು ಶೀಘ್ರದಲ್ಲಿ ಸರಬರಾಜು ಮಾಡಲಾಗುವುದು ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳ ಮೂಲಕ ಆಂತರಿಕ ಭದ್ರತೆಗೆ ಅಡ್ಡಿಪಡಿಸುವವರನ್ನು, ಇಲಾಖೆಯ ಸೋಷಿಯಲ್ ಮೀಡಿಯಾ ಸೆಲ್ ಮೂಲಕ ಪತ್ತೆ ಮಾಡಿ ಕ್ರಮ ಕೈಗೊಳ್ಳಲಾಗುವುದು, ದೇಶವಿರೋಧಿ ಚಟುವಟಿಕೆ ನಡೆಸುವವರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗುವವರು ಮತ್ತು ಬರುವವರ ಖಚಿತ ಮಾಹಿತಿಗಾಗಿ ಚಿಪ್ ಆಧಾರಿತ ತಂತ್ರಜ್ಞಾನ ಬಳಕೆ ಮಾಡಲಾಗುವುದು. ಮೀನುಗಾರರ ರಕ್ಷಣೆ ಜೊತೆಗೆ ಸಮುದ್ರದಲ್ಲಿನ ಜೀವ ವೈವಿಧ್ಯ ರಕ್ಷಣೆಗೆ ಸಹ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿನ 43 ಬೀಚ್ ಗಳಿಗೆ ಸೂಕ್ತ ಭದ್ರತೆ ನೀಡುವುದರ ಮೂಲಕ ರಾಜ್ಯದ 322 ಕಿ.ಮೀ. ವ್ಯಾಪ್ತಿಯ ಕರಾವಳಿಯಲ್ಲಿ ಆಂತರಿಕ ಭದ್ರತೆ ಒದಗಿಸಲಾಗುವುದು. ಈಗಾಗಲೇ ಕರಾವಳಿ ಕಾವಲು ಪಡೆಯ ಜೊತೆಗೆ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಒಳಗೊಂಡ ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳಿಯ ಮೀನುಗಾರರನ್ನು ಒಳಗೊಂಡ ಸಾಗರ ರಕ್ಷಕ ದಳವನ್ನು ಆರಂಭಿಸಲಾಗಿದೆ ಎಂದು ಹೇಳಿದರು.