ಭಾಸ್ಕರ ಶೆಟ್ಟಿ ಕುಟುಂಬಸ್ಥರ ವಿರುದ್ಧ ಪ್ರತಿಬಂಧಕಾಜ್ಞೆ
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಭಾಸ್ಕರ ಶೆಟ್ಟಿ ಕುಟುಂಬಸ್ಥರ ವಿರುದ್ಧ ನ್ಯಾಯಾಲಯ ಪ್ರತಿಬಂಧಕಾಜ್ಞೆ ಹೊರಡಿಸಿದೆ.
ಉಡುಪಿ, ನವೆಂಬರ್, 23: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಉಡುಪಿ ದುರ್ಗಾ ಇಂಟರ್ನ್ಯಾಷನಲ್ ಹೊಟೇಲ್ ವ್ಯವಹಾರಕ್ಕೆ ಸಂಬಂಧಿಸಿ ಈಗಾಗಲೇ ಎರಡು ಕುಟುಂಬಗಳ ನಡುವೆ ಕಲಹ ಸೃಷ್ಟಿಯಾಗಿತ್ತು.
ಭಾಸ್ಕರ್ ಶೆಟ್ಟಿಯವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ತಾಯಿ ಹಾಗೂ ಇತರರನ್ನು ಪ್ರತಿಬಂಧಿಸಿ ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿದೆ ಎಂದು ನ್ಯಾಯವಾದಿ ಎಂ. ಚಿದಾನಂದ ಕೆದಿಲಾಯ ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.[ಭಾಸ್ಕರ ಶೆಟ್ಟಿ ಶವ ಸುಡಲು 20 ಲೀಟರ್ ಪೆಟ್ರೋಲ್ ಬಳಕೆ!]
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉದ್ಯಮಿ ಭಾಸ್ಕರ್ ಶೆಟ್ಟಿಯವರು ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ನಿರ್ಮಿಸಿದ್ದರು ಇದಕ್ಕಾಗಿ ಕರ್ನಾಟಕ ಬ್ಯಾಂಕ್ ಆದಿ ಉಡುಪಿ ಶಾಖೆಯಿಂದ ಸಾಲ ಪಡೆದು ತನ್ನ ಪತ್ನಿ ರಾಜೇಶ್ವರಿ ಅವರ ಹೆಸರಿನಲ್ಲಿದ್ದ ಜಾಗದಲ್ಲಿ ಹೋಟೆಲ್ ನಿರ್ಮಿಸಿದ್ದರು .
ಭಾಸ್ಕರ ಶೆಟ್ಟಿ ಅವರ ನಂತರ ಹೊಟೇಲ್ ವ್ಯವಹಾರ ರಾಜೇಶ್ವರಿ ಶೆಟ್ಟಿ ಅವರ ಸುಪರ್ದಿಗೆ ಕಾನೂನು ಪ್ರಕಾರ ಸೇರಿದೆ ಎಂದರು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯವರು ಅವರ ತಾಯಿ ಸುಮತಿ ರಘುರಾಮ ಶೆಟ್ಟಿಗೆ ಅಕಾರ ಪತ್ರವನ್ನು ನೀಡಿ ಹೊಟೇಲ್ ವ್ಯವಹಾರ ನೋಡಿಕೊಳ್ಳುವಂತೆ ಮತ್ತು ಬ್ಯಾಂಕ್ಗೆ ಸಂಬಂಧಿಸಿದ ಸಾಲದ ವ್ಯವಹಾರವನ್ನು ನೋಡಿಕೊಳ್ಳುವಂತೆ ಸೂಚಿಸಿದ್ದರು.
ಆದರೆ ಭಾಸ್ಕರ ಶೆಟ್ಟಿ ಅವರ ಸಂಬಂಧಿಕರಾದ ಗುರುಪ್ರಸಾದ್ ಶೆಟ್ಟಿ, ಜೋಗು ಶೆಟ್ಟಿ, ಜಯಂತಿ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಹಾಗೂ ನಿರ್ಮಲಾ ಶೆಟ್ಟಿ ಅವರು ಹೊಟೇಲಿನ ದೈನಂದಿನ ನಿರ್ವಹಣೆಯಲ್ಲಿ ಮಧ್ಯ ಪ್ರವೇಶಿಸಿ ಅಡಚಣೆ ಉಂಟು ಮಾಡಿದ್ದಾರೆ.[ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಪೊಲೀಸರ ಹೊಸ ಅವಾಂತರ?]
ಮಾತ್ರವಲ್ಲದೆ ಹೋಟೆಲಿನ ವ್ಯವಹಾರವನ್ನು ಬಲವಂತವಾಗಿ ವಶ ಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸುಮತಿ ರಘುರಾಮ ಶೆಟ್ಟಿ, ಭಾಸ್ಕರ ಶೆಟ್ಟಿಯವರ ಸಂಬಂಧಿಕರ ವಿರುದ್ಧ ಪ್ರತಿಬಂಧಕಾಜ್ಞೆ ಜಾರಿಗೊಳಿಸಲು ದಾವೆ ಹೂಡಿದ್ದರು. ಆದ್ದರಿಂದ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಜಾರಿಗೊಳಿಸುವ ಆದೇಶ ಹೊರಡಿಸಿದೆ ಎಂದು ಚಿದಾನಂದ ಕೆದಿಲಾಯ ಹೇಳಿದರು.