ಕರಾವಳಿಯಲ್ಲಿ ನಾಗರ ಪಂಚಮಿ ಆಚರಣೆ ಬಂದದ್ದು ಹೇಗೆ ಗೊತ್ತೆ?
ಉಡುಪಿ: ಶ್ರಾವಣ ಮಾಸದಲ್ಲಿ ಮೊದಲು ಬರುವ ಹಬ್ಬ, ಭಯ, ಭಕ್ತಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ನಾಗರ ಪಂಚಮಿ. ಪ್ರಾಥಃ ಕಾಲದಲ್ಲಿ ಪ್ರತಿಯೊಬ್ಬರು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ಕುಟುಂಬದವರು ತಲ ತಲಾಂತರದಿಂದ ನಂಬಿಕೊಂಡು ಬಂದಿರುವ ನಾಗಬನದಲ್ಲಿ ಶ್ರೀ ನಾಗದೇವರಿಗೆ ತನು ಹಾಕಿಸುವುದು ವಾಡಿಕೆ.
ನಾಗದೇವರಿಗೆ ಪ್ರಿಯವಾದ ಲವಂಚ, ಸಿಂಗಾರ ಹೂವು, ಅಕ್ಕಿ, ಕಾಯಿ, ಬಾಳೆಹಣ್ಣು ತಂಬಿಟ್ಟು (ಅಕ್ಕಿ ಬೆಲ್ಲದಿಂದ ಅರ್ಚಕರು ತಯಾರಿಸಿತ್ತಾರೆ) ಅರಳು ಬೆಲ್ಲ ವಿವಿಧ ಹೂವುಗಳು, ನಾಗದೇವರಿಗೆ ಪ್ರಿಯವಾದ ಕೇದಿಗೆಹೂವು, ಸೀಯಾಳ (ಎಳನೀರು) ಹಾಲು ಅಭಿಷೇಕವನ್ನು ತಂದಿರಿಸಿಅರ್ಚಕರು ವಿಧಿ ವಿಧಾನಗಳಿಂದ ನಾಗದೇವರಿಗೆ ಪೂಜಿಸುತ್ತಾರೆ.
ತುಳುನಾಡಿನಲ್ಲಿ ಸಂಭ್ರಮದ ನಾರಗಪಂಚಮಿ ಆಚರಣೆ
ಇಡೀ ಭೂಮಂಡಲವನ್ನೇ ಹೊತ್ತು ನಮ್ಮನ್ನು ರಕ್ಷಿಸಿ ಮಾನವರ ಸರಿ ತಪ್ಪುಗಳ ಬಗ್ಗೆ ಆಗಾಗ್ಗೆ ಪ್ರತ್ಯಕ್ಷವಾಗಿ ಎಚ್ಚರಿಸುತ್ತಾ ಸರಿದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ಕಲಿಯುಗದವರಿಗೆ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಾಗದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವ ದಿನ ಬಂದಿದೆ.
ನಾಗಾರಾಧನೆಯಿಂದ ರೋಗ-ರುಜಿನಾಧಿಗಳು ಮತ್ತು ವಿವಾಹ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ ಎಂಬ ನಂಬಿಕೆಯಿದೆ. ನಾಗ ಪ್ರತ್ಯಕ್ಷ ದೇವ: ಸಮುದ್ರ ಮಥನ ಕಾಲದಲ್ಲಿ ಮಂದರ ಪರ್ವತಕ್ಕೆ ಹಗ್ಗವಾಗಿ ಸಹಾಯ ಮಾಡಿದ್ದಾನೆ.
18 ಪೇಟೆಯ ದೇವಳದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ
ಹಾಗೆಯೇ ತಕ್ಷಕ ಇಂದ್ರನ ಮಿತ್ರನಾಗಿ ಆಸ್ತಿಕ ಮಹರ್ಷಿಯ ಸಹಾಯದಿಂದ ಜನಮೇಜಯ ಮಹಾರಾಜನ ಸರ್ಪಯಾಗದಲ್ಲಿ ನಾಗಕುಲವನ್ನೇ ಬದುಕಿಸಿ ಮಹತ್ಕಾರ್ಯ ಮಾಡಿ ನಮ್ಮನ್ನು ಕಾಪಾಡಿದ್ದಾನೆ ನಾಗ ದೇವರು.
ಮಾನವನಾಗಿ ಹುಟ್ಟಿದವನು ಜೀವನೋಪಾಯಕ್ಕೆ ಊರಿನಿಂದ ಊರಿಗೆ ಹೋಗಿ ಜೀವಿಸುತ್ತಾನೆ. ಆದರೆ ಆತ ಎಲ್ಲೇ ಇರಲಿ ಆತ ನಂಬಿದ ಮೂಲ ನಾಗದೇವರಿಗೆ ವರ್ಷಕ್ಕೊಮ್ಮೆ ನಾಗರ ಪಂಚಮಿಯಂದು ನಾಗ ತನು ಸೇವೆ ಹಾಕಿಸಿ ನಾಗದೇವರ ಅನುಗ್ರಹ ಪಡೆಯಬೇಕು.
ನಾಗರ ಪಂಚಮಿ ಆರಾಧನೆ ಹಿನ್ನೆಲೆ, ವಿಶೇಷ ಹಾಗೂ ಪೂಜಾ ಕ್ರಮದ ಮಾಹಿತಿ
ನಾಗದೇವರಿಗೆ ವರ್ಷಕ್ಕೊಮ್ಮೆ ನಾಗನ ಕಲಶ ಮಾಡಿಸಿ (ಶುದ್ದ ಕಲಶ) ಹಾಕಿಸಿದಾಗ ಆಯುರಾರೋಗ್ಯ ಭಾಗ್ಯ ತೇಜಸ್ಸು ಸಂಪತ್ತು ನೆಮ್ಮದಿ ಸುಖ- ಸಂತೋಷ ಶ್ರೀ ನಾಗದೇವರ ಅನುಗ್ರಹದಿಂದ ಪಡೆಯಬಹುದಾಗಿದೆ. ಅಂದಹಾಗೆ ಕರಾವಳಿಯಲ್ಲಿ ನಾಗರ ಪಂಚಮಿ ಹೇಗೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ವಿವರವಾದ ಲೇಖನ ಇಲ್ಲಿದೆ...
ನಾಗಗಳ ಆರೈಕೆ ಆಚರಣೆಯಾಯಿತು
ಪರಶುರಾಮ ದೇವರು ಸಮುದ್ರ ರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ.
ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ. ತುಳುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ.
ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ. ಗಾಯಕ್ಕೆ ಅರಿಶಿನ ಹಚ್ಚಿ, ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೆವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ.
ನಾಗರ ಪಂಚಮಿ ವಿಶೇಷ: ನಾಗಾರಾಧನೆಯಿಂದ ಸಂತತಿ ವೃದ್ಧಿ, ಮನೋ ನಿಯಂತ್ರಣ
ಬಾಳೆದಿಂಡು ನಾಗ ಸೇವೆಯಲ್ಲಿ ನಿಷಿದ್ಧ
ಗಾಯವನ್ನು ಉಲ್ಬಣಗೊಳಿಸುವ ಗೋಮಯ ಮತ್ತು ಬಾಳೆದಿಂಡು ಇಂದಿಗೂ ನಾಗ ಸೇವೆಯಲ್ಲಿ ನಿಷಿದ್ಧ. ತುಳುನಾಡಿನ ಸೃಷ್ಟಿಕರ್ತ ಪರಶುರಾಮನೇ ಆದರೂ ಅದಕ್ಕೆ ಫಲವತ್ತತೆಯನ್ನು ತುಂಬಿದ್ದು ನಾಗಗಳು ಎಂಬ ನಂಬಿಕೆ ಜನರಲ್ಲಿ ಇನ್ನೂ ಭಕ್ತಿಯಿಂದ ಕಾಡುತ್ತಿದೆ.
ನಾಗಬನವಾಗುತ್ತಿದೆ ಕಾಂಕ್ರಿಟ್ ಗೂಡು
ನಾಗಬನಗಳು ಪ್ರಕೃತಿ ಮಾತೆಯ ಮಡಿಲಲ್ಲಿ ಇರಬೇಕು. ನಾಗಬನ ಮರದ ಬುಡದಲ್ಲೇ ಇರಬೇಕು. ಗಿಡಮರ ಕಡಿದು ನಾಗಬನ ಕಾಂಕ್ರಿಟ್ ನಿಂದ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಇದರಿಂದ ನಿಜ ನಾಗರಗಳಿಗೆ ವಾಸಿಸಲು ನೆಲೆ ಇಲ್ಲದಂತಾಗಿ ಮನುಷ್ಯ ವಾಸಿಸುವ ಮನೆಗಳಿಗೆ ಪ್ರವೇಶ ಮಾಡುತ್ತಿವೆ.
ಇದರಿಂದ ಹಾವುಗಳು ಮಾನವನ ಕೈಗೆ ಸಿಕ್ಕು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೇ, ಮನುಷ್ಯ ಮನೆಗಳಿಗೆ ಬರುವ ಹಾವುಗಳನ್ನು ಓಡಿಸುವ ಕಾರಣ ನಾಗರಹಾವುಗಳು ರಸ್ತೆಗಳಲ್ಲಿ ಅಡ್ಡ ದಿಡ್ಡಿ ಓಡಾಡಿ ವಾಹನಗಳಿಗೆ ಸಿಕ್ಕಿ ಸಾಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ.
ಹೀಗಿರಲಿ ನಾಗಬನ
ಮರದ ಬುಡದಲ್ಲಿ ಹಾಡಿ(ಕಾಡಿನಲ್ಲಿ)ಯಲ್ಲಿ ನಾಗಬನವಿದ್ರೆ ಅಲ್ಲಿ ನಾಗರ ಹಾವುಗಳು ಮರಿ ಮೊಟ್ಟೆಯೊಡನೆ ಜೀವಿಸುತ್ತವೆ. ಎಲ್ಲಾ ಕಡೆ ಮರ ಕಡಿದು ಪ್ರಕೃತಿ ನಾಶ ಮಾಡುವುದರಿಂದ ನಾಗನಿಗೆ ಮನೆಯಿಲ್ಲದಂತಾಗಿದೆ.
ಇಡೀ ಭೂಮಿಯನ್ನು ಹೊತ್ತು ನಿಧಿ ಸಂರಕ್ಷಣೆ ಮಾಡಿ ಮನುಕುಲವನ್ನು ರಕ್ಷಿಸುತ್ತಿರುವ ನಾಗನಿಗೆ ವಾಸಿಸಲು ಯೋಗ್ಯವಾದ ಪರಿಸರಯುಕ್ತ ನಾಗಬನವಾಗಲಿ. ಕಾಂಕ್ರಿಟ್ ನಾಗಬನ ನಾಗ ದೇವರಿಗೆ ಅಪ್ರಿಯವಾದುದೆಂಬ ನಂಬಿಕೆಯಿಂದಾದರೂ ಪರಿಸರ ಉಳಿಸುವ ಕೆಲಸವಾಗಬೇಕಾಗಿದೆ.
ಇನ್ನು ಮುಂದೆ ನಾಗಬನ ಮಾಡುವವರು ಗಿಡ ಮರಗಳ ನಡುವೆ ಪ್ರಕೃತಿ ಮಡಿಲಿನ ಸ್ವಚ್ಚ ಹಸಿರಿನ ಸುಂದರ ನಾಗಬನ ನಿರ್ಮಾಣವಾಗಬೇಕಾಗಿದೆ.