ಪೇಜಾವರ ಶ್ರೀಗಳಿಗೆ ಮಕ್ಕಳಿದ್ದಾರೆಯೇ? ಆರೋಪಕ್ಕೆ ಉತ್ತರ ಇಲ್ಲಿದೆ
Recommended Video
ನನಗೆ ಮಕ್ಕಳಿದ್ದಾರೆ ಎಂಬುದು ಸಾಬೀತಾದರೆ ಪೀಠತ್ಯಾಗ ಮಾಡ್ತೇನೆ ಎಂದು ಪೇಜಾವರ ಮಠದ ಹಿರಿಯ ಯತಿಗಳಾದ ವಿಶ್ವೇಶ ತೀರ್ಥರು ಸವಾಲು ಹಾಕಿದ್ದಾರೆ. ಶೀರೂರು ಮಠದ ಲಕ್ಷ್ಮೀವರ ತೀರ್ಥರದು ಎನ್ನಲಾದ ಆಡಿಯೋ ಕ್ಲಿಪ್ಪಿಂಗ್ ನಲ್ಲಿ, ಅಷ್ಟಮಠದ ಎಲ್ಲ ಯತಿಗಳ ಬಗ್ಗೆ ಹಗುರವಾಗಿ ಮಾತನಾಡಲಾಗಿತ್ತು.
ಅಜ್ಜರಿಗೆ (ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು) ಚೆನ್ನೈನಲ್ಲಿ ಲವ್ ಇತ್ತು. ಅವರಿಗೆ ಮೂವರು ಮಕ್ಕಳಿದ್ದಾರೆ. ಡಾ.ಉಷಾ ಎಂಬುವವರು ವೈದ್ಯೆ, ಚೆನ್ನೈನಲ್ಲಿದ್ದಾರೆ. ಆಕೆ ಡಿಎನ್ ಎ ಪರೀಕ್ಷೆಗೂ ಸಿದ್ಧ ಎಂಬ ಹೇಳಿಕೆ ನೀಡಿದ್ದರು...ಈ ರೀತಿ ಆ ಆಡಿಯೋದಲ್ಲಿ ಆರೋಪಗಳು ಹಾಗೂ ಟೀಕೆಗಳು ಮುಂದುವರಿಯುತ್ತವೆ.
ಈ ಆರೋಪ ಹಾಗೂ ಟೀಕೆಗಳಿಗೆ ಉತ್ತರ ನೀಡಿ, ಚೆನ್ನೈನಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು, ನನಗೆ ಮಕ್ಕಳಿರುವುದು ಸಿದ್ಧವಾದರೆ ಪೀಠತ್ಯಾಗ ಮಾಡುವೆ. ತಾರುಣ್ಯದಲ್ಲಿ ಸ್ತ್ರೀ ಸಂಗವಿತ್ತು ಅನ್ನೋದು ಸುಳ್ಳು. ತಮಿಳುನಾಡಿನಲ್ಲಿ ನನಗೆ ಮಗಳಿದ್ದಾಳೆ ಅನ್ನೋದು ಶುದ್ಧ ಸುಳ್ಳು ಎಂದು ಅವರು ಹೇಳಿದ್ದಾರೆ.
ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್
ಇದೇ ವಿಚಾರವಾಗಿ ಇನ್ನೇನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ.
ನನಗೆ ಗಂಡುಮಗು ಇದೆ ಎಂದು ಬರೆಯಲಾಗಿತ್ತು
ಶೀರೂರು ಮಠದ ಗತಿಸಿದ ಶ್ರೀ ಲಕ್ಷ್ಮೀವರತೀರ್ಥರ ಆಪ್ತವರ್ಗವು ಬಹಿರಂಗಗೊಳಿಸಿದ ಆಡಿಯೋದಲ್ಲಿ ತಾರುಣ್ಯದಲ್ಲಿ ನನಗೆ ಸ್ತ್ರೀಸಂಗವಿತ್ತು. ಪದ್ಮಾ ಎಂಬ ಹೆಣ್ಣು ಮಗಳು ತಮಿಳುನಾಡಿನಲ್ಲಿದ್ದಾಳೆಂಬ ಶುದ್ಧಸುಳ್ಳು ಸಂಗತಿಯನ್ನು ಉಲ್ಲೇಖಿಸಲಾಗಿದೆ. ಡಿಸೆಂಬರ್ ನಲ್ಲಿ ಇವರೇ ಕಳುಹಿಸಿರಬಹುದಾದ ಪತ್ರದಲ್ಲಿ ಅವನು ಗಂಡುಮಗನೆಂದು ಅವನ ಕುಲನಾಮವನ್ನು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸದಿಂದ ಇದು ಕಲ್ಪನೆಯೆಂದು ಗೊತ್ತಾಗುತ್ತದೆ. ಇದನ್ನು ನಮ್ಮ ದೇಶದ ಯಾರೂ ನಂಬುವುದಿಲ್ಲವೆಂದು ನನಗೆ ಗೊತ್ತಿದೆ. ಈ ಬಗ್ಗೆ ಯಾವ ವಿಚಾರಣೆ ಹಾಗೂ ಪರೀಕ್ಷೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಇದು ಬರೇ ಸುಳ್ಳು ಆರೋಪ. ಇದನ್ನು ಸಿದ್ದಪಡಿಸಲು ಸಾಧ್ಯವೇ ಇಲ್ಲ. ಇದು ಸಿದ್ಧವಾದರೆ ನಾನು ತತ್ ತಕ್ಷಣ ಪೀಠ ತ್ಯಾಗ ಮಾಡುವೆನು.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ
ಲಕ್ಷೀವರತೀರ್ಥರ ನಿಧನದ ನಂತರ ಅವರ ಅವ್ಯವಹಾರದ ಬಗ್ಗೆ ಹೇಳಿಕೆ ಸರಿಯಿಲ್ಲವೆಂದು ಕೆಲವರು ಆಕ್ಷೇಪಿಸಿದ್ದಾರೆ. ಲಕ್ಷೀವರತೀರ್ಥರಿಗೆ ವಿಠಲ ದೇವರನ್ನು ಯಾಕೆ ಕೊಟ್ಟಿಲ್ಲ? ಅವರ ಅಂತ್ಯದರ್ಶನಕ್ಕೆ ಯಾಕೆ ಹೋಗಿಲ್ಲ ಮುಂತಾದ ಪ್ರಶ್ನೆ, ಆಕ್ಷೇಪವನ್ನು ಮಾದ್ಯಮದವರು ಮಾಡಿದ್ದರಿಂದ ಅದಕ್ಕೆ ಉತ್ತರವಾಗಿ, ಅವರು ಸನ್ಯಾಸಧರ್ಮವನ್ನು ಪೂರ್ಣವಾಗಿ ಉಲ್ಲಂಘಿಸಿದ್ದಾರೆಂಬುದನ್ನು ಅನಿವಾರ್ಯವಾಗಿ ನಾನು ವಿವರಿಸಬೇಕಾಯಿತು. ಹಿಂದಿನ ಪಲಿಮಾರು ಸ್ವಾಮಿಗಳಾದ ರಘುವಲ್ಲಭ ತೀರ್ಥರು, ಹಿಂದಿನ ಶೀರೂರು ಸ್ವಾಮಿಗಳಾದ ಮನೋಜ್ಞ ತೀರ್ಥರು , ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ವಿದ್ಯಾಭೂಷಣರು ಪೀಠ ತ್ಯಾಗ ಮಾಡಲು ನನ್ನ ಪಾತ್ರವೇನೂ ಇಲ್ಲ. ಅವರನ್ನು ಪೀಠದಲ್ಲಿ ಉಳಿಸಲು ಎಲ್ಲಾಪ್ರಯತ್ನ ಮಾಡಿದ್ದೇನೆ. ಅವರಾಗಿ ಸ್ವೇಚ್ಛೆಯಿಂದ ಹೋಗಿದ್ದಾರೆ.
ಎಲ್ಲದಕ್ಕೂ ನನ್ನ ದೂಷಿಸುವುದು ಸರಿಯಲ್ಲ
ಅದಕ್ಕಾಗಿ ನನ್ನನ್ನು ಹಂತಕನನ್ನಾಗಿ ದೂಷಿಸುವುದು ಸರ್ವಥಾ ತಪ್ಪು. ರಘುವಲ್ಲಭರಿಗೆ 5 ಲಕ್ಷ ರುಪಾಯಿ ಕೊಟ್ಟಿರುವೆನೆಂದು ಆರೋಪಿಸುವುದೂ ಪೂರ್ಣ ಸುಳ್ಳು. ಅವರಿಗೆ ಇದಕ್ಕಾಗಿ ಒಂದು ಪೈಸೆ ಕೂಡ ಕೊಟ್ಟಿಲ್ಲ. ವಿಶ್ವ ವಿಜಯರನ್ನು ನಾನು ಕಳುಹಿಸಿಯೇ ಇಲ್ಲ. ಅವರಾಗಿಯೇ ಹೋದರು. ಹೋದರೆ ಅನೇಕ ಸಮಸ್ಯೆಯಾಗುವುದೆಂದು ನಾನು ಹೇಳಿದ್ದೆ. ಆದರೂ ಹೋದರು. ಬಂದ ಮೇಲೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿಯೂ ಹೇಳಿದೆ. ಆದರೆ ಅವರು ನನಗೆ ತಿಳಿಸದಲೇ ಪೀಠತ್ಯಾಗ ಮಾಡಿದ್ದಾರೆ. ವ್ಯಾಸರಾಜ ಸ್ವಾಮಿಗಳ ಆಶ್ರಮ, ಸುವಿದ್ಯೇಂದ್ರರ ಆಶ್ರಮ ಸ್ವೀಕಾರ ಮತ್ತು ಪೀಠತ್ಯಾಗದಲ್ಲಿ ನನ್ನ ಪಾತ್ರ ಕಿಂಚಿತ್ತು ಇಲ್ಲ. ಅದರೂ ಇದೆಲ್ಲವುಗಳಿಗೂ ನಾನೇ ಕಾರಣವೆಂದು ದೂಷಿಸುವುದು ಸರ್ವಥಾ ಸರಿಯಲ್ಲ. ಶೀರೂರು ಸ್ವಾಮಿಗಳಿಂದ ನಾನು ಯಾವುದೇ ರೀತಿಯ ಹಣವನ್ನು ಅಪೇಕ್ಷಿಸಲೂ ಇಲ್ಲ, ಕೇಳಲೂ ಇಲ್ಲ. ಇದೆಲ್ಲದರ ಬಗ್ಗೆಯೂ ಬಹಿರಂಗ ವಿಚಾರಣೆಗೆ ನಾನು ಯಾವಾಗಲೂ ಸಿದ್ಧ.
ಶೀರೂರು ಸ್ವಾಮಿಗಳಿಗೆ ಮದ್ಯ, ಮಾನಿನಿ ವ್ಯಸನ
ಲಕ್ಷ್ಮೀವರ ತೀರ್ಥರು ಸಾವನ್ನಪ್ಪಿದ ದಿನದಂದು ಹುಬ್ಬಳ್ಳಿಯಲ್ಲಿದ್ದ ಪೇಜಾವರ ಶ್ರೀಗಳು ಶೀರೂರು ಶ್ರೀಗಳ ಅಂತಿಮ ವಿಧಿ- ವಿಧಾನದಲ್ಲಿ ಪಾಲ್ಗೊಂಡಿರಲಿಲ್ಲ. ಆ ನಂತರ ಉಡುಪಿಗೆ ವಾಪಸಾಗಿ, ಪತ್ರಿಕಾ ಗೋಷ್ಠಿ ನಡೆಸಿ, ಶೀರೂರು ಸ್ವಾಮಿಗಳಿಗೆ ಮದ್ಯ, ಮಾನಿನಿ ವ್ಯಸನವಿತ್ತು. ಅವರ ಸಾವಿಗೆ ಇಂಥಿಂಥ ಕಾರಣವಿರಬಹುದು. ಒಂದು ವೇಳೆ ವಿಷಪ್ರಾಶನ ಆಗಿದ್ದರೆ, ಅದು ಅವರ ಕಡೆಯವರಿಂದಲೇ ಎಂಬ ಮಾತು ಹೇಳಿದ್ದರು. ಅದಾದ ಮೇಲೆ ಶೀರೂರು ಶ್ರೀಗಳು ಬದುಕಿದ್ದಾಗ ಆಡಿದ್ದ ಸಂಭಾಷಣೆ ಎನ್ನಲಾದ ಕ್ಲಿಪ್ಪಿಂಗ್ ಹೊರಬಂದಿತ್ತು. ಅದರಲ್ಲಿ ಪೇಜಾವರ ಶ್ರೀಗಳೂ ಸೇರಿದ ಹಾಗೆ ಅಷ್ಟ ಮಠದ ಇತರ ಸ್ವಾಮಿಗಳ ಮೇಲೆ ನಾನಾ ಆರೋಪ ಮಾಡಲಾಗಿತ್ತು.