ಹುಟ್ಟೂರು ಉಡುಪಿಯೊಂದಿಗೆ ಪ್ರೊ. ಯು. ಆರ್. ರಾವ್ ಅವಿನಾಭಾವ ನಂಟು
ಉಡುಪಿ, ಜುಲೈ 25: ಕ್ಷಿತಿಜದಲ್ಲಿ ಪ್ರೊ. ಉಡುಪಿ ರಾಮಚಂದ್ರ ರಾವ್ ಎಂಬ ಭಾರತದ ಅನರ್ಘ್ಯ ನಕ್ಷತ್ರವೊಂದು ಹಲವು ದಶಕಗಳ ಕಾಲ ಮಿನುಗಿ ಮರೆಯಾಗಿದೆ. ವಿಜ್ಞಾನದ ಬೆಳವಣಿಗೆಗಾಗಿ ಅವರು ನೀಡಿದ ಸೇವೆಯನ್ನು ಯಾವ ತಕ್ಕಡಿಯಲ್ಲಿ ಇಟ್ಟು ತೂಗಲೂ ಸಾಧ್ಯವಿಲ್ಲ; ಯಾವ ಪ್ರಶಸ್ತಿಗಳಿಗೂ ಅದು ಸಮವಲ್ಲ.
ಇಂಥಹ ಮೇರು ವ್ಯಕ್ತಿ ಪ್ರೊ. ಯು. ಆರ್. ರಾವ್ ಹುಟ್ಟಿ, ಆಡಿ, ಬೆಳೆದ ಎಲ್ಲೂರು ಗ್ರಾಮದ ಅದಮಾರಿನ ಮನೆ ಪರಿಸರದಲ್ಲಿ ಈಗ ಬಾವಿ, ತುಳಸಿಕಟ್ಟೆ ಹಾಗೂ ನಾಗಬನ ಮಾತ್ರ ಉಳಿದಿದೆ. ಆದರೆ ಅವರು ತಮ್ಮ ಹುಟ್ಟೂರು ಉಡುಪಿ ಜತೆ ಕೊನೆಯವರೆಗೂ ಸಂಬಂಧ ಉಳಿಸಿಕೊಂಡಿದ್ದರು.
ಉಡುಪಿ ರಾಮಚಂದ್ರರಾಯರಿಗೆ ಸದಾ ಅದೇ ಧ್ಯಾನ - ವಿಜ್ಞಾನ
ಅದಮಾರು ಶಾಲೆಗೆ ಹೋಗುತ್ತಿದ್ದ ಪ್ರೊ. ಯು. ಆರ್. ರಾವ್ ಬಾಲ್ಯ. ಆಗ ಅವರು ಮರದಿಂದ ಬಿದ್ದಾಗ ತನ್ನ ತಾಯಿ ಭಾಗಿ ಶೆಟ್ಟಿ ಎತ್ತಿ ಆರೈಕೆ ಮಡಿದ ನೆನಪನ್ನು ಇಲ್ಲಿನ ಸ್ಥಳೀಯ ಶೇಖರ್ ಶೆಟ್ಟಿ 'ಒನ್ಇಂಡಿಯಾ ಕನ್ನಡ'ದ ಜತೆ ಹಂಚಿಕೊಂಡಿದ್ದಾರೆ.
ನೆಲಸಮವಾಗಲಿದೆ ರಾವ್ ತಂದೆ ಕಟ್ಟಿಸಿದ್ದ ಮನೆ
ಪ್ರೊ. ಯು. ಆರ್. ರಾವ್ ಅವರ ತಂದೆ ಕಟ್ಟಿಸಿದ್ದ ಉಡುಪಿ ಮೋಡನಿಡಂಬೂರಿನ ಪ್ರಗತಿ ನಗರದಲ್ಲಿರುವ ಮನೆ ಭಾಗಶ: ಉಳಿದಿದೆ. ಪಕ್ಕದಲ್ಲೇ ಹೊಸ ಮನೆ ನಿರ್ಮಾಣವಾಗುತ್ತಿದ್ದು ಈ ಹಿನ್ನಲೆಯಲ್ಲಿ ಇರುವ ಹಳೆ ಮನೆ ನೆಲಸಮವಾಗಲಿದೆ.
ನಾನೂ ಜನಸಾಮಾನ್ಯ, ಎಲ್ಲರಂತೆ ಒಬ್ಬ ಕೃಷ್ಣಭಕ್ತ
"ಎಂಟು ವರ್ಷಗಳ ಹಿಂದೆ ರೇಷ್ಮೆ ಪಂಚೆ, ಶಲ್ಯ ಹೊದ್ದು ಸರತಿಯಲ್ಲಿದ್ದ ಪ್ರೊ. ಯು. ಆರ್. ರಾವ್ ಅವರನ್ನು ನೇರವಾಗಿ ಶ್ರೀಕೃಷ್ಣ ದರ್ಶನ ಪಡೆಯಲು ವ್ಯವಸ್ಥೆ ಮಾಡುವುದಾಗಿ ಮನವಿ ಮಾಡಿದರೂ ಅವರು ಒಪ್ಪಿರಲಿಲ್ಲ. 'ನಾನೂ ಜನಸಾಮಾನ್ಯ, ಎಲ್ಲರಂತೆ ಒಬ್ಬ ಕೃಷ್ಣಭಕ್ತ,' ಎಂದು ಸರತಿಯಲ್ಲೇ ಮುಕ್ಕಾಲು ಗಂಟೆ ನಿಂತು ಶ್ರೀಕೃಷ್ಣ ದರ್ಶನ ಪಡೆದಿದ್ದರು ಎಂದು ಮಠದ ಸದಸ್ಯ ಲಾತವ್ಯ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಜೋತಿಷ್ಯ ಕಾರ್ಯಕ್ರಮದ ಬಗ್ಗೆ ರಾವ್ ಬೇಸರ
"ಶಿಕ್ಷಣ ಮತ್ತು ವೈದ್ಯಕೀಯ ನೆರವು ಜನರಿಗೆ ಸಿಗಬೇಕೆನ್ನುವುದೇ ಉಪಗ್ರಹ ಹಾರಿ ಬಿಟ್ಟಿದ್ದರ ಉದ್ದೇಶವಾಗಿತ್ತು. ಆದರೆ ಈ ಟಿವಿಯವರೆಲ್ಲ ದಿನಕ್ಕೆ ಅರ್ಧ ಗಂಟೆ ಜೋತಿಷ್ಯ ಕಾರ್ಯಕ್ರಮ ಪ್ರಸಾರ ಮಾಡುತ್ತಾರೆ. ಏನಾಗಿದೆ ಇವರಿಗೆ?," ಹೀಗೆಂದು ಪ್ರೊ. ಯು. ಆರ್. ರಾವ್ ಉಡುಪಿಗೆ ಎರಡು ವರ್ಷ ಹಿಂದೆ ಬಂದಾ ವಿದ್ಯಾರ್ಥಿಗಳ ಜತೆಗಿನ ಸಂವಾದದಲ್ಲಿ ಹೇಳಿದ್ದರು.
ಸದಾ ಮೃದುಭಾಷಿಯಾಗಿದ್ದರೂ ಒಂದಿಷ್ಟು ನೊಂದ ಮನದಾಳದ ಮಾತುಗಳು ಅವರ ಬಾಯಿಯಿಂದ ಹೊರ ಬಂದಿತ್ತು. ಉಪಗ್ರಹದ ಉದ್ದೇಶ ಹೈಜಾಕ್ ಮಾಡಿದ ನೋವನ್ನು ವ್ಯಕ್ತಪಡಿಸಿದ್ದರು.
ಆಸಕ್ತಿ ಬೆಳೆಯದ ಹೊರತು ವಿಜ್ಞಾನ ಕ್ಷೇತ್ರ ಬೆಳವಣಿಗೆಯಾಗದು
ಮಕ್ಕಳಲ್ಲಿ ಆಸಕ್ತಿ ಬೆಳೆಯದ ಹೊರತು ವಿಜ್ಞಾನ ಕ್ಷೇತ್ರ ಬೆಳವಣಿಗೆಯಾಗಲು ಸಾಧ್ಯವಿಲ್ಲ. ''ಪೋಷಕರು ತಮ್ಮ ಮಕ್ಕಳು ಐಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಂತಹ ಕೋರ್ಸ್ಗಳನ್ನೇ ಓದಬೇಕು ಎಂದು ಒತ್ತಡ ಹೇರಬಾರದು. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಂತಹ ಕೋರ್ಸ್ಗಳಿಗೆ ಪ್ರವೇಶ ಒದಗಿಸಿದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ,'' ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದರಂತೆ.
ಕ್ರಿಶ್ಚಿಯನ್ ಪ್ರಾಢಶಾಲೆಯ ಹಳೆ ವಿದ್ಯಾರ್ಥಿ
"ಪ್ರೊ. ಯು. ಆರ್. ರಾವ್ 15 ವರ್ಷಗಳ ಹಿಂದೆ ಶಾಲೆಗೆ ಭೇಟಿ ನೀಡಿದ್ದರು. ಅವರು ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿ. ಶಾಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು, ಅವರ ಧ್ಯೇಯ, ಆದರ್ಶ ಅನುಸರಣೆಗೆ ವಿದ್ಯಾರ್ಥಿಗಳಿಗೆ ಹೇಳುತ್ತೇವೆ. ಪ್ರೊ. ಯು. ಆರ್. ರಾವ್ ಅವರ ಅಗಲುವಿಕೆ ನಮ್ಮಗೆಲ್ಲ ದುಃಖ ತಂದಿದೆ," ಎನ್ನುತ್ತಾರೆ ಕ್ರಿಶ್ಚಿಯನ್ ಪ್ರಾಢಶಾಲೆ ಮುಖ್ಯ ಶಿಕ್ಷಕಿ ಹೆಲೆನ್ ಸಾಲಿನ್ಸ್.
ಪೇಜಾವರ ಶ್ರೀ ಸಂತಾಪ
ಇಸ್ರೋ ಮಾಜಿ ಅಧ್ಯಕ್ಷ, ಅಪ್ರತಿಮ ವಿಜ್ಞಾನಿ ಪ್ರೊ.ಯು.ಆರ್. ರಾವ್ ಅವರ ನಿಧನಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. "ಭಾರತದ ಬಾಹ್ಯಾಕಾಶ ಕ್ಷೇತ್ರದ ಕಾರ್ಯಕ್ರಮಗಳಿಗೆ ರಾವ್ ಅವರ ಗಮನಾರ್ಹ ಕೊಡುಗೆಯನ್ನು ಎಂದಿಗೂ ಮರೆಯಲಾಗದು," ಎಂದು ಅವರು ಹೇಳಿದ್ದಾರೆ .