ಮೂರು ತಿಂಗಳ ಬಳಿಕ ಉಡುಪಿಗೆ ಬರಲಿದ್ದಾರೆ ಉಸ್ತುವಾರಿ ಸಚಿವ
ಉಡುಪಿ, ಏಪ್ರಿಲ್ 23: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗೃಹ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ ಬರೊಬ್ಬರಿ ಮೂರು ತಿಂಗಳ ಬಳಿಕ ಉಡುಪಿಗೆ ಆಗಮಿಸುತ್ತಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡಿ ತೆರಳಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಇವತ್ತು ಉಡುಪಿಯಲ್ಲಿ ನಿಗದಿಯಾಗಿದೆ. ಒಂದು ಗಂಟೆ ಸುಮಾರಿಗೆ ಬೊಮ್ಮಾಯಿ, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಲಿರುವ ಸಚಿವರು, ಮುಂದೆ ಅನುಸರಿಸಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಕೊರೊನಾ ವೈರಸ್ ಬಳಿಕ ಇದೇ ಮೊದಲ ಬಾರಿಗೆ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವುದು.
ಈ ಮಧ್ಯೆ ಕೊರೊನಾ ವೈರಸ್ ಜಾಗೃತಿ ಸಭೆ, ಸಮಾಲೋಚನೆಗಳಲ್ಲಿ ಉಸ್ತುವಾರಿ ಸಚಿವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆಯಾ ಜಿಲ್ಲೆಗಳ ಉಸ್ತುವಾರಿ ಮಂತ್ರಿಗಳು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿ ಸಭೆಗಳಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕು ಎಂಬ ನಿಯಮವೇ ಇದೆ.
ಆದರೂ ಸಚಿವ ಬಸವರಾಜ ಬೊಮ್ಮಾಯಿ ಈ ಕಡೆ ತಲೆ ಹಾಕಿರಲಿಲ್ಲ. ಇವತ್ತು ಉಡುಪಿ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ಸಭೆ ನಡೆಸಲಿರುವ ಬೊಮ್ಮಾಯಿ, ಜಿಲ್ಲೆಯ ಕೋವಿಡ್ ಸೋಂಕು ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಅಂದಹಾಗೆ ಉಡುಪಿ ಜಿಲ್ಲೆ ಬಹುತೇಕ ಕೋವಿಡ್ ಸೋಂಕು ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದ್ದು, ಕೊರೊನಾ ಪಾಸಿಟಿವ್ ಇದ್ದ ಮೂವರು ವ್ಯಕ್ತಿಗಳೂ ಗುಣಮುಖರಾಗಿದ್ದಾರೆ.