ಕ್ರಿಕೆಟ್ ಕೋಚ್ ರವಿಶಾಸ್ತ್ರಿ ಪ್ರತಿ ವರ್ಷ ಕರ್ವಾಲುವಿಗೆ ಬರೋದೇಕೆ?
Recommended Video
ಉಡುಪಿ, ಮೇ 22: ಕಾರ್ಕಳ ಸಮೀಪದ ಮಹಾವಿಷ್ಣು ದೇವಸ್ಥಾನಕ್ಕೆ ಇಂದು ಮಂಗಳವಾರ ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ಪಂಚಾಮೃತ ಸೇವೆ ಮತ್ತು ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದು ಶಾಸ್ರ್ತಿ ಅವರ ಹತ್ತನೇ ಭೇಟಿಯಾಗಿದೆ. ವೀಕ್ಷಕ , ವಿವರಣೆಕಾರ ರವಿಶಾಸ್ತ್ರಿಗೂ ಕಾರ್ಕಳ ತಾಲೂಕಿನ ಕುಗ್ರಾಮ ಕರ್ವಾಲುವಿಗೂ ಎತ್ತಣಿಂದೆತ್ತಣ ಸಂಬಂಧ? ಅವರು ಪ್ರತಿ ವರ್ಷ ಈ ಸನ್ನಿಧಿಗೆ ಭೇಟಿ ನೀಡುವುದು ಏಕೆ ಎಂಬ ಕೂತುಹಲ ಎಲ್ಲರಲ್ಲೂ ಮನೆ ಮಾಡಿದೆ ಅಲ್ಲವೇ. ಅದಕ್ಕೆ ಉತ್ತರ ಇಲ್ಲಿದೆ ನೋಡಿ...
ಉಡುಪಿ ಶ್ರೀಕೃಷ್ಣಮಠ ಮತ್ತು ಮಠದ ಪೀಠಾಧಿಪತಿಗಳ ಹಿನ್ನೆಲೆ
ಇದೇ ಮುಖ್ಯ ಕಾರಣ
ಈ ಮಾಜಿ ಕ್ರಿಕೆಟಿಗ ವರ್ಷಂಪ್ರತಿ ಇಲ್ಲಿನ ಮಹಾವಿಷ್ಣು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಕಾರಣ ಅವರಿಗೆ 10 ವರ್ಷದ ಹಿಂದೆ ಇಲ್ಲೇ ಸಂತಾನ ಪ್ರಾಪ್ತಿಯಾಗಿತ್ತು. ಇಂದು ದೇವಸ್ಥಾನಕ್ಕೆ ಆಗಮಿಸಿದ ರವಿಶಾಸ್ತ್ರಿ ಇಲ್ಲಿ ಪಂಚಾಮೃತ ಸೇವೆ ಸಲ್ಲಿಸಿ, ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಖುಷಿಯಿಂದಲೇ ಪ್ರತಿಕ್ರಯಿಸಿದರು
ಇಲ್ಲಿಗೆ ಬರುವುದೆಂದರೆ ಅದೇನೋ ಖುಷಿ ಅಂತ ಮಾಧ್ಯಮಗಳಿಗೆ ಖುಷಿಯಿಂದಲೇ ಪ್ರತಿಕ್ರಿಯೆ ನೀಡಿದರು ರವಿಶಾಸ್ತ್ರಿ. ತಮ್ಮ ಪೂರ್ವಿಕರ ಮೂಲ ದೇವಸ್ಥಾನವೂ ಆಗಿರುವ ಕರ್ವಾಲು ಮಹಾವಿಷ್ಣು ದೇವಸ್ಥಾನ ಸನ್ನಿಧಿಗೆ ಆಗಮಿಸಿದ ಶಾಸ್ತ್ರಿ ಸ್ಥಳೀಯರೊಂದಿಗೆ ಖುಷಿಯಿಂದ ಬೆರೆತರು.
ಹರಕೆ ಫಲಿಸಿತು
ರವಿಶಾಸ್ತ್ರಿ ಮದುವೆಯಾಗಿ 20 ವರ್ಷ ಕಳೆದಿದ್ದರೂ ಅವರಿಗೆ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಹೀಗಾಗಿ ತಮ್ಮ ಮೂಲದೇವಸ್ಥಾನಕ್ಕೆ ಹರಕೆ ಹೊತ್ತರೆ ಸಂತಾನ ಸಿದ್ಧಿಯಾಗುತ್ತದೆ ಎಂದು ಯಾರೋ ಹೇಳಿದ್ದರು.
ಅದರಂತೆ 10 ವರ್ಷದ ಹಿಂದೆ ಮೊದಲ ಬಾರಿ ರವಿಶಾಸ್ತ್ರಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಇದಾಗಿ ನಾಲ್ಕೇ ತಿಂಗಳಲ್ಲಿ ಶಾಸ್ತ್ರಿ ಪತ್ನಿ ಗರ್ಭ ಧರಿಸಿ ಬಳಿಕ ಹೆಣ್ಣು ಮಗುವಾಗಿತ್ತು. ಇದಾದ ಮೇಲೆ ವರ್ಷಂಪ್ರತಿ ಇಲ್ಲಿಗೆ ಆಗಮಿಸುವ ರವಿಶಾಸ್ತ್ರಿ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಗ್ರಾಮಸ್ಥರಿಗೆ ಹಬ್ಬ
ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬದ ಸಮಾನ. ಅಂದು ಇಡೀ ಗ್ರಾಮಸ್ಥರೇ ಇಲ್ಲಿ ಸೇರುತ್ತಾರೆ. ಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧ ಬೆಳೆದಿದ್ದು , ಊರ ಶಾಲೆಗೆ ಮತ್ತು ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುವ ಮೂಲಕ ಊರಿಗೆ ಕೃತಜ್ನರಾಗಿದ್ದಾರೆ.