ಕರಾವಳಿಯಲ್ಲಿ ಭಾರೀ ಮಳೆ: ಕಡಲ್ಕೊರೆತ ಪ್ರದೇಶಗಳಿಗೆ ಕಂದಾಯ ಸಚಿವರ ಭೇಟಿ
ಉಡುಪಿ, ಆಗಸ್ಟ್ 07: ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅರಬ್ಬಿ ಸಮುದ್ರ ಪ್ರಕ್ಷ್ಯುಬ್ಧವಾಗಿದೆ. ಕರಾವಳಿ ಭಾಗದಲ್ಲಿ ಕಡಲ್ಕೊರೆತ ಆಗಿರುವ ಪ್ರದೇಶಗಳಿಗೆ ಶುಕ್ರವಾರದಂದು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದಾರೆ.
ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಉಡುಪಿಯ ಪಡುಕೆರೆ ಕಡಲಿನಲ್ಲಿ ಸಮುದ್ರದ ರಕ್ಕಸ ಅಲೆಗಳು ಆತಂಕವನ್ನು ಸೃಷ್ಟಿಸಿವೆ. ಕಡಲಿನ ಬೋರ್ಗರೆತ ಜಾಸ್ತಿಯಾಗಿ ಸಮುದ್ರದ ನೀರು ಏಕಾಏಕಿ ಮೀನುಗಾರಿಕಾ ರಸ್ತೆಗೆ ನುಗ್ಗುತ್ತಿವೆ.
ಉಡುಪಿಯಲ್ಲಿ ಭಾರೀ ಮಳೆ; ಡಿಸಿ ಜೊತೆ ಸಚಿವ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್
ಬೃಹತ್ ಗಾತ್ರದ ಅಲೆಗೆ ಕಡಲಿನ ಮರಳು ರಸ್ತೆ ಮೇಲೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ ಜಗದೀಶ್, ಮುಂದಿನ ಪರಿಹಾರೋಪಾಯದ ಕುರಿತು ಸೂಚನೆ ನೀಡಿದರು. ಇಂದು ಕಂದಾಯ ಸಚಿವ ಆರ್ ಅಶೋಕ್ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.