ದೇವಾಲಯ-ನ್ಯಾಯಾಲಯ ಮೊದಲು ಹುಟ್ಟಿದ್ದು ಯಾವುದು?: ನಟ ಶಿವರಾಂ ಪ್ರಶ್ನೆ
ಉಡುಪಿ, ನವೆಂಬರ್.02: ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಹೋರಾಟ ಮುಂದುವರೆದಿದೆ.
5 ರಾಜ್ಯಗಳಲ್ಲಿ ಬೃಹತ್ ಜನಾಂದೋಲನ ರೂಪಿಸಲು ಅಯ್ಯಪ್ಪ ಭಕ್ತರು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ನಾಡಿನಿಂದ ಶಬರಿಮಲೆ ಬೃಹತ್ ಹೋರಾಟಕ್ಕೆ ಪಾಂಚಜನ್ಯ ಮೊಳಗಿಸಲಾಗಿದೆ.
ಶಬರಿಮಲೆಗೆ ಮುಸ್ಲಿಂ, ಕ್ರೈಸ್ತ ಮಹಿಳೆಯರು ಪ್ರವೇಶಿಸಲು ಪ್ರಯತ್ನಿಸಿದ್ದೇಕೆ?
ಉಡುಪಿಯ ಎಂಜಿಎಂ ಮೈದಾನದಲ್ಲಿ ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಉಡುಪಿಯಲ್ಲಿ ಆಯೋಜಿಸಲಾಗಿದ್ದ ಧರ್ಮ ಜನಗಾಗೃತಿ ಜನಾಂದೋಲನದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಈ ಬೃಹತ್ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ , ಧರ್ಮ ಮತ್ತು ಸಂಪ್ರದಾಯದ ಪರಿವರ್ತನೆ ಮಾಡೋದು ಸುಪ್ರೀಂ ಕೋರ್ಟ್ ಕೆಲಸವಲ್ಲ. ಧರ್ಮದ ಕುರಿತು ನಿರ್ಣಯ ಮಾಡುವುದು ಸರ್ಕಾರವೂ ಅಲ್ಲ, ಸಂಪ್ರದಾಯದ ಬದಲಾವಣೆ ಏನಿದ್ದರೂ ಸಂತರು ಮತ್ತು ಭಕ್ತರ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ಶಿಸ್ತು ಬೆಳೆಸಿದ ಕೀರ್ತಿ ಶಬರಿಮಲೆಗಿದೆ
ಹಿಂದೂ ಸಂಘಟನೆಯ ಕೇಂದ್ರಬಿಂದು ಶಬರಿಮಲೆ. ಹಿಂದೂ ಸಮಾಜದಲ್ಲಿ ಧಾರ್ಮಿಕ ನಿಯಮದ ಶಿಸ್ತು ಬೆಳೆಸಿದ ಕೀರ್ತಿ ಶಬರಿಮಲೆಗಿದೆ. ಹಿಂದೂ ಸಮಾಜದ ಬೆಂಬಲ ಇದ್ದರೆ ಮಾತ್ರ ಸಂಪ್ರದಾಯದಲ್ಲಿ ಪರಿವರ್ತನೆ ಆಗಬೇಕು. ಅಯ್ಯಪ್ಪ ದೇವಸ್ಥಾನದ ತೀರ್ಪು ಪುನರ್ ವಿಮರ್ಶೆ ಆಗಬೇಕು. ಕೇರಳ ಸರ್ಕಾರ ಶೃದ್ಧಾಳುಗಳ ದೌರ್ಜನ್ಯ ಮಾಡುತ್ತಿದ್ದು, ಸರ್ವಾಧಿಕಾರಿ ಧೋರಣೆ ತೋರಿಸುತ್ತಿದೆ. ನಾನು ಯಾವತ್ತೂ ಸಂಪ್ರದಾಯ ಬದಲಾವಣೆಯ ಪರ. ಆದರೆ ಶಬರಿಮಲೆ ವಿಚಾರದಲ್ಲಿ ಶೃದ್ಧಾಳುಗಳ ನಂಬಿಕೆಯೇ ಅಂತಿಮ ಎಂದು ಪೇಜಾವರ ಶ್ರೀ ತಿಳಿಸಿದ್ದಾರೆ.
ಕೋಟ್ಯಾಂತರ ಭಕ್ತರಿಗೆ ನೋವಾಗಿದೆ
ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಅಯ್ಯಪ್ಪ ಭಕ್ತ ಸಮಿತಿ ಅಧ್ಯಕ್ಷ, ನಟ ಶಿವರಾಂ ಮಾತನಾಡಿ, ದೇವಾಲಯ ಮೊದಲು ಹುಟ್ಟಿತಾ? ನ್ಯಾಯಾಲಯ ಮೊದಲು ಹುಟ್ಟಿತಾ? ಎಂದು ಪ್ರಶ್ನಿಸಿದರು. ಕಾಲಾನುಕಾಲದಿಂದ ಬಂದ ಸಂಪ್ರದಾಯ ಪಾಲಿಸುತ್ತಿದ್ದೇವೆ. ಶಬರಿಮಲೆ ತೀರ್ಪಿನಿಂದ ಕೋಟ್ಯಾಂತರ ಭಕ್ತರಿಗೆ ನೋವಾಗಿದೆ. ಅಯ್ಯಪ್ಪನಿಗೆ ಹಿಡಿಸದ ಸಂಪ್ರದಾಯ ಇದು ಎಂದು ವಿಷಾದವ್ಯಕ್ತಪಡಿಸಿದರು.
ಅಯ್ಯಪ್ಪ ಭಕ್ತರಿಗೆ ಸಡ್ಡುಹೊಡೆಯಲು ಕೇರಳ ಸರಕಾರದ ಭಾರೀ ಪ್ಲಾನ್?
ಹಿಂದೂ ಸಮಾಜ ಸುಮ್ಮನಿರಬಾರದು
ಕೇರಳ ಮುಖ್ಯಮಂತ್ರಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ದೇಶದಲ್ಲಿ ಹಿಂದೂಗಳಿಗೆ ಹಿಂದುಗಳೇ ವಿರೋಧಿಗಳು. ಶಬರಿಮಲೆಗೆ ಹೊರಟ ಮಹಿಳೆಯರು ಮಸೀದಿಗೆ ಹೋಗಲಿ ಎಂದು ಹೇಳಿದರು. ಪವಿತ್ರ ಕ್ಷೇತ್ರಗಳಿಗೆ ತೊಂದರೆಯಾದಾಗ ಹಿಂದೂ ಸಮಾಜ ಸುಮ್ಮನಿರಬಾರದು ಎಂದು ಶಿವರಾಂ ಆಕ್ರೋಶ ವ್ಯಕ್ತ ಪಡಿಸಿದರು.
ಕರಾವಳಿಯಲ್ಲಿ ಬಿರುಸುಗೊಂಡ ಶಬರಿಮಲೆ ಹೋರಾಟ, ಉಪವಾಸ ಸತ್ಯಾಗ್ರಹ ಆರಂಭ
ಪಂದಳ ರಾಜರೂ ಇದ್ದರು
ಸಭೆಯಲ್ಲಿ ಪಂದಳ ರಾಜ, ಹಲವು ಸಾಧು ಸಂತರು ಮತ್ತು ಅಧಿಕ ಸಂಖ್ಯೆಯ ಅಯ್ಯಪ್ಪ ಭಕ್ತರು ಪಾಲ್ಗೊಂಡಿದ್ದರು. ಸಭೆಗೂ ಮುನ್ನ ಉಡುಪಿ ನಗರದಲ್ಲಿ ಬೃಹತ್ ಜಾಥಾ ನಡೆಯಿತು. ವರ್ಷಕ್ಕೆ ಕೋಟ್ಯಾಂತರ ಜನ ಸಂದರ್ಶಿಸುವ ಶಬರಿಮಲೆ ಕ್ಷೇತ್ರ ಸದ್ಯ ವಿವಾದದ ತಾಣವಾಗಿದೆ. ಸದ್ಯ ಅಯ್ಯಪ್ಪ ಭಕ್ತರು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಿದ್ದು, ಇನ್ನೊಂದು ಹೋರಾಟ ಸಂಘರ್ಷ ನಡೆಯುವ ಸಾಧ್ಯತೆ ದಟ್ಟವಾಗಿದೆ. ಎಲ್ಲದಕ್ಕೂ ಅಯ್ಯಪ್ಪನೇ ದಾರಿ ತೋರಿಸಬೇಕು