ಕರಾವಳಿ ಜನರನ್ನು ಕಾಡಲು ಆರಂಭಿಸಿದ ಮಂಗನ ಕಾಯಿಲೆ
ಉಡುಪಿ, ಜನವರಿ 15: ರಾಜ್ಯದಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡುತ್ತಿದೆ. ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದ್ದು, ಸದ್ಯ ಇಲ್ಲಿನ ಜನರ ನಿದ್ದೆಗೆಡಿಸಿರುವ ಮಂಗನ ಕಾಯಿಲೆ ಈಗ ಕರಾವಳಿಯ ಜನರನ್ನು ಕಾಡಲು ಆರಂಭಿಸಿದೆ. ಉಡುಪಿಯಲ್ಲಿ ಮಣಿಪಾಲದ ಕೆಎಂಸಿ ಯಲ್ಲಿ ಈವರೆಗೆ 73 ಮಂದಿ ಮಂಗನ ಕಾಯಿಲೆ ಪೀಡಿತರಿಗೆ ಚಿಕಿತ್ಸೆ ನೀಡಲಾಗಿದೆ.
ಉಜಿರೆಯಲ್ಲಿ ಮಂಗನ ಕಳೆಬರಹ ಪತ್ತೆ: ಹೆಚ್ಚಿತು ಮಂಗನ ಕಾಯಿಲೆ ಭೀತಿ
ರೋಗ ಹರಡೋದನ್ನು ತಪ್ಪಿಸಲು ಉಡುಪಿಯಲ್ಲಿ ಡಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು, ದಟ್ಟ ಕಾಡಿನಿಂದ ಆವೃತವಾಗಿದೆ. ಹೀಗಾಗಿ ಈ ಭಾಗದ ಜನರು ಮಂಗನ ಕಾಯಿಲೆಯ ಭೀತಿಯಲ್ಲೇ ದಿನ ಕಳೆಯುವಂತಾಗಿದೆ.
ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಂಗಗಳ ಸಾವು ಪ್ರಕರಣಗಳು ದಿನೇದಿನೆ ಹೆಚ್ಚುತ್ತಲೇ ಇದೆ. ಕಳೆದ ಒಂದು ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಒಟ್ಟು 20 ಮಂಗಗಳು ಸಾವನ್ನಪ್ಪಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಪೈಕಿ ಹನ್ನೆರಡು ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಹೆಚ್ಚಿನ ತಪಾಸಣೆಗೆ ಕಳಿಸಲಾಗಿದೆ.
ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಮಂಗಗಳ ಸಾವು ಸಂಭವಿಸುತ್ತಿರುವುದರಿಂದ ಈ ತಾಲೂಕುಗಳಲ್ಲಿ ಕರಪತ್ರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಮಂಗಗಳ ಸಾವು ಸಂಭವಿಸಿದರೆ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಜನರನ್ನು ಕೋರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೂ ಹಬ್ಬಿದ ಮಂಗನಕಾಯಿಲೆಯ ಭೀತಿ
ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ 50 ಮಂದಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಮಂಗನ ಕಾಯಿಲೆ ಗೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ್ ವ್ಯವಸ್ಥೆ ಹಾಗು ಚಿಕಿತ್ಸೆ ನೀಡಲು ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಹಾಗೆಯೇ ಉಚಿತವಾಗಿ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.