ಸಿದ್ದರಾಮಯ್ಯ ಅವರ ವಾಚಿನ ಕೇಸ್ ಸಿಬಿಐಗೆ ನೀಡಿ, ಮೋದಿಗೆ ಪತ್ರ
ಉಡುಪಿ, ಸೆ. 06: ಭಾರಿ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ಈಗ ಮತ್ತೆ ಸದ್ದು ಮಾಡುತ್ತಿದೆ. ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಮತ್ತೊಮ್ಮೆ ಈ ಪ್ರಕರಣವನ್ನು ಕೆದಕಿ, ಒಂದು ಅಂತ್ಯಗಾಣಿಸಲು ಮುಂದಾಗಿದ್ದಾರೆ.
ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!
ಸದ್ಯ ಸರ್ಕಾರದ ಆಸ್ತಿಯಾಗಿರುವ ಊಬ್ಲೋ ವಾಚಿನಿಂದ ಸಿದ್ದರಾಮಯ್ಯ ಅವರಿಗೆ ಭಾರಿ ಲಾಭ ತಂದಿದೆ. ಉದ್ಯಮಿಗಳಿಗೆ ಕಡಿಮೆ ಮೊತ್ತದಲ್ಲಿ ಸರ್ಕಾರಿ ಯೋಜನೆಗಳು ಮಂಜೂರಾಗಿವೆ. ಫಲಾನುಭವಿಗಳ ಪಟ್ಟಿಯಲ್ಲಿ ವಿಶ್ವಖ್ಯಾತಿಯ ಉದ್ಯಮಿ ಬಿ. ಆರ್ ಶೆಟ್ಟಿ ಕೂಡಾ ಇದ್ದಾರೆ ಎಂದು ಅನುಪಮಾ ಶೆಣೈ ಆರೋಪಿಸಿದ್ದಾರೆ.
ವಾಚ್ ಮೂಲದ ಬಗ್ಗೆ ತನಿಖೆ ಏಕೆ ನಡೆಸಿಲ್ಲ? ಡಾ. ಗಿರೀಶ್ ಚಂದ್ರ ನೀಡಿದ ಉಡುಗೊರೆಗೆ ಪ್ರತಿಯಾಗಿ ಅವರಿಗೆ ಏನು ಲಾಭ ಸಿಕ್ಕಿದೆ? ಎಂಬುದನ್ನು ಬಹಿರಂಗಗೊಳಿಸುವಂತೆ ಅನುಪಮಾ ಶೆಣೈ ಅವರು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿದ್ದರು.
ಜೆಡಿಎಸ್ ಹಾಗೂ ಬಿಜೆಪಿ ಕಳೆದ ವರ್ಷ ಸದನದಲ್ಲಿ ಗದ್ದಲ ಉಂಟು ಮಾಡಿದ್ದು ಬಿಟ್ಟರೆ ನಂತರ ವಿಷಯ ತಣ್ಣಗಾಗಿತ್ತು. ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಈಗ ಈ ವಿಷ್ಯವನ್ನು ಮತ್ತೊಮ್ಮೆ ಬಯಲಿಗೆಳೆದು ಸಿಬಿಐ ತನಿಖೆಗೆ ಆಗ್ರಹಿಸಿ, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಅನುಪಮಾ ನಿರೀಕ್ಷೆ ಹುಸಿ
ಸಿಎಂ ಸಿದ್ದರಾಮಯ್ಯ, ಉದ್ಯಮಿ ಬಿ.ಆರ್.ಶೆಟ್ಟಿ ಸಹಿತ ಹಲವು ಸಚಿವರ ಹೆಸರುಗಳನ್ನು ಉಲ್ಲೇಖ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸಿ ಅನುಪಮಾ ಶೆಣೈ ಬರೆದ ಪತ್ರಕ್ಕೆ ಪ್ರಧಾನಿ ಸಚಿವಾಲಯದಿಂದ ಉತ್ತರ ಸಿಕ್ಕಿದೆ. ಆದರೆ, ಸಿಬಿಐ ತನಿಖೆ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ. ಪ್ರಧಾನಿ ಕಚೇರಿಯಿಂದ ಮುಂದಿನ ಹಂತಕ್ಕೆ ವರ್ಗಾವಣೆಯಾಗಿದೆ ಅಷ್ಟೆ.
ಕಾನೂನು ಸಮರ
ಡಿಕೆ ರವಿ, ಕಲ್ಲಪ್ಪ ಹಂಡಿಭಾಗ್ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಕೂಡಾ ಅನುಪಮಾ ಶೆಣೈ ಕಳವಳ ವ್ಯಕ್ತಪಡಿಸಿದರು. ಸದ್ಯ ಉಬ್ಲೋ ವಾಚು ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ಇದೆ. ಸಭಾಪತಿ ಕೋಳಿವಾಡ ಅವರು ವಾಚನ್ನು ಸರಿಯಾಗಿ ಕಾಯದಿದ್ದರೆ ಅವರ ಮೇಲೂ ಕೇಸ್ ಹಾಕುವೆ. ಕಾನೂನು ಸಮರವೊಂದೇ ಉಳಿದಿರುವ ದಾರಿ ಎಂದು ಅನುಪಮಾ ಹೇಳಿದರು.
ಸರ್ಕಾರದ ಆಸ್ತಿಯಾದ ವಾಚು
ಡಾ. ಗಿರೀಶ್ ಚಂದ್ರ ಶರ್ಮಾ ಅವರು ನನಗೆ 2015ರ ಜುಲೈನಲ್ಲಿ ನನಗೆ ನೀಡಿದ ಊಬ್ಲೋ ಬಿಗ್ ಬ್ಯಾಂಗ್ 301-ಎಂ ವಾಚ್ ಅನ್ನು ಸರ್ಕಾರದ ಆಸ್ತಿ ಎಂದು ಘೋಷಣೆ ಮಾಡುತ್ತಿದ್ದೇನೆ' ಎಂದು ಅಫಿಡೆವಿಟ್ ಸಲ್ಲಿಸಿರುವ ಸಿದ್ದರಾಮಯ್ಯ ಅವರು, ವಾಚ್ ನ್ನು ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿ ಇಂದಿಗೆ ಒಂದೂವರೆ ವರ್ಷಗಳು ಕಳೆದಿವೆ. ಈಗ ಸಭಾಪತಿ ಬದಲಾಗಿದ್ದು ಕೋಳಿವಾಡ ಅವರು ಸ್ಥಾನದಲ್ಲಿದ್ದಾರೆ.
ಅನುಪಮಾ ಬರೆದ ಪತ್ರ
ಉಬ್ಲೋ ಬಿಗ್ ಬ್ಯಾಂಗ್ 301 ಎಮ್ ಹಿಂದಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ಅನುಪಮಾ ಶೆಣೈ ಅವರು ಸ್ಪೀಕರ್ ಬಿ.ಎಸ್ ಕೋಳಿವಾಡ ಅವರಿಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ಮಿತ್ರ ದುಬೈ ನಿವಾಸಿ ಡಾ. ಗಿರೀಶ್ ಅವರಿಗೆ ಎರಡು ಬೃಹತ್ ಯೋಜನೆಗಳ ಅಭಿವೃದ್ಧಿ ಟೆಂಡರ್ ಸಿಕ್ಕಿದೆ. ಎಲ್ಲಾ ನಿಯಮಗಳನ್ನು ಗಾಳಿ ತೂರಲಾಗಿದೆ ಎಂದು ಆರೋಪಿಸಿದ್ದಾರೆ.