ಟಿಪ್ಪು ಸುಲ್ತಾನ್ ಪಠ್ಯ ರದ್ಧತಿ ಬಗ್ಗೆ ಗೃಹ ಸಚಿವರು ಏನಂದರು?
ಉಡುಪಿ, ನವೆಂಬರ್ 1: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಪಾಠ ರದ್ಧತಿ ಪ್ರಸ್ತಾವದ ಕುರಿತು ಉಡುಪಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, "ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ, ವಿವಾದಾತ್ಮಕ ವಿಚಾರವನ್ನು ಮಕ್ಕಳಿಗೆ ತಿಳಿಸಬಾರದೆಂಬುದು ಸರ್ಕಾರದ ಉದ್ದೇಶ" ಎಂದಿದ್ದಾರೆ.
ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, "ಟಿಪ್ಪು ವಿಚಾರಗಳು ಹಿಂದೆ ಪ್ರಚಲಿತದಲ್ಲಿ ಇರಲಿಲ್ಲ, ಸಿಎಂ ಈ ಬಗ್ಗೆ ಪರಿಶೀಲನೆ ಮಾಡಬೇಕೆಂದು ಹೇಳಿದ್ದಾರೆ. ಸರಕಾರ ಈವರೆಗೆ ಯಾವುದೇ ನಿರ್ಣಯ ಮಾಡಿಲ್ಲ" ಎಂದು ತಿಳಿಸಿದ್ದಾರೆ.
ರಾಜ್ಯಕ್ಕೆ ಬಾಂಗ್ಲಾ ಮೂಲದ ಉಗ್ರರ ನುಸುಳುವಿಕೆ; ಕಠಿಣ ಕ್ರಮಕ್ಕೆ ಗೃಹ ಸಚಿವರ ಸೂಚನೆ
ಇದೇ ಸಂದರ್ಭ ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತೂ ಮಾತನಾಡಿದರು. "ಈಗ ಹಣಕಾಸು ವಿನಿಮಯಗಳೆಲ್ಲಾ ಆನ್ ಲೈನ್ ಮುಖಾಂತರ ನಡೆಯುತ್ತಿದೆ. ಇಡೀ ದೇಶದಲ್ಲೇ ಸೈಬರ್ ಕ್ರೈಂ ಹೆಚ್ಚಾಗಿದೆ. ಕರ್ನಾಟಕ ಐಟಿಯಲ್ಲಿ ಬಹಳ ಮುಂದೆ ಇದೆ. ಆದರೆ ಇಲ್ಲಿ ಡಿಜಿಟಲೈಸೇಶನ್ ದುರ್ಬಳಕೆಯಾಗುತ್ತಿದೆ. ರಾಜ್ಯದಲ್ಲಿ ಪೊಲೀಸ್ ಠಾಣೆ ಸಂಖ್ಯೆ ಹೆಚ್ಚು ಮಾಡುತ್ತೇವೆ. ಇಸ್ರೇಲಿ ಗೂಢ ಚರ್ಚೆ ಕೂಡಾ ಪತ್ತೆ ಮಾಡುತ್ತೇವೆ" ಎಂದಿದ್ದಾರೆ.
"ರಾಜ್ಯದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರಲ್ಲಿ 300 ಜನರ ತಪಾಸಣೆ ಮಾಡಿದ್ದೇವೆ. ಯಾವುದೇ ಗುರುತಿನ ಚೀಟಿ ಇಲ್ಲದ 69 ಜನರನ್ನು ಪತ್ತೆ ಮಾಡಲಾಗಿದೆ" ಎಂದರು.
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ; ಕೆಲವೆಡೆ ನಾಡಧ್ವಜ ಹಾರಿಸದ ಬಗ್ಗೆ ಆಕ್ರೋಶ
ರಾಷ್ಟ್ರಧ್ವಜಾರೋಹಣದೊಂದಿಗೆ ರಾಜ್ಯೋತ್ಸವಕ್ಕೆ ಚಾಲನೆ ಕೊಟ್ಟ ಅವರು, "ಜಿಲ್ಲಾಧಿಕಾರಿಗಳಿಗೆ ಇವತ್ತೇ ಸೂಚನೆ ಕೊಟ್ಟಿದ್ದೇನೆ. ಮುಂದಿನ ವರ್ಷ ಎರಡೂ ಬಾವುಟ ಹಾರಿಸಲು ಸೂಚಿಸಲಾಗಿದೆ. ರಾಜ್ಯ ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಯಾವುದೇ ಸುತ್ತೋಲೆ ಸ್ವೀಕರಿಸಿಲ್ಲ, ಮುಂದಿನ ವರ್ಷ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸ್ತೇವೆ" ಎಂದಿದ್ದಾರೆ.