ಪೊಗರು ಸಿನಿಮಾದಲ್ಲಿ ಬ್ರಾಹ್ಮಣರ ಅವಹೇಳನ: ಸಂಸದೆ ಶೋಭಾ, ಪೇಜಾವರ ಶ್ರೀ ಖಂಡನೆ
ಉಡುಪಿ, ಫೆಬ್ರವರಿ 23: ಪೊಗರು ಚಲನಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ. ಪೂಜಾ ಪದ್ಧತಿ, ಅರ್ಚಕರಿಗೆ ಅವಮಾನ ಮಾಡಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.
ಪೊಗರು ಸಿನಿಮಾದಿಂದ ಶ್ರದ್ಧೆ, ಆಚಾರ-ವಿಚಾರಕ್ಕೆ ಧಕ್ಕೆಯಾಗಿದೆ. ಮನೆಯಲ್ಲಿ ಪೂಜೆ ಆಗಬೇಕೆಂದರೆ ಬ್ರಾಹ್ಮಣರನ್ನು ಕರೆಯುತ್ತಾರೆ. ಆಕ್ಷೇಪಾರ್ಹ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕಿಲ್ಲ ಯಾಕೆ? ಸೆನ್ಸಾರ್ ಮಂಡಳಿ ನಡೆ ಸಂಶಯಕ್ಕೆ ಎಡೆಮಾಡಿದೆ. ಪ್ರಚಾರ ಗಿಟ್ಟಿಸಿಕೊಂಡು ಹಣ ಮಾಡಬಹುದು ಅಂದುಕೊಂಡಿರಬಹುದು ಎಂದು ಸಂಸದೆ ಶೋಭಾ ಕಿಡಿಕಾರಿದರು.
ಮೈಸೂರು: ಪೊಗರು ಸಿನಿಮಾ ವಿರುದ್ಧ ಬ್ರಾಹ್ಮಣ ಸಮುದಾಯ ಪ್ರತಿಭಟನೆ
ಪೊಗರು ಚಲನಚಿತ್ರ ಪ್ರದರ್ಶನಕ್ಕೆ ನನ್ನ ವಿರೋಧ ಇದೆ, ಚಿತ್ರವನ್ನು ವಾಪಸ್ ಪಡೆದು ಸೆನ್ಸಾರ್ ಮಾಡಿ. ಪ್ರದರ್ಶನ ನಿಲ್ಲಿಸಲು ಕೂಡಲೇ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತಿದ್ದೇನೆ. ಚಿತ್ರದ ಕೆಲ ದೃಶ್ಯಗಳನ್ನು ಕಂಡು ನನಗೆ ಬಹಳ ನೋವಾಗಿದೆ ಎಂದರು.
ನಿಮ್ಮ ದಾರ್ಷ್ಟ್ಯವನ್ನು ಬೇರೆ ಧರ್ಮಗಳಿಗೆ ತೋರಿಸಲು ಶಕ್ತಿ ಇದೆಯೇ, ಇದು ಕೇವಲ ಬ್ರಾಹ್ಮಣರು ವಿರೋಧಿಸುವ ವಿಚಾರ ಅಲ್ಲ. ಪೂರ್ಣ ಹಿಂದೂ ಸಮಾಜ ಎದ್ದು ನಿಂತು ವಿರೋಧಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದರು.
ಪೇಜಾವರ ಶ್ರೀ ಖಂಡನೆ
ನಂದಕಿಶೋರ್ ನಿರ್ದೇಶನದ ಪೊಗರು ಚಲನಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದನ್ನು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಖಂಡಿಸಿದ್ದಾರೆ.
ಚಿತ್ರದ ಅನೇಕ ದೃಶ್ಯಗಳಲ್ಲಿ ಬ್ರಾಹ್ಮಣರನ್ನು ತೀರಾ ಅವಮಾನಿಸಲಾಗಿದ್ದು, ಇದರಿಂದ ಬ್ರಾಹ್ಮಣರ ಭಾವನೆಗಳಿಗೆ ತೀರಾ ನೋವಾಗಿದೆ. ಇಂಥಹ ಬೆಳವಣಿಗೆಗಳು ಅಸಹನೀಯವಾಗಿದೆ. ಕೇವಲ ಬ್ರಾಹ್ಮಣನ್ನು ಮಾತ್ರವಲ್ಲ ಯಾವುದೇ ಜಾತಿ ಸಮುದಾಯಗಳನ್ನು ನಿಂದಿಸುವ, ಅವಮಾನಿಸುವ ಪ್ರವೃತ್ತಿ ಸಲ್ಲದು ಎಂದು ಅಭಿಪ್ರಾಯಪಟ್ಟರು.
ಈ ಮೂಲಕ ಮನೋರಂಜನೆ ನೀಡುತ್ತೇವೆ ಅನ್ನುವ ಭ್ರಮೆಯಿಂದ ಚಿತ್ರರಂಗ ಹೊರಬರಬೇಕು. ತಕ್ಷಣ ಪೊಗರು ಚಿತ್ರದಲ್ಲಿ ಬ್ರಾಹ್ಮಣ ಸಮಾಜವನ್ನು ನಿಂದಿಸುವ ದೃಶ್ಯಗಳನ್ನು ತೆರವುಗೊಳಿಸಬೇಕು ಎಂದು ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ.
Recommended Video
ಈ ವಿಚಾರವಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಅನೇಕ ಬ್ರಾಹ್ಮಣ ಸಂಘಟನೆಗಳು ಪ್ರತಿಭಟನೆ ನಡೆಸಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಅರ್ಪಿಸುವ ಸಂದರ್ಭ ಶ್ರೀಗಳು ಅಲ್ಲಿದ್ದ ಬ್ರಾಹ್ಮಣ ಸಮಾಜದ ಮುಖಂಡರ ಮೊಬೈಲ್ ಮೂಲಕ ಚಲನಚಿತ್ರ ಮಂಡಳಿಯ ಪ್ರಮುಖರೊಂದಿಗೆ ಮಾತನಾಡಿ, ಖಂಡನೆ ವ್ಯಕ್ತಪಡಿಸಿ ಕೂಡಲೇ ವಿವಾದಿತ ದೃಶ್ಯಗಳ ಕತ್ತರಿಗೆ ಒತ್ತಾಯಿಸಿದ್ದಾರೆ.