'ಕನಕನಿಗೆ ಅಪಚಾರ ಎಸಗುವರ ವಿರುದ್ಧದ ಹೋರಾಟದಲ್ಲಿ ನಾನೂ ಭಾಗಿಯಾಗ್ತೇನೆ'
ಉಡುಪಿ, ನವೆಂಬರ್ 13: ಕನಕದಾಸರ ಭಕ್ತಿ ನೋಡಿ ಪೂರ್ವಾಭಿಮುಖವಾಗಿದ್ದ ಉಡುಪಿಯ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ. ಆದರೆ ಆ ಬಗ್ಗೆ ಕೆಲವರು ಅಪಚಾರ ಎಸಗಿದ್ದಾರೆ. ಅಂಥವರ ವಿರುದ್ಧ ಹೋರಾಟ ನಡೆಸುವುದಾದರೆ ಜತೆಗೆ ಭಾಗವಹಿಸುವುದಕ್ಕೆ ನಾನು ಸಿದ್ಧ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕನಕನ ಕಿಂಡಿ: ಪೇಜಾವರ ಶ್ರೀ ಹೇಳಿದ್ದೇನು, ಬನ್ನಂಜೆ ಅಭಿಪ್ರಾಯವೇನು?
ಕೃಷ್ಣ ಮಠದಲ್ಲಿ ಭಾನುವಾರ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಮಠದ ಹೊರಗೆ ಇರುವ ಕಿಂಡಿಯ ಮೂಲಕವಾಗಿ ಕೃಷ್ಣನನ್ನು ಕನಕ ನೋಡಿದರೆ, ಒಳಗಿರುವುದು ಕೃಷ್ಣನು ಕನಕನನ್ನು ದರ್ಶನ ಮಾಡಿದ ಕಿಂಡಿ. ಕೃಷ್ಣನು ಪಶ್ಚಿಮಕ್ಕೆ ತಿರುಗಿದ ಎನ್ನುವುದಕ್ಕೆ ವಾದಿರಾಜರು ಹಾಗೂ ವ್ಯಾಸರಾಜರು ಸಾಕ್ಷಿ. ಅವರ ಸ್ತೋತ್ರದಲ್ಲಿಯೇ ಆ ಬಗ್ಗೆ ಉಲ್ಲೇಖವಿದೆ ಎಂದಿದ್ದಾರೆ.
ಕೆಲವು ಬುದ್ಧಿಜೀವಿಗಳು ಕೇವಲ ಪ್ರಚಾರಕ್ಕಾಗಿ ಕನಕನ ಭಕ್ತಿಯಿಂದ ಕೃಷ್ಣ ತಿರುಗಿ ನಿಂತಿಲ್ಲ ಎನ್ನುತ್ತಾರೆ. ಆದರೆ ಕನಕನ ಕಿಂಡಿ ಹಾಗೂ ಪವಾಡ ನಡೆದಿರುವುದು ಇವೆಲ್ಲವೂ ಸತ್ಯ. ಈ ಸತ್ಯವನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ಕೃಷ್ಣ ಕನಕರ ಭಕ್ತಿಗೆ ಪಶ್ಚಿಮಕ್ಕೆ ತಿರುಗಿದ್ದು ಹೌದೆ?
ಬಸವಣ್ಣನಂತೆಯೇ ಕನಕ ದಾಸರು ಕೂಡ ಕ್ರಾಂತಿಕಾರಿಯಾಗಿದ್ದರು. ಶ್ರೀಕೃಷ್ಣನನ್ನು ತಿರುಗಿಸುವ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ. ಯುವಜನತೆ ಪಾಶ್ಚಾತ್ಯದಿಂದ ನಮ್ಮ ಸಂಸ್ಕೃತಿಯ ಕಡೆಗೆ ತಿರುಗಬೇಕು ಎಂದು ಸಲಹೆ ಮಾಡಿದ್ದಾರೆ.