ಮಂಗಳೂರು ಸ್ಪೋಟಕ ಪ್ರಕರಣ ನಿಷ್ಪಕ್ಷಪಾತ ತನಿಖೆ ಎಂದ ಬೊಮ್ಮಾಯಿ
ಮಂಗಳೂರು, ಜನವರಿ 26: ಆದಿತ್ಯರಾವ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೋಟಕ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯನ್ನು ಟೀಕೆ ಮಾಡಲು ಯಾವುದೇ ಕಾರಣಗಳೂ ಇಲ್ಲ. ಯಾರೇ ತಪ್ಪಿತಸ್ಥರಾದರೂ ನ್ಯಾಯ ಸಮ್ಮತ, ನಿಷ್ಪಕ್ಷಪಾತ ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಪ್ರಕರಣದ ಕುರಿತು ನಾನು ಮೊದಲ ದಿನವೇ ಹೇಳಿದ್ದೇನೆ, ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಮೇಲೂ ನಾನು ದೋಷಾರೋಪ ಮಾಡಿರಲಿಲ್ಲ. ಪೊಲೀಸರ ತನಿಖೆಗೆ ಹೆದರಿಯೇ ಆದಿತ್ಯರಾವ್ ಶರಣಾಗಿದ್ದಾನೆ ಎಂದು ತಿಳಿಸಿದರು.
ಆದಿತ್ಯ ರಾವ್ ಲಾಕರ್ನಿಂದ 150 ಗ್ರಾಂ ಸೈನೈಡ್ ವಶ
ಬಾಂಬ್ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ದಕ್ಷತೆಯಿಂದ ತನಿಖೆಯಾಗಿದ್ದರಿಂದಲೇ ಆರೋಪಿ ಪತ್ತೆಯಾಗಿದ್ದಾನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಅಪರಾಧ ಅಪರಾಧವೇ, ಅಪರಾಧಿ ಅಪರಾಧಿಯೇ ಅನ್ನೋದು ನಮ್ಮ ನಂಬಿಕೆ. ಈ ವಿಷಯದಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.
ಸಚಿವ ಸಂಪುಟ ಗೊಂದಲ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಎಲ್ಲಾ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲಿದೆ. ಸಿಎಂ ಯಡಿಯೂರಪ್ಪನವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಸಚಿವ ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂ ಅವರಿಗಿದೆ. ವರಿಷ್ಠರ ಜೊತೆಗೆ ಚರ್ಚೆ ಮಾಡಿದ ನಂತರ ಅಂತಿಮ ನಿರ್ಧಾರಕ್ಕೆ ಬರುತ್ತಾರೆ.
ಆದಿತ್ಯ ರಾವ್ ಉಡುಪಿ ಮನೆಯಲ್ಲಿ ಪೊಲೀಸರ ಪರಿಶೀಲನೆ; ಅಕ್ಕಪಕ್ಕದವರು ಹೇಳುವುದೇನು?
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿದ್ದಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು. ಅಸ್ಪೃಶ್ಯತೆ ದೂರ ಮಾಡಿದವರಲ್ಲಿ ಪೇಜಾವರ ಸ್ವಾಮೀಜಿ ಪ್ರಮುಖರು. ಅವರೊಬ್ಬ ಶಾಂತಿಧೂತ. ಅವರ ವಿಚಾರಗಳಿಗೆ ಗೌರವ ಕೊಟ್ಟು, ಶ್ರೀಗಳ ಮಾರ್ಗದಲ್ಲಿ ನಡೆಯೋಣ ಎಂದರು.
ಬಿಜೆಪಿ ದೇಶಾದ್ಯಂತ ಸಿಎಎ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದ ಸಚಿವರು, ನಾಳೆ ರಾಜನಾಥ್ ಸಿಂಗ್ ಮಂಗಳೂರಿಗೆ ಬರ್ತಿದ್ದಾರೆ. ಮಂಗಳೂರು ಹೊರವಲಯದಲ್ಲಿ ಜಾಗೃತಿ ಸಮಾವೇಶ ನಡೆಯುವುದರಿಂದ, ಶಾಂತಿ, ಕಾನೂನು ಸುವ್ಯವಸ್ಥೆಗೆ ನಮ್ಮ ಇಲಾಖೆ ಎಲ್ಲಾ ಕ್ರಮ ಕೈಗೊಂಡಿದೆ ಎಂದು ಹೇಳಿದರು.