ಉಡುಪಿಯಲ್ಲಿ ಮಳೆ ಹಾನಿ ಪರಿಹಾರಕ್ಕೆ 10 ಕೋಟಿ ರೂ ಬಿಡುಗಡೆ; ಗೃಹ ಸಚಿವ
ಉಡುಪಿ, ಆಗಸ್ಟ್ 11: ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಅಧಿಕ ಮಳೆಯಾಗಿದ್ದು, ಅಲ್ಲಲ್ಲಿ ಹಾನಿ ಸಂಭವಿಸಿದೆ. ಹೀಗಾಗಿ ಇವುಗಳನ್ನು ಪರಿಶೀಲಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಭೇಟಿ ನೀಡಿದ್ದರು. ಕಡಲ್ಕೊರೆತ ಸಂಭವಿಸಿದ ಹಾಗೂ ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲಿಸಿದರು.
ಪಡುಬಿದ್ರೆಯ ಕಡಲ್ಕೊರೆತ ಪ್ರದೇಶಕ್ಕೆ ಬಂದಿದ್ದ ಅವರು, ಪ್ರಾಕೃತಿಕ ವಿಕೋಪ ನಿಧಿಯಿಂದ ಜಿಲ್ಲೆಗೆ ಹತ್ತು ಕೋಟಿ.ರೂ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಉಡುಪಿಯಲ್ಲಿ ಭಾರೀ ಮಳೆ; ಡಿಸಿ ಜೊತೆ ಸಚಿವ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್
"ಪ್ರಧಾನಮಂತ್ರಿ ಜೊತೆ ರಾಜ್ಯದ ನೆರೆ ಪರಿಸ್ಥಿತಿ ಕುರಿತು ನಿನ್ನೆ ಚರ್ಚಿಸಿದ್ದೇವೆ. ರಾಜ್ಯದ ಎರಡು ಪ್ರಮುಖ ಸಮಸ್ಯೆಯ ಕುರಿತು ಮಾತನಾಡಿದ್ದೇವೆ. ಎಡಿಬಿ ನೆರೆವಿನೊಂದಿಗೆ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರದ ಬಗ್ಗೆಯೂ ಚರ್ಚೆ ಆಗಿದೆ. ಕಡಲ್ಕೊರೆತ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ನೀಡಲು ಬೇಡಿಕೆ ಇಟ್ಟಿದ್ದೇವೆ" ಎಂದು ಹೇಳಿದರು.
ಪಶ್ಚಿಮ ಘಟ್ಟದಲಿ ಭೂ ಕುಸಿತ ಆಗುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಸರ್ವೇ ಮಾಡಬೇಕು ಎಂದು ಹೇಳಿದ ಸಚಿವರು, ಸರ್ವೆ ಜೊತೆಗೆ ಮ್ಯಾಪಿಂಗ್ ಕೂಡ ಮಾಡಿಸಬೇಕು. ಭೂಕುಸಿತ ತಡೆ ಹಾಗೂ ಶಾಶ್ವತ ಪುನರ್ವಸತಿ ಕುರಿತೂ ಪ್ರಧಾನಿ ಜೊತೆ ಚರ್ಚಿಸಿದ್ದೇವೆ ಎಂದರು. ಒಂದು ಕಡೆ ಕೊರೊನಾ, ಇನ್ನೊಂದು ಕಡೆ ನೆರೆ ನಿಯಂತ್ರಿಸುವುದೇ ಸವಾಲಾಗಿದೆ. ಜೊತೆಗೆ ನೆರೆ ಪರಿಹಾರವನ್ನು ಕೊರೊನಾ ನಿಯಮಾವಳಿ ಮೀರಿ ಮಾಡಲಾಗುವುದಿಲ್ಲ ಎಂದರು.