ಉಡುಪಿಯಲ್ಲಿ ಮುಂದಿನ ಆರು ದಿನ ಭಾರೀ ಮಳೆ; ಯಲ್ಲೋ ಅಲರ್ಟ್ ಘೋಷಣೆ
ಉಡುಪಿ, ಜುಲೈ 16: ಕರಾವಳಿ ತೀರ ಪ್ರದೇಶಗಳಲ್ಲಿ ಹಾಗೂ ರಾಜ್ಯದ ಹಲವೆಡೆ ಮುಂಗಾರು ಚುರುಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲೂ ನಿನ್ನೆಯಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಮುಂದಿನ ಆರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮೂರು ದಿನಗಳಿಂದ ಮುಂಗಾರು ಜಿಲ್ಲೆಯಲ್ಲಿ ಕ್ಷೀಣವಾಗಿತ್ತು. ಇದೀಗ ನಿನ್ನೆ ರಾತ್ರಿಯಿಂದ ಮಳೆ ಸುರಿಯಲು ಆರಂಭಿಸಿದೆ. ಹೀಗಾಗಿ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ
ಬುಧವಾರ ಉಡುಪಿ ತಾಲೂಕಿನಲ್ಲಿ 9ಮಿ.ಮೀ, ಕುಂದಾಪುರದಲ್ಲಿ 13 ಮಿ.ಮೀ, ಕಾರ್ಕಳದಲ್ಲಿ 10 ಮಿ.ಮೀ, ಕಂಬದ ಕೋಣೆ ಗ್ರಾಮದಲ್ಲಿ 34 ಮಿ.ಮೀ, ಕಿರಿಮಂಜೇಶ್ವರದಲ್ಲಿ 25 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.4 ರಂದು ಕರಾವಳಿಗೆ ಕಾಲಿಟ್ಟ ಮುಂಗಾರು ಬಳಿಕ ಕ್ಷೀಣಿಸಿತ್ತು. ಆದರೆ ನಿನ್ನೆಯಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಇಂದು ಕೂಡ ಧಾರಾಕಾರ ಮಳೆ ಮುಂದುವರೆದಿದೆ.
ಕರಾವಳಿ ಭಾಗದಲ್ಲಿ ಜು.16 ರಿಂದ 19ರವರೆಗೆ ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.