ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರು ಜೊತೆಗಿದ್ದಾರೆ: ಸಂಸದೆ ಶೋಭಾ
ಉಡುಪಿ, ಮೇ 06: ವಿದೇಶದಿಂದ ತಮಗೆ ಬೆದರಿಕೆ ಕರೆ ಬರುತ್ತಿರುವುದಾಗಿ ನಿನ್ನೆ ವಿಡಿಯೋ ಮಾಡಿ, ಸಂಸದೆ ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಂದು ಕುಂದಾಪುರದಲ್ಲಿ ಮಾತನಾಡಿದ ಅವರು, ನಿತ್ಯವೂ ಹಲವು ಬೆದರಿಕೆ ಕರೆ ಬರುತ್ತಿವೆ. ಈ ಬಗ್ಗೆ ತನಿಖೆಯಾಗಲಿ. ಬೆದರಿಕೆ ಕರೆ ಬಗ್ಗೆ ಡಿಜಿಐಜಿ ಪ್ರವೀಣ್ ಸೂದ್ ಬಳಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
"ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದೇನೆ. ಪಿಎಫ್ಐ ಹಾಗೂ ಎಸ್ ಡಿಪಿಐ ವಿರುದ್ಧ ಮಾತನಾಡಿದಾಗಲೆಲ್ಲ ಇಂತಹ ಕರೆ ಬರುತ್ತೆ. ಹಿಂದೂ ಯುವಕರ ಹತ್ಯೆಯಾದ ಬಗ್ಗೆ ಮಾತನಾಡಿದಾಗ ಕರೆ ಬರುತ್ತೆ. ಕಳೆದ 2 ವರ್ಷದಿಂದ ಇಂತಹ ಕರೆ ಬರುತ್ತಿದ್ದ ಬಗ್ಗೆ ಈ ಹಿಂದೆಯೂ ದೂರು ಕೊಟ್ಟಿದ್ದೆ ಎಂದು ಹೇಳಿದ್ದಾರೆ.
ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆ: ವಿಡಿಯೋ ಮಾಡಿ ಬೇಸರ ಹಂಚಿಕೊಂಡ ಸಂಸದೆ
ಇತ್ತೀಚೆಗೆ ತಬ್ಲಿಘಿಗಳ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಕರೆಗಳು ಬರುತ್ತಿವೆ. ಇಂತಹ ಕರೆ ಮಾಡುವವರ ಪತ್ತೆ ಮಾಡುವ ಕಾರ್ಯವಾಗಬೇಕು. ಆದರೆ ನನಗೆ ಪೊಲೀಸರ ಭದ್ರತೆ ಬೇಡ, ಕಾರ್ಯಕರ್ತರು ನನ್ನ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.