ಚರ್ಚೆಗೆ ಗ್ರಾಸವಾಗಿದ್ದ ಉಡುಪಿಯ ನಾಗ ಪವಾಡದ ಬಗ್ಗೆ ಸ್ಪಷ್ಟನೆ ಕೊಟ್ಟ ನಾಗರಾಜ್ ಭಟ್
ಉಡುಪಿ, ನವೆಂಬರ್. 22: ಉಡುಪಿಯ ಹೆಬ್ರಿ ಸಮೀಪದ ಬರ್ಸಬೆಟ್ಟುನಲ್ಲಿ ನಡೆದ ನಾಗ ಪವಾಡ ಈಗ ಭಾರೀ ಚರ್ಚೆ ಆರಂಭವಾಗಿದ್ದು, ಇದರ ಸತ್ಯಾಸತ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ನೆಲದಡಿಯಲ್ಲಿ ಹುದುಗಿದ್ದ ಪುರಾತನ ನಾಗನ ಮೂರ್ತಿಯನ್ನು ಪತ್ತೆ ಹಚ್ಚಿದ್ದ ನಾಗಪಾತ್ರಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವಂತಹ ಆಡಿಯೋ ಮುದ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಗ ಪವಾಡದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ.
ಹೆಬ್ರಿ ಸಮೀಪದ ಬರ್ಸಬೆಟ್ಟು ನಿವಾಸಿ, ಟ್ರಾನ್ಸ್ ಪೋರ್ಟ್ ಉದ್ಯಮಿ ಗಂಗಾಧರ ಶೆಟ್ಟಿ ಅವರ ಮನೆಯ ಒಳಗಡೆ ಹಾಲ್ ನ ಅಡಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ನಾಗನ ಅತಿ ಪುರಾತನ ಮೂರ್ತಿ ಪತ್ತೆ ಮಾಡಿದ್ದರು.
ಆಗ ನಾಗನ ಪವಾಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರ-ವಿರೋಧದ ವಾದದ ಆಡಿಯೋಗಳು ಹರಿದಾಡುವುದಕ್ಕೆ ಆರಂಭವಾಗಿದ್ದವು.
ಮನೆಮಂದಿ ನಾಗ ಕಲ್ಲು ಪತ್ತೆ ಆಗಿರುವುದರ ಬಗ್ಗೆ ವಿಶ್ವಾಸದಿಂದ ಒಪ್ಪಿಕೊಂಡಿಯಾಗಿತ್ತು. ಆದರೆ ಈ ನಡುವೆ ನಾಗನ ಕಲ್ಲು ಪತ್ತೆ ಮಾಡುವುದು ಗಿಮಿಕ್. ನಾಗ ಪಾತ್ರಿ ಜನರನ್ನು ಮೋಸ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಈಗ ಹಲವು ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಜ್ಯೋತಿಷಿ ನಾಗರಾಜ್ ಭಟ್ ವಿರುದ್ಧ ಆಕ್ರೋಶಭರಿತವಾದ ಆಡಿಯೋ ಹರಿದಾಡುತ್ತಿದ್ದು, "ಈ ಹಿಂದೆ ಕೂಡ ನಾಗರಾಜ್ ಭಟ್ ಇದೇ ರೀತಿಯಲ್ಲಿ ಕಲ್ಲು ಪತ್ತೆ ಹಚ್ಚಿದ್ದಾರೆ. ತನ್ನ ಮನೆಯಲ್ಲೇ ಕಲ್ಲು ಪತ್ತೆ ಹಚ್ಚಿದ್ದು" ಎಂದು ಪೂನಾದಿಂದ ಕರೆ ಮಾಡಿದ ವ್ಯಕ್ತಿಯೊಬ್ಬರ ಆಡಿಯೋ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉಡುಪಿಯಲ್ಲಿ 'ಪವಾಡ' : ಸಾವಿರಾರು ವರ್ಷ ಹಳೆಯ ನಾಗರಕಲ್ಲು ಪತ್ತೆ
"ಈ ಹಿಂದೆ ಕೂಡ ಜ್ಯೋತಿಷಿ ಜನರಿಗೆ ಮೋಸ ಮಾಡಿದ್ದರು. ಮೊದಲೇ ನಾಗಕಲ್ಲು ತಂದಿಟ್ಟು, ನಂತರ ತೆಗೆದು ಜನರ ದೋಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಆಡಿಯೋದಲ್ಲಿ ಆರೋಪಿಸಲಾಗಿದೆ. ನನ್ನ ಮನೆಯಲ್ಲಿ ಸಿಕ್ಕಿದ ಕಲ್ಲು, ಈ ಕಲ್ಲು ಒಂದೇ ತೆರನಾಗಿದೆ. ನಾಗ ಕಲ್ಲು ಪತ್ತೆ ಹಚ್ಚಿ ಆನಂತರ ಚಿನ್ನಕ್ಕೆ ಬೇಡಿಕೆ ಇಟ್ಟು ಮನೆ ಮಂದಿಯನ್ನು ದೋಚುತ್ತಾನೆ ಈ ನಾಗರಾಜ್ ಭಟ್" ಎಂಬ ಆರೋಪ ಕೇಳಿಬರುತ್ತಿದೆ.
ಇದೀಗ ಈ ಕುರಿತು ನಾಗ ಪಾತ್ರಿ ನಾಗರಾಜ್ ಭಟ್ ಅವರೇ ಮಾಧ್ಯಮ ಪ್ರತಿನಿಧಿಗಳ ಬಳಿ ಸ್ಪಷ್ಟನೆ ನೀಡಿದ್ದಾರೆ.
ಒಂದೇ ರೂಪದಲ್ಲಿ ಇರುತ್ತಿತ್ತು
ಯಾರೋ ಸುಳ್ಳು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದು ಸುಳ್ಳು ಅನ್ನೋದಕ್ಕೆ ಹೇಗೆ ಸಾಧ್ಯ?. ಈ ರೂಪದ ನಾಗರ ಕಲ್ಲು ಸಿಕ್ಕಿರೋದು ಮೊದಲ ಬಾರಿ ಅಲ್ಲ. ಹಿಂದೆ ಮೈಸೂರು, ತುಮಕೂರು ಇನ್ನು ಹಲವೆಡೆ ಒಂದೇ ತರಹದ ಪ್ರತಿಮೆಗಳು ಸಿಕ್ಕಿದೆ. ಹಿಂದೆ ಜೈನರ ಕಾಲದಲ್ಲಿ ಇದ್ದಂತಹ ಎಲ್ಲಾ ಪ್ರತಿಮೆಗಳು ಒಂದೇ ರೂಪದಲ್ಲಿ ಇರುತ್ತಿತ್ತು.
ಈಗ ಬೇರೆ ಬೇರೆ ಆಕಾರ, ರೂಪದಲ್ಲಿ ಪ್ರತಿಮೆಗಳು ಬರುತ್ತದೆ. ಇದು ಜೈನರ ಕಾಲದ ನಾಗ ಪ್ರತಿಮೆ ಆಗಿರುವುದರಿಂದ ಆರೋಪ ಮಾಡಿರುವ ವ್ಯಕ್ತಿ ಇದು ಅವರ ಮನೆಯ ಪ್ರತಿಮೆ ಅಂದುಕೊಂಡಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಮದ್ದೂರಿನಲ್ಲಿ 70 ಲಕ್ಷದ ಎರಡಂತಸ್ತಿನ ಮನೆ ಮಾಲೀಕರಿಗೆ ಹುತ್ತದ್ದೇ ಕಾಟ
ನಾಗ ದೇವರ ಪ್ರತಿಮೆ ಪತ್ತೆ
ಸಾವಿರ ವರ್ಷ ಹಿಂದಿನ ಪುರಾತನ ನಾಗನ ಕಲ್ಲು ಪತ್ತೆಯಾಗಿರುವುದು ಉದ್ಯಮಿ ಗಂಗಾಧರ್ ಶೆಟ್ಟಿ ಅವರ ಮನೆಯಲ್ಲಿ. ಅವರು 6 ವರ್ಷಗಳ ಹಿಂದೆ ಈ ಮನೆ ಕಟ್ಟಿದ್ದು. ಈ ಮನೆ ಇರೋದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿಯ ಮುದ್ರಾಡಿ ಎಂಬಲ್ಲಿ. ಈ ಮನೆ ಭವ್ಯ ಬಂಗಲೆಯಾಗಿದೆ. ಈ ಮನೆ ನಿರ್ಮಾಣದ ನಂತರ ಗಂಗಾಧರ್ ಶೆಟ್ಟಿ ಉದ್ಯಮದಲ್ಲಿ ನಷ್ಟ ಕಂಡಿದ್ದರು. ಮನೆಯಲ್ಲಿ ಕಷ್ಟ ಎದುರಿಸುವಂತ ಪರಿಸ್ಥಿತಿ ಎದುರಾಗಿತ್ತು.
ತಮಗಾಗುತ್ತಿರುವ ನಷ್ಟಗಳ ಬಗ್ಗೆ, ಗೆಳೆಯನ ಮಾತಿನಂತೆ ಗಂಗಾಧರ ಶೆಟ್ಟಿ ಜ್ಯೋತಿಷಿಯ ಮೋರೆ ಹೋಗಿದ್ದರಂತೆ. ಆಗ ಗಂಗಾಧರ ಶೆಟ್ಟಿ ಅವರ ಮಾತನ್ನು ಆಲಿಸಿದ ತೀರ್ಥಹಳ್ಳಿ ನಾಗಪಾತ್ರಿ ನಾಗರಾಜ್ ಭಟ್ ಮನೆಯಲ್ಲಿ ನಾಗದೋಷ ಇದೆ. ಮನೆಯೊಳಗೆ ನಾಗನ ಪುರಾತನ ಕಲ್ಲು ಇದೆ ಎಂದು ಸೂಚಿಸಿದರಂತೆ. ಜ್ಯೋತಿಷಿ ಹೇಳಿದ ಮಾತು ನಂಬಿ ಮನೆ ಮಾಲೀಕರು ಈ ರೀತಿ ನೆಲ ಅಗೆದಿದ್ದಾರೆ. ಆಗ ಅವರು ಹೇಳಿದಂತೆ, ಹೇಳಿದಷ್ಟೇ ಆಳದಲ್ಲಿ ನಾಗ ದೇವರ ಪ್ರತಿಮೆ ಪತ್ತೆಯಾಗಿದೆ.
30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್
ಚಿತ್ರ ಬಿಡಿಸಿ ಅದರಂತೆ ಅಗೆಯುವಂತೆ ಸೂಚನೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ನಾಗರಾಜ್ ಭಟ್ ರ ಭವಿಷ್ಯ ಮತ್ತೊಮ್ಮೆ ನಿಜವಾಯಿತು ಎಂಬ ಮಾತು ಈಗ ಕೇಳಿಬರುತ್ತಿದೆ. ಮನೆಯ ಪಂಚಾಂಗದಲ್ಲಿ ನಾಗಪ್ರತಿಮೆ ಹುದುಗಿರುವ ಬಗ್ಗೆ ಚಿತ್ರ ಬಿಡಿಸಿ ಅಗೆಯುವಂತೆ ನಾಗರಾಜ್ ಭಟ್ ಸೂಚನೆ ನೀಡಿದ್ದರಂತೆ. ಆಗ ಭವಿಷ್ಯ ಹೇಳಿದ ನಾಗರಾಜ್ ಭಟ್ ಅವರ ಮಾರ್ಗದರ್ಶನದಲ್ಲೇ ಭೂಮಿಯನ್ನು ಅಗೆಯಲಾಗಿದೆ. ಪವಾಡವೋ ಎಂಬಂತೆ, 6 ಅಡಿ ಆಳದಲ್ಲಿ ನಾಗಪ್ರತಿಮೆ ಪತ್ತೆಯಾಗಿದೆ.
ರಹಸ್ಯವಾಗಿಯೇ ಉಳಿದ ಮರ್ಮ
ನಾಗನ ಕಲ್ಲು ಪತ್ತೆ ವೀಡಿಯೋ ವೈರಲ್ ಅಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ, ಮೋಸ ವಂಚನೆ ಎಂದು ಆರೋಪಿಸಿದ ಆಡಿಯೋಗಳು ಹರಿದಾಡುವುದಕ್ಕೆ ಆರಂಭವಾಗಿದೆ. ಆದರೆ ಇಷ್ಟೆಲ್ಲ ನಡೆದರೂ ಬರ್ಸಬೆಟ್ಟುವಿನ ಗಂಗಾಧರ್ ಶೆಟ್ಟಿ ಅವರ ಮನೆ ಮಂದಿ ಮಾತ್ರ ನಿಜವಾಗಿ ನಾಗನ ಕಲ್ಲು ಪತ್ತೆಯಾಗಿದೆ.
ಇದರಲ್ಲಿ ಯಾವುದೇ ಗಿಮಿಕ್ ನಡೆದಿಲ್ಲ. ನಮ್ಮ ಕಣ್ಣು ತಪ್ಪಿಸಿ ಕಲ್ಲು ತಂದಿಟ್ಟು ತೆಗೆಯುವ ಕಾರ್ಯ ಮಾಡಲಾಗಿಲ್ಲ ಎಂದು ನಾಗಪಾತ್ರಿ ನಾಗರಾಜ್ ಭಟ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ 6 ಅಡಿ ಆಳದಲ್ಲಿ ನಾಗ ಕಲ್ಲು ಪತ್ತೆ ಒಂದು ಕಡೆ ಅಚ್ಚರಿಗೆ ಕಾರಣವಾದರೆ, ಇನ್ನೊಂದೆಡೆ ಭೂಮಿಯಾಳದಲ್ಲಿ ಹುದುಗಿರುವ ಕಲ್ಲು ಗೋಚರಿಸುವುದು ಅಸಾಧ್ಯ ಅನ್ನುವ ವಿಶ್ಲೇಷಣೆಗಳು ನಡೆಯುತ್ತಿದೆ. ಒಟ್ಟಿನಲ್ಲಿ ಈ ನಾಗ ಕಲ್ಲು ಪತ್ತೆಯ ಹಿಂದಿನ ನಿಜವಾದ ಮರ್ಮ ಮಾತ್ರ ಇನ್ನೂ ರಹಸ್ಯವಾಗಿಯೆ ಉಳಿದಿದೆ.