ದ್ವಾರಕೆಯಲ್ಲಿದ್ದ ಕೃಷ್ಣ ವಿಗ್ರಹ ಉಡುಪಿಗೆ ಬಂದದ್ದು ಹೇಗೆ?
Recommended Video
ಉಡುಪಿಯಲ್ಲಿ ನಡೆಯುವ ಕೃಷ್ಣಾಷ್ಟಮಿಯ ಬಗ್ಗೆ ವಿಶೇಷ ಭಕ್ತಿ, ಆಸಕ್ತಿ ಹಾಗೂ ಕುತೂಹಲ ಏಕೆ? ಈ ಬಗ್ಗೆ ಇರುವ ಇತಿಹಾಸವನ್ನು ಸಾರಿ ಹೇಳುವ ವರದಿ ಇದು. ಏಕೆಂದರೆ, ನಾವು ಮತ್ತೊಂದು ಕೃಷ್ಣ ಜನ್ಮಾಷ್ಟಮಿ ಆಚರಣೆಯ ಎದುರಿಗೆ ಇದ್ದೇವೆ. ಇದೇ ಭಾನುವಾರ ಮತ್ತು ಸೋಮವಾರದಂದು ಅಷ್ಟಮಿ ಇದ್ದು, ಆ ಹಿನ್ನೆಲೆಯಲ್ಲಿ ದ್ವಾರಕೆಯ ಕೃಷ್ಣನಿಗೆ ಉಡುಪಿಯಲ್ಲಿ ಆರಾಧನೆಗೆ ಎಲ್ಲ ಸಿದ್ಧತೆ ಅಂತಿಮಗೊಂಡಿದೆ.
ಮುದ್ದಕೃಷ್ಣರ ಲೀಲೆ ಉಡುಪಿಯಾದ್ಯಂತ ಕಾಣಿಸಿಕೊಳ್ಳಲಿದೆ. ಹುಲಿ ವೇಷಗಳು ಕುಣಿದು ಕುಪ್ಪಳಿಸಲಿವೆ. ಚಂಡೆ, ತ್ರಾಸೆಯ ಸದ್ದೇ ಕೇಳಿಬರಲಿದೆ. ಆಷ್ಟೇ ಅಲ್ಲ, ದೇಶ- ವಿದೇಶಗಳಿಂದ ಭಕ್ತರ ದಂಡೇ ಈ ಕ್ಷೇತ್ರಕ್ಕೆ ಹರಿದು ಬರಲಿದೆ. ಒಟ್ಟಾರೆಯಾಗಿ ಹಬ್ಬದ ಆಚರಣೆಯು ಉಡುಪಿಯಲ್ಲಿ ಜಾತ್ರೆಯ ವಾತಾವರಣವನ್ನು ಸೃಷ್ಟಿಸಲಿದೆ.
ಉಡುಪಿಯಲ್ಲಿ ಕೃಷ್ಣನ ಆರಾಧನೆಗೆ ತಯಾರಿ, ಎಷ್ಟೊಂದು ಉಂಡೆ-ಚಕ್ಕುಲಿ!
ಉಡುಪಿ ಅಂದಾಕ್ಷಣ ನೆನಪಿಗೆ ಬರುವುದೇ ಕೃಷ್ಣ ಮಠ. ಈ ಕೃಷ್ಣ ಮಠವು ತುಂಬಿ ತುಳುಕಲಿದೆ. ಕೃಷ್ಣನ ಬೀಡಿನಲ್ಲಿ ಉತ್ಸವದ ಕಳೆ ಮೂಡಿದೆ. ಕೃಷ್ಣ ಮತ್ತೆ ಹುಟ್ಟಿಬರಲಿದ್ದಾನೆ. ಅದಕ್ಕಾಗಿ ಕೃಷ್ಣ ಮಠದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದೆ. ಸೆಪ್ಟೆಂಬರ್ 2ರಂದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಸರ್ವ ಸಿದ್ಧತೆ ನಡೆಯುತ್ತಿದೆ.
ಮತ್ತೆ ಇತಿಹಾಸದ ಘಟನೆ ಬಗ್ಗೆ ಒಮ್ಮೆ ನೆನಪಿಸಿಕೊಳ್ಳೋಣ.
ಹಡಗಿನಲ್ಲಿ ಕಡಗೋಲು ಶ್ರೀ ಕೃಷ್ಣನ ಮೂರ್ತಿ
800 ವರ್ಷಗಳ ಹಿಂದಿನ ಘಟನೆ ಇದು. ಮುತ್ತು- ಹವಳಗಳ ಜೊತೆಗೆ ಮೂರ್ತಿಗಳನ್ನು ಹೇರಿಕೊಂಡು ದ್ವಾರಕೆಯಿಂದ ಬಂದ ಹಡಗೊಂದು ಉಡುಪಿಯ ಮಲ್ಪೆಯಲ್ಲಿ ಬಿರುಗಾಳಿಗೆ ಸಿಕ್ಕಿ, ನೀರು ಪಾಲಾಗುತ್ತದೆ. ಆ ಸಂದರ್ಭದಲ್ಲಿ ಹಡಗಿನಲ್ಲಿ ಕಡಗೋಲು ಶ್ರೀ ಕೃಷ್ಣನ ಮೂರ್ತಿ ಸಹ ಇರುತ್ತದೆ.
ರುಕ್ಮಿಣಿ ಪೂಜೆ ಮಾಡುತ್ತಿದ್ದ ಕೃಷ್ಣನ ವಿಗ್ರಹ
ಈ ಮೂರ್ತಿಯನ್ನು ದ್ವಾರಕೆಯಲ್ಲಿ ರುಕ್ಮಿಣಿ ಸಹ ಪೂಜೆ ಮಾಡುತ್ತಿದ್ದಳು ಎಂಬುದು ನಂಬಿಕೆ. ದ್ವಾಪರ ಯುಗ ಸಮಾಪ್ತಿಯ ಸಮಯದಲ್ಲಿ ದ್ವಾರಕೆ ಮುಳುಗುವಾಗ ಈ ಮೂರ್ತಿಯನ್ನು ರುಕ್ಮಿಣಿ ಭೂಗತ ಮಾಡಿರುತ್ತಾಳೆ. ಈ ಮೂರ್ತಿ ಹಡಗಿನಲ್ಲಿದೆ ಎಂಬುದನ್ನು ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಮಧ್ವಾಚಾರ್ಯರು, ಅದನ್ನು ಪತ್ತೆ ಹಚ್ಚಿ ಉಡುಪಿಗೆ ತಂದು ಪ್ರತಿಷ್ಠಾಪನೆ ಮಾಡುತ್ತಾರೆ. ಅಲ್ಲದೇ ಕೃಷ್ಣನ ಪೂಜೆಗಾಗಿ ಅಷ್ಟಮಠಾಧೀಶರನ್ನು ನೇಮಿಸುತ್ತಾರೆ.
ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ
ಇದೀಗ ಈ ಕೃಷ್ಣ ಸನ್ನಿಧಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟುತ್ತಿದೆ. ಶ್ರೀ ಕೃಷ್ಣ ಹುಟ್ಟಿದ್ದು ಮಧ್ಯರಾತ್ರಿ. ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿಯಂದು. ಪಂಚಾಂಗದ ಪ್ರಕಾರ ಇವುಗಳಲ್ಲಿ ಯಾವುದಾದರೂ ಒಂದು ಘಟಸಿದರೆ ಅಷ್ಟಮಿ ನಡೆಸಲಾಗುತ್ತದೆ. ಹಾಗಾಗಿ ಭಾನುವಾರ ಮದ್ಯರಾತ್ರಿ ಪರ್ಯಾಯ ಪಲಿಮಾರು ಶ್ರೀಗಳು ಶ್ರೀಕೃಷ್ಣನಿಗೆ ಆರ್ಘ್ಯ ಪ್ರದಾನ ಮಾಡಲಿದ್ದಾರೆ.
ರಥ ಬೀದಿಯಲ್ಲಿ ಮೊಸರು ಕುಡಿಕೆಗೆ ಸಿದ್ಧತೆ
ಉಡುಪಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಿಂದ ನಡೆಯಲಿದೆ. ಈಗಾಗಲೇ ರಥಬೀದಿಯಲ್ಲಿ ಮೊಸರು ಕುಡಿಕೆಗೆ ಸಿದ್ಧತೆ ಆರಂಭವಾಗಿದೆ. ಕೃಷ್ಣ ಮಠದ ಒಳಗೂ -ಹೊರಗೂ ಈ ಸಂಭ್ರಮ ಕಾಣಿಸಿಕೊಳ್ಳುವದರಿಂದ ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ. ಹುಲಿ ವೇಷಧಾರಿಗಳು, ಮುದ್ದು ಕೃಷ್ಣ ವೇಷಧಾರಿಗಳು ಈ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದಾರೆ.