ಭಾರತ ಹೊಂದಾಣಿಕೆಯಾಗದಿದ್ದರೆ ಬೇರೆ ದೇಶ ನೋಡಿಕೊಳ್ಳಿ:ಬಿಜೆಪಿ ಶಾಸಕ
ಉಡುಪಿ, ಡಿಸೆಂಬರ್ 22: ಭಾರತ ದೇಶದ ಮುಸಲ್ಮಾನರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ, ಈಗಿರುವ ಅವರ ಪೌರತ್ವವನ್ನು ಕಸಿದುಕೊಳ್ಳುವುದೂ ಇಲ್ಲ ಎಂದು ಬಿಜೆಪಿ ಶಾಸಕ, ಆಡಳಿತ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಹೇಳಿದರು.
ಮಾಜಿ ಸಚಿವ ಯು.ಟಿ.ಖಾದರ್ ಅವರು ಬೆಂಕಿ ಹಚ್ಚುವ ಮಾತನಾಡುತ್ತಾರೆ, ಅವರ ಸಹಿತ ಯಾರಿಗೆಲ್ಲ ಭಾರತದಲ್ಲಿ ನೆಲೆಸಲು ಹೊಂದಾಣಿಕೆಯಾಗುತ್ತಿಲ್ಲವೋ, ದೇಶದಲ್ಲಿ ಅಸಹಹಿಷ್ಣುತೆ ಇದೆ ಎಂಬ ಭಾವನೆ ಬಂದಿದ್ದರೆ ಅವರೆಲ್ಲ ಬೇರೆ ದೇಶ ನೋಡಿ ಅಲ್ಲಿಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಎಂದರು.
ಬೆಂಗಳೂರಲ್ಲಿ ಪೌರತ್ವದ ಪರವಾಗಿ ಮೆರವಣಿಗೆ
ಕಾರ್ಕಳದಲ್ಲಿ ಮಾತನಾಡಿದ ಸುನೀಲ್ ಕುಮಾರ್, ದೇಶದ ಭದ್ರತೆಗೋಸ್ಕರ ಪೌರತ್ವ ಕಾಯ್ದೆ ಜಾರಿಗೊಳಿಸಲಾಗುತ್ತದೆ. ಪೌರತ್ವ ಕಾಯ್ದೆ ಬಗ್ಗೆ ಪ್ರತಿಭಡನಾಕಾರರಿಗೆ ಕಾಂಗ್ರೆಸ್ ಪಕ್ಷ ಸರಿಯಾದ ಮಾಹಿತಿ ನೀಡದೆ ಅನಗತ್ಯ ವಿವಾದಗಳನ್ನು ಮೂಡಿಸುತ್ತಿದೆ ಎಂದು ಕಾಂಗ್ರೆಸ್ ನ್ನು ಟೀಕಿಸಿದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬರುವ ಮುಸಲ್ಮಾನರಿಗೆ ಭಾರತೀಯ ಪೌರತ್ವ ಕೊಡುವ ಪ್ರಶ್ನೆಯೇ ಇಲ್ಲ. ಈ ಪೌರತ್ವ ಜಾರಿಯಿಂದ ಭಾರತದಲ್ಲಿ ನೆಲೆಸಿರುವ ಮುಸಲ್ಮಾನರಿಗೆ ಯಾವುದೇ ತೊಂದರೆ ಇಲ್ಲ ಅಂತ ಗೊತ್ತಿದ್ದರೂ ಪ್ರತಿಭಟನೆ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಬಾರದು ಎಂದರು.
ಪ್ರತಿಭಟಿಸುವವರು ಯಾವ ದೇಶದ ಪರವಾಗಿ ನಿಷ್ಠೆ ತೋರುತ್ತಿದ್ದಾರೆಂಬುದು ಯಕ್ಷ ಪ್ರಶ್ನೆಯಾಗಿದೆ. ಕಾಂಗ್ರೆಸ್ ಪಕ್ಷ ಯಾವ ದೇಶದ ನಿಷ್ಠೆಗಾಗಿ ಇಂದು ಧ್ವನಿ ಎತ್ತುತ್ತಿದ್ದಾರೆ ಎಂದು ಮೊದಲು ಸ್ಪಷ್ಟಪಡಿಸಬೇಕೆಂದರು.
ಪ್ರಚೋದನಕಾರಿ ಹೇಳಿಕೆ: ಯುಟಿ ಖಾದರ್ ವಿರುದ್ಧ ಎಫ್ಐಆರ್ ದಾಖಲು
ಗಲಭೆಗೆ ಖಾದರ್ ಮೂಲ ಕಾರಣ:
ಶಾಂತವಾಗಿದ್ದ ಮಂಗಳೂರಲ್ಲಿ ಗಲಭೆಯಾಗಲು ಮಾಜಿ ಸಚಿವ ಯು.ಟಿ.ಖಾದರ್ ಮೂಲ ಕಾರಣ. ಅವರ ಬೆಂಕಿ ಹಚ್ಚುವ ಹೇಳಿಕೆಯಿಂದಲೇ ಪ್ರತಿಭಟನೆ ವಿಕೋಪಕ್ಕೆ ತಿರುಗಿತು ಎಂದರು. ಅಧಿಕಾರದಲ್ಲಿದ್ದಾಗ ಪರೋಕ್ಷವಾಗಿ ಗಲಭೆ ಮಾಡಲು ಪ್ರೋತ್ಸಾಹ ನೀಡುತ್ತಿದ್ದರು, ಈಗ ಅಧಿಕಾರ ಇಲ್ಲದಾಗಲೂ ನೇರವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮಾಡಲು, ಗಲಭೆ ನಿಯಂತ್ರಿಸಲು, ಪೊಲೀಸರ ಮೇಲಾಗುವ ದೈಹಿಕ ಹಲ್ಲೆ ತಡೆಯಲು ಅವರು ತೆಗೆದುಕೊಂಡ ಕ್ರಮವನ್ನು ನಾವು ಸಮರ್ಥಿಸಿಕೊಳ್ಳಲು ಸಿದ್ದವಿರುವುದಾಗಿ ಹೇಳಿದರು.
ಮಂಗಳೂರಲ್ಲಿ ಅಶಾಂತಿ ಮೂಡಿಸಲು ಕಾರಣವಾದವರನ್ನು ಗಡಿಪಾರು ಮಾಡಬೇಕು ಎಂದು ಆದ್ರಹಿಸಿದರು. ಆರ್ಟಿಕಲ್ 370, ತ್ರಿವಳಿ ತಲಾಖ್, ರಾಮಮಂದಿರದ ತೀರ್ಪು ಬಂದಾಗ ಗಲಾಟೆಗಳು ನಡೆದಿಲ್ಲ. ಆದರೆ ಪೌರತ್ವದ ವಿಷಯದಲ್ಲಿ ಗಲಭೆ ಏಕೆ, ಪ್ರತಿಭಟನೆ ನಡೆಸುವವರಿಗೆ ದೇಶ ನಿಷ್ಠೆ ಇದೆಯೇ ಎಂದು ಪ್ರಶ್ನಿಸಿದರು.