ಮೀಸಲಾತಿ ನಿಲ್ಲಿಸಿ, ಸಂವಿಧಾನ ಬದಲಾಯಿಸಿ ಎಂದಿಲ್ಲ: ಪೇಜಾವರ ಶ್ರೀ
ಉಡುಪಿ, ನವೆಂಬರ್ 27: "ನಾನು ಈಗಿರುವ ಸಂವಿಧಾನ ಬದಲಾಯಿಸಿ ಅಥವಾ ಮೀಸಲಾತಿಯನ್ನು ನಿಲ್ಲಿಸಿ ಎಂದು ಹೇಳಿಲ್ಲ," ಎಂಬುದಾಗಿ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.
ಸೋಮವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಈಗಿರುವ ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ನಾನು ಹೇಳಿದ್ದೆ. ತಿದ್ದುಪಡಿ ಮಾಡುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯವನ್ನು ಬಹುಸಂಖ್ಯಾತರಿಗೂ ವಿಸ್ತರಿಸಬೇಕು," ಎಂದು ನಾನು ಹೇಳಿದ್ದಾಗಿ ಅವರು ವಿವರಿಸಿದರು.
ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವುದು ಬೇಡ. ಎಲ್ಲರನ್ನೂ ನಾವು ಸಮಾನಾವಾಗಿ ನೋಡಬೇಕು ಎಂಬ ಆಶಯದಲ್ಲಿ ನಾನು, "ಮೀಸಲಾತಿಯನ್ನು ಬಹುಸಂಖ್ಯಾತರಿಗೂ ವಿಸ್ತರಿಸಿದರೆ ಬಹುಸಂಖ್ಯಾತರಾಗಿರುವ ದಲಿತರು ಹಾಗೂ ಹಿಂದುಳಿದ ವರ್ಗದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸೌಲಭ್ಯ ಸಿಗುತ್ತದೆ. ಚರ್ಚ್ ಮತ್ತು ಮಸೀದಿಗೆ ಇರುವ ಸ್ವಾಯತ್ತತೆ ಮಂದಿರಗಳಿಗೂ ದೊರೆಯುತ್ತದೆ," ಎಂದು ಈ ಮಾತು ಹೇಳಿದ್ದೆ ಎಂಬುದಾಗಿ ಪೇಜಾವರ ಶ್ರೀಗಳು ಮಾಹಿತಿ ನೀಡಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಧರ್ಮ ಸಂಸದ್ ಯಶಸ್ವಿಯಾಗಿದ್ದು ಬುದ್ಧಿ ಜೀವಿಗಳು ಎಂದು ಹೇಳಿಕೊಳ್ಳುವವರಿಗೆ, ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಸಾಹಿತಿಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿಗಳು ವಿನಾಕಾರಣ ಪಾಪದ ದಲಿತರನ್ನು ಎಳೆದು ತರುತ್ತಿದ್ದಾರೆ. ನಾನು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿಲ್ಲ. ದಲಿತರ ಮೀಸಲಾತಿ ವಿಚಾರ ನಾನು ಮಾತನಾಡಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂವಿಧಾನಕ್ಕೆ ಅಪಮಾನ ಮಾಡಿದರೆ ದೇಶಕ್ಕೆ ಅಪಮಾನ ಮಾಡಿದಂತೆ. ಸಾಹಿತಿಗಳಿಗೂ ಇದು ಅರ್ಥವಾಗಲಿಲ್ಲ ಅನ್ನುವುದೇ ವಿಪರ್ಯಾಸ ಎಂದು ಅವರು ಅಭಿಪ್ರಾಯಪಟ್ಟರು. ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚನೆ ಮಾಡಿದ್ದಲ್ಲ. ಸಂವಿಧಾನವನ್ನು ದೇಶದ ಎಲ್ಲಾ ಪ್ರತಿನಿಧಿಗಳು ಸೇರಿ ರಚನೆ ಮಾಡಿದ್ದು. ಅಲ್ಲಾಡಿ ಕೃಷ್ಣಸ್ವಾಮಿ, ಅಂಬೇಡ್ಕರ್ ಜೊತೆ ಅಯ್ಯರ್, ಕೆ.ಎಂ ಮುನ್ಶಿ, ಬೆನಗಲ್ ಮುಂತಾದವರೂ ಪ್ರಮುಖರೆಲ್ಲಾ ಸೇರಿ ರಚಿಸಿದ್ದು ಎಂದು ಅವರು ಹೇಳಿದರು.
ದ್ವಾರಕನಾಥ್ ದೊಡ್ಡ ವಕೀಲರು ಅವರಿಗೆ ಇದೆಲ್ಲಾ ಅರ್ಥವಾಗಲಿಲ್ಲ ಎಂಬುದೇ ವಿಪರ್ಯಾಸ ಎಂದ ಶ್ರೀಗಳು 'ಶಾದಿ ಭಾಗ್ಯ ದಲಿತರಿಗೆ ಯಾಕೆ ಇಲ್ಲ? ದಲಿತರಲ್ಲಿ ಬಡವರು ಇಲ್ವಾ? ಎಂದು ಪ್ರಶ್ನಿಸಿದರು.