ಬೆಂಗಳೂರು ಏರ್ ಶೋನಲ್ಲಿ ಕನ್ನಡಕ್ಕೆ ಅವಮಾನ: ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ
ಉಡುಪಿ, ಫೆಬ್ರವರಿ 6: ಬೆಂಗಳೂರಿನಲ್ಲಿ ನಡೆದ 13ನೇ ಏರ್ ಶೋನಲ್ಲಿ ಕನ್ನಡಕ್ಕೆ ಅವಮಾನ ಆಗಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಅಮಿತ್ ಶಾ ಪಾಲ್ಗೊಂಡ ಕಾರ್ಯಕ್ರಮದಲ್ಲೂ ಕನ್ನಡ ಮಾಯವಾಗಿತ್ತು ಎಂದು ಕರವೇ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಗಡಿ ಪ್ರದೇಶದ ರಾಜಕಾರಣಿಗಳು ಕನ್ನಡವನ್ನು ಮರೆತಿದ್ದಾರೆ. ಮರಾಠಿ ಭಾಷೆಯಲ್ಲಿ ರಾಜಕಾರಣಿಗಳು ವ್ಯವಹರಿಸುತ್ತಾರೆ. ಗಣ್ಯರು ದೆಹಲಿ ಹಾಗೂ ವಿದೇಶದಿಂದ ಬರಲಿ, ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಕನ್ನಡದ ಕೀಳರಿಮೆಯನ್ನು ನಾವು ಸಹಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಏರೋ ಇಂಡಿಯಾದಲ್ಲಿ ಕನ್ನಡ ಕಡೆಗಣನೆ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ
ಇಂದು ಕನ್ನಡಕ್ಕಾಗಿ ಹೋರಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತದೆ. ದೇಶದ್ರೋಹದ ಕೇಸು ಹಾಕಿ ಬಂಧಿಸಿದ ಘಟನೆ ನಡೆದಿದೆ. ಕನ್ನಡ ನಿರ್ಲಕ್ಷವಾದರೆ ಮುಖ್ಯಮಂತ್ರಿಗಳು ಕಣ್ಣುಕಟ್ಟಿ ಕುಳಿತುಕೊಳ್ಳಬಾರದು. ಸಚಿವರು, ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪದೇ ಪದೇ ಗಡಿ ಕ್ಯಾತೆ ತೆಗೆಯುವ ಮಹಾ ಸಿಎಂ ಉದ್ಧವ್ ಠಾಕ್ರೆಯವರೇ.. ಕರ್ನಾಟಕದ ಒಂದು ಹಿಡಿ ಮಣ್ಣು ನಿಮಗೆ ಸಿಗುವುದಿಲ್ಲ. ಗಡಿಯ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ. ಲಾಠಿಯೇಟು, ಜೈಲು ನಾವು ನೋಡಿಯಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಚಲೋ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿ ಘೋಷಿಸುತ್ತಿದ್ದೇವೆ ಎಂದು ಕರವೇ ಪ್ರವೀಣ್ ಶೆಟ್ಟಿ ಹೇಳಿದರು.