ಡಿವೈಎಸ್ಪಿ ಗಣಪತಿಯಿಂದ ಯಾವುದೇ ಕರೆ ಬಂದಿಲ್ಲ : ಸೊರಕೆ
ಉಡುಪಿ, ಆಗಸ್ಟ್ 24: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಗಣಪತಿ ಫೋನಿನಲ್ಲಿರುವ ದಾಖಲೆಗಳನ್ನು ನಾಶಮಾಡಲಾಗಿದೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿದಂತೆ 30 ಜನರ ಕಾಲ್ ಡಿಟೇಲ್ಸ್ ಡಿಲೀಟ್ ಆಗಿದೆ ಎಂಬ ವಿಚಾರಕ್ಕೆ ಉಡುಪಿಯಲ್ಲಿ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ ನೀಡಿದ್ದಾರೆ.
ಗಣಪತಿ ಆತ್ಮಹತ್ಯೆಯ ಪ್ರಮುಖ ಸಾಕ್ಷಿಗಳ ನಾಶ? ಇಲ್ಲಿದೆ ಸ್ಫೋಟಕ ಮಾಹಿತಿ
"ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂದರ್ಭ ನನಗೆ ಯಾವುದೇ ಕಾಲ್ ಬಂದಿಲ್ಲ," ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
"ಪುತ್ತೂರಲ್ಲಿ ಶಾಸಕನಾಗಿದ್ದಾಗ ಗಣಪತಿ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಉತ್ತಮ, ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ಈ ಸಂದರ್ಭದಲ್ಲಿ ಅವರ ಸಂಪರ್ಕ ಇತ್ತು. ಅಮಾನತು ಆದ ಸಂದರ್ಭದಲ್ಲಿಯೂ ನನ್ನ ಸಂಪರ್ಕ ಮಾಡಿದ್ದರು. ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನೆಗೂ ಬರುತ್ತಿದ್ದರು.ಅಮಾನತು ವಾಪಾಸ್ ಪಡೆದುಕೊಳ್ಳಲು ಕಮಿಷನರ್ ಗೆ, ಗೃಹ ಸಚಿವರ ಜೊತೆ ಮಾತನಾಡುವಂತೆ ಮನವಿ ಮಾಡಿದ್ದರು," ಎಂದು ಸೊರಕೆ ಹೇಳಿದ್ದಾರೆ.
ಗೃಹ ಸಚಿವರಾಗಿದ್ದ ಸಚಿವ ಜಾರ್ಜ್ ಅವರು ಗಣಪತಿಯವರಿಗೆ ಸಹಾಯ ಮಾಡಿದ್ದರು. ಆ ಬಳಿಕ ಯಾವುದೇ ಸಂಪರ್ಕ ಇರಲಿಲ್ಲ ಎಂದು ವಿನಯ್ ಕುಮಾರ್ ಸೊರಕೆ ಸ್ಪಷ್ಟಪಡಿಸಿದ್ದಾರೆ.