ಈವರೆಗೆ ಪತ್ತೆಯಾಗದ ಮಲ್ಪೆ ಮೀನುಗಾರರು : ಆತಂಕ ವ್ಯಕ್ತಪಡಿಸಿದ ಪೇಜಾವರ ಶ್ರೀ
ಉಡುಪಿ, ಜನವರಿ 03: ಆಳ ಸಮುದ್ರದಿಂದ ಕಣ್ಮರೆಯಾಗಿರುವ ಮಲ್ಪೆಯ ಏಳು ಮಂದಿ ಮೀನುಗಾರರ ಶೋಧ ಕಾರ್ಯ ಮುಂದುವರೆದಿದೆ. ಆದರೆ ನಾಪತ್ತೆಯಾಗಿರುವ ಮೀನುಗಾರರರು ಹಾಗೂ ಅವರಿದ್ದ ಸುವರ್ಣ ತ್ರಿಭುಜ ಬೋಡ್ ನ ಸುಳಿವು ಈವರೆಗೆ ಪತ್ತೆಯಾಗಿಲ್ಲ.
ಮೀನುಗಾರರು ನಾಪತ್ತೆಯಾಗಿ 17 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ 7 ಮೀನುಗಾರರ ಕುಟುಂಬ ಆತಂಕದಲ್ಲಿ ದಿನ ದೂಡುತ್ತಿವೆ. ಈ ನಡುವೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಉಡುಪಿ ಪೇಜಾವರ ಶ್ರೀ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನೂ ಸಿಗದ ಬೋಟ್ ಸುಳಿವು: ಗಡುವು ನೀಡಿದ ಮಲ್ಪೆ ಮೀನುಗಾರರ ಸಂಘ
ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೇಜಾವರ ಶ್ರೀ, ಮಲ್ಪೆ ಮೀನುಗಾರ ನಾಪತ್ತೆ ಪ್ರಕರಣ ನನ್ನ ಗಮನಕ್ಕೆ ಬಂದಿರಲಿಲ್ಲ. ಇವತ್ತು ನನಗೆ ವಿಷಯ ಗೊತ್ತಾಗಿದೆ. ಈ ವಿಚಾರ ತಿಳಿದು ನನ್ನ ಮನಸ್ಸಿಗೆ ಆತಂಕವಾಗಿದೆ ಎಂದರು.
ಮೀನುಗಾರರ ಪತ್ತೆ ಮಾಡುವ ಸಲುವಾಗಿ ಇಂದಿನಿಂದ ನಾನೂ ಶ್ರಮಿಸುತ್ತೇನೆ. ಸರಕಾರದ ಮೇಲೆ ಒತ್ತಡ ತರುವ ಕೆಲಸಕ್ಕೆ ಮುಂದಾಗುತ್ತೇನೆ. ಮೀನುಗಾರರ ಜೊತೆ ನಾನಿದ್ದೇನೆ. ನಾಪತ್ತೆಯಾಗಿರುವ ಮಲ್ಪೆ ಮೀನುಗಾರ ಕುಟುಂಬದ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ಉಡುಪಿಗೆ ಬಂದ ತಕ್ಷಣ ಮೀನುಗಾರ ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ. ಮುಂದಿನ ಕ್ರಮದ ಬಗ್ಗೆ ಚರ್ಚಿಸುತ್ತೇನೆ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.