ಉಡುಪಿಯಲ್ಲಿ ಮತ್ತೆ ಸಾಬೀತಾದ ಕೊರಗಜ್ಜನ ಪವಾಡ, ವಿಗ್ರಹ ಕದ್ದವರು ಮಾಡಿದ್ದೇನು?
ಉಡುಪಿ, ಆಗಸ್ಟ್.12: ಕರಾವಳಿಯ ಜನರು ಅಪಾರವಾಗಿ ನಂಬುವ ದೈವ ಕೊರಗಜ್ಜ. ಕಲಿಗಾಲದಲ್ಲೂ ಕೊರಗಜ್ಜನ ಪವಾಡ ಮತ್ತೆ ಮತ್ತೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ. ಅಂತಹ ಕೊರಗಜ್ಜನನ್ನೇ ಕದ್ದವರ ಕಥೆ ಏನಾಯ್ತು? ಕೊರಗಜ್ಜನ ಪವಾಡದ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...
ಶಿವಾಂಶ ಸಂಭೂತ ಕೊರಗಜ್ಜ, ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ, ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ನಂಬಿಕೆ.
ವೈದ್ಯಲೋಕದ ಅಚ್ಚರಿ: ಈಕೆ ಬೆವೆತರೆ ನೀರಿನಂತೆ ರಕ್ತ ಸುರಿಯುತ್ತದೆ!
ಇಂತಹ ಕೊರಗಜ್ಜನ ವಿಗ್ರಹವೇ ಗುಡಿಯಿಂದ ಕಾಣೆಯಾದ ಘಟನೆ ಉಡುಪಿ ಜಿಲ್ಲೆ ಹಿರಿಯಡ್ಕದ ಪಡ್ಡಾಮ್ ಎಂಬಲ್ಲಿ ನಡೆದಿದೆ. ಹೌದು ಭಕ್ತಿಯಿಂದ ನಂಬುವ ದೈವಮೂರ್ತಿಯೇ ಕಾಣೆಯಾದರೆ ಜನರ ಪಾಡೇನು? ಅಲ್ವಾ. ಹಾಗಾಗಿ ಪಡ್ಡಾಮ್ ಎಂಬ ಹಳ್ಳಿಯ ಜನರು ದೇವರಿಗೇ ಒಂದು ಸವಾಲಿಟ್ರು.
ನಿನ್ನ ಕಾರಣಿಕವನ್ನು ನೀನು ತೋರಿಸದೇ ಹೋದ್ರೆ, ನಾವು ಇನ್ನು ನಿನಗೆ ಪೂಜೆ ಮಾಡಲ್ಲ. ನಿನ್ನ ಮೂರ್ತಿ ಕದ್ದವರು ಯಾರೆಂದು ನೀನೇ ಹುಡುಕಬೇಕು ಅಂತ ದೂರು ಕೊಟ್ರು. ಪವಾಡ ಏನಾಯ್ತು ಗೊತ್ತಾ? ಮರುದಿನವೇ ಕೊರಗಜ್ಜನ ವಿಗ್ರಹವನ್ನು ಕದ್ದವರು, ಗುಡಿಯ ಹೊರ ಭಾಗದಲ್ಲಿ ಗೋಣಿ ಚೀಲದಲ್ಲಿ ಬಿಟ್ಟು ಹೋಗಿದ್ದಾರೆ.
ಜನರಿಗೆ ಕೊರಗಜ್ಜನ ಪವಾಡ ಕಂಡು ವಿಸ್ಮಯವಾಗಿದೆ. ಪೊಲೀಸರಿಗೆ ದೂರು ನೀಡುವ ಮುನ್ನ ಕೊರಗಜ್ಜನಿಗೆ ದೂರು ನೀಡಿದ್ದ ಗ್ರಾಮಸ್ಥರಿಗೆ ದೈವದ ಮೇಲಿನ ಭರವಸೆ ಮತ್ತಷ್ಟು ಹೆಚ್ಚಾಗಿದೆ. ಕೊರಗಜ್ಜನ ಗುಡಿಯನ್ನು ಶುದ್ಧಮಾಡಿ ಮತ್ತೊಮ್ಮೆ ಪಂಚಲೋಹದ ಮೂರ್ತಿ ಪ್ರತಿಷ್ಠಾಪಿಸಲು ತಯಾರಿ ನಡೆಸಿದ್ದಾರೆ.
ಸನ್ನಿಧಾನದಲ್ಲಿ ದರ್ಶನ ಸೇವೆ ನಡೆಸಲು ಮುಂದಾಗಿದ್ದಾರೆ. ಹಿರಿಯಡ್ಕ ಪೊಲೀಸರು ಕೂಡ ನಮ್ಮ ಕೆಲಸವನ್ನು ದೈವವೇ ಮಾಡಿದೆ ಎಂಬ ಶ್ರದ್ಧೆಯನ್ನು ಪ್ರಕಟಿಸಿದ್ದಾರೆ. ಬಡವರ ದೈವ ಕೊರಗಜ್ಜ, ತನ್ನ ಪವಾಡಗಳಿಂದ ಮಂಗಳೂರು ಉಡುಪಿ ಭಾಗದ ಜನರ ಮನಸ್ಸಲ್ಲಿ ಮಹತ್ವದ ಸ್ಥಾನ ಹೊಂದಿದ್ದಾನೆ.
ಇದೀಗ ಪಡ್ಡಾಂ ದೈವಸ್ಥಾನದಲ್ಲಿ ಕೊರಗಜ್ಜ ಕುತೂಹಲದ ಕೇಂದ್ರಬಿಂದು ಎನಿಸಿದ್ದಾನೆ. ನಂಬಿಕೆಗೂ, ಮೂಢನಂಬಿಕೆಗೂ ತೆಳುವಾದ ವ್ಯತ್ಯಾಸ ಇರುತ್ತೆ. ದೇವರ ಭಯ ಎಷ್ಟೋ ಜನರ ಮನಪರಿವರ್ತನೆಗೆ ಕಾರಣವಾಗಿದೆ. ಕೊರಗಜ್ಜನ ವಿಗ್ರಹ ಕದ್ದವರಿಗೂ ದೇವರ ಭಯವಾಗಿರಬೇಕು.
ದೈವದ ಪವಾಡವೋ ಕದ್ದವನ ಭಯ ಕೆಲಸ ಮಾಡಿತೋ ಅನ್ನುವುದು ಸದ್ಯ ಯಕ್ಷಪ್ರಶ್ನೆಯಾಗಿ ಉಳಿದಿದೆಯಾದ್ರು ವಿಗ್ರಹ ಮತ್ತೆ ಸ್ವಸ್ಥಾನ ಸೇರಿರುವುದು ಭಕ್ತಜನರಲ್ಲಿ ಸಮಾಧಾನ ತಂದಿದೆ.