ಸೌದಿ ಜೈಲು ದಿನಗಳನ್ನು ಮೆಲುಕು ಹಾಕಿದ ಹರೀಶ್ ಬಂಗೇರ
ಉಡುಪಿ, ಆಗಸ್ಟ್ 20; ತನ್ನದಲ್ಲದ ತಪ್ಪಿಗೆ ಸೌದಿಯ ಜೈಲುಗಳಲ್ಲಿ ಸುಮಾರು ಒಂದೂಮುಕ್ಕಾಲು ವರ್ಷ ಕಳೆದ ಕರುನಾಡಿನ ಹಳ್ಳಿ ಹಕ್ಕಿ ಬಂಧನದಿಂದ ಮುಕ್ತಿ ಪಡೆದಿದೆ. ತಾನು ನಿರಪರಾಧಿ ಎಂದು ಸಾಬೀತಾದ ಬಳಿಕ ಉಡುಪಿ ಜಿಲ್ಲೆಯ ಕುಂದಾಪುರದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಮತ್ತೆ ಊರು ಸೇರಿದ್ದಾರೆ. ಸೌದಿಯಿಂದ ಮನೆ ಸೇರಿದ ಮೊದಲ ದಿನವೇ ಹರೀಶ್ ಬಂಗೇರ ತಾನು ನಂಬಿದ ದೇವರ ಹರಕೆ ತೀರಿಸಿದ್ದಾರೆ.
ತವರಿಗೆ ಸೇರಿದ ಬಳಿಕ ಕುಟುಂಬ ಸಮೇತರಾಗಿ ದೇವಾಲಯಗಳಿಗೆ ತೆರಳಿದ ಹರೀಶ್ ಬಂಗೇರ ಹೊತ್ತಿದ್ದ ಹರಕೆ ತೀರಿಸಿದ್ದಾರೆ. ಮೊದಲು ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ತೆರಳಿದ ಹರೀಶ್ ಬಂಗೇರ ಅಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಬಳಿಕ ಕೋಟೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲೇ ಬಂದು ತನ್ನ ಹರಕೆಯನ್ನು ತೀರಿಸಿದ್ದಾರೆ.
ಆ.18ರಂದು ತಾಯ್ನಾಡಿಗೆ ಹರೀಶ್ ಬಂಗೇರ: ಮತ್ತೆ ಗೂಡು ಸೇರಿದ ಹಳ್ಳಿಹಕ್ಕಿ!
ದೇವಾಲಯಗಳಿಗೆ ತೆರಳಿದ ಬಳಿಕ ಮನೆ ಮಂದಿ ಜೊತೆ ಹರೀಶ್ ಬಂಗೇರ ಸಮಯ ಕಳೆದಿದ್ದಾರೆ. ತಾನು ಒಂದೂ ಮುಕ್ಕಾಲು ವರ್ಷದಲ್ಲಿ ಕಂಡ ನರಕವನ್ನು ಮರೆಯಲು ಹರೀಶ್ ಕುಟುಂಬ ಪ್ರಯತ್ನಿಸುತ್ತಿದೆ. ಮುಂದಿನ ಜೀವನವನ್ನು ಊರಲ್ಲೇ ಉದ್ಯೋಗ ಮಾಡಿ ಕಳೆಯುವ ನಿರ್ಧಾರ ಮಾಡಿದ್ದಾರೆ ಹರೀಶ್ ಬಂಗೇರ. ಮನೆಯಲ್ಲಿ ಸದ್ಯ ವಿಶ್ರಾಂತಿ ಪಡೆಯುತ್ತಿರುವ ಹರೀಶ್ ಬಂಗೇರ ಇದೇ ಮೊದಲ ಬಾರಿಗೆ ತಾನು ಒಂದು ಮುಕ್ಕಾಲು ವರ್ಷದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ತನ್ನದಲ್ಲದ ತಪ್ಪಿಗೆ 3 ವರ್ಷ ಸೌದಿ ಜೈಲಿನಲ್ಲಿದ್ದ ಹರೀಶ್ ಬಂಗೇರ ಕೊನೆಗೂ ಬಿಡುಗಡೆ
"2019ರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಸಿಎಎ ವಿಚಾರವಾಗಿ ಗಲಭೆಯಾಗಿತ್ತು. ನಾನು ದೂರದ ಊರಿನಲ್ಲಿ ಇದ್ದಿದ್ದರಿಂದ ಸಹಜ ಕುತೂಹಲದಿಂದ ಮಂಗಳೂರಿಗೆ ಸಂಬಂಧಿಸಿದಂತೆ ಎಲ್ಲಾ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೆ. ಅದೇ ದಿನ ರಾತ್ರಿ ಸಿಎಎ ಪ್ರತಿಭಟನೆ ಬಗ್ಗೆ ನನ್ನ ಸ್ನೇಹಿತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಅನ್ನು ನಾನು ಶೇರ್ ಮಾಡಿದ್ದೆ. ನಾನು ಸೌದಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ನಾನು ಫೋಸ್ಟ್ ಮಾಡಿರೋದರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನನ್ನನ್ನು ಜೈಲುಪಾಲು ಮಾಡಬೇಕೆಂದು ಟಾರ್ಗೆಟ್ ಮಾಡಿದರು" ಹೇಳಿದರು.
ಸೌದಿ ದೊರೆ ವಿರುದ್ಧ ಪೋಸ್ಟ್; ಹರೀಶ್ ನಿವಾಸಕ್ಕೆ ಅಧಿಕಾರಿಗಳ ಭೇಟಿ
ನಕಲಿ ಫೇಸ್ಬುಕ್ ಖಾತೆ ತೆರೆದರು
"ಮಾರನೇ ದಿನ ಅಂದರೆ ಡಿಸೆಂಬರ್ 20ರಂದು ನನ್ನ ಪರಿಚಯಸ್ತರೇ ಫೇಸ್ ಬುಕ್ ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸೌದಿ ದೊರೆ ಹಾಗೂ ಮೆಕ್ಕಾ ಬಗ್ಗೆ ಅವಹೇಳಕಾರಿ ಪೋಸ್ಟ್ ಮಾಡಿದರು. ನನಗೆ ಈ ವಿಚಾರ ಆರಂಭದಲ್ಲಿ ತಿಳಿದಿರಲಿಲ್ಲ. ಎಂದಿನಂತೆ ಕೆಲಸಕ್ಕೆ ಹೋಗಿದ್ದೆ. ಅಷ್ಟರಲ್ಲಾಗಲೇ ನನ್ನ ನಕಲಿ ಖಾತೆಯಿಂದ ಮಾಡಲಾಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿತ್ತು. ಸೌದಿಯ ಪೊಲೀಸರು ನಾನಿದ್ದ ಸ್ಥಳಕ್ಕೆ ಬಂದು ನನನ್ನು ಬಂಧನ ಮಾಡಿದ್ದರು. ಏನಾಗುತ್ತಿದೆ ಎಂಬುವುದು ತಿಳಿಯುವಷ್ಟರಲ್ಲಿ ನಾನು ಸೌದಿಯ ಜೈಲು ಸೇರಿದ್ದೆ" ಎಂದು ಹರೀಶ್ ಬಂಗೇರ ವಿವರಿಸಿದರು.
ಸೌದಿಯಲ್ಲಿ ಕಠಿಣ ಕಾನೂನುಗಳಿವೆ
"ಸೌದಿ ದೇಶದ ಕಾನೂನು ಕಠಿಣ. ಅಲ್ಲಿ ಸಣ್ಣ ತಪ್ಪು ಮಾಡಿದರೂ ಜೈಲಿನಿಂದ ಹೊರಬರುವುದು ಅಸಾಧ್ಯವಾಗಿದೆ. ಅಲ್ಲಿ ಹಿಂದೂಗಳಿಗೆ ಬೆಲೆ ಇಲ್ಲ. ಯಾರೂ ಸಹಾಯಕ್ಕೆ ಬರುವುದಿಲ್ಲ. ಇದೇ ಉದ್ದೇಶದಿಂದ ನನ್ನನ್ನ ಟಾರ್ಗೆಟ್ ಮಾಡಿದರು. ಅಲ್ಲಿನ ಕೆಲವರು ನಾನು ಕೆಲಸ ಮಾಡುವ ಕಂಪೆನಿ ಮೇಲೂ ಒತ್ತಡ ತಂದರು. ಕಂಪೆನಿಯೂ ಪೊಲೀಸರಿಗೆ ನನ್ನನ್ನು ವಶಕ್ಕೆ ಕೊಡುವುನ್ನು ಅರೆಸ್ಟ್ ಎಂದು ಬಿಂಬಿಸಿ ಅವಮಾನ ಮಾಡಿದರು" ಎಂದು ಹರೀಶ್ ಬಂಗೇರ ಹೇಳಿದರು.
ಬಿಡುಗಡೆ ವಿಳಂಬವಾಯಿತು
"ನಾನು ಒಂದೂ ಮುಕ್ಕಾಲು ವರ್ಷ ಕಷ್ಟದ ಜೀವನವನ್ನು ಅನುಭವಿಸಿದ್ದೇನೆ. ನನ್ನನ್ನು ವರ್ಷ 2 ತಿಂಗಳು ಜೈಲಿನ ಒಂದೇ ಕೋಣೆಯಲ್ಲಿ ಹಾಕಲಾಗಿತ್ತು. ಯಾರ ಸಂಪರ್ಕವೂ ಸಾಧ್ಯ ಇರಲಿಲ್ಲ. ಟೆಲಿಫೋನ್ ಕೂಡ ಇರಲಿಲ್ಲ. ಯಾರ ಜೊತೆಗೂ ನನ್ನನ್ನು ಮಾತನಾಡೋಕೆ ಬಿಡುತ್ತಿರಲಿಲ್ಲ. ಆ ಸಂಧರ್ಭದಲ್ಲಿ ದೊಡ್ಡ ನರಕಯಾತನೆಯನ್ನು ಅನುಭವಿಸಿದ್ದೇನೆ" ಎಂದು ಹರೀಶ್ ಬಂಗೇರ ವಿವರಿಸಿದರು.
"ಒಂದು ಕಾಲು ವರ್ಷವಾದ ಬಳಿಕ ಊರಿನಲ್ಲಿ ನನ್ನನ್ನು ಬಿಡಿಸಲು ಶ್ರಮ ಪಡುತ್ತಿರುವ ಬಗ್ಗೆ ಗೊತ್ತಾಯಿತು. ಆ ದಿನದಿಂದ ಹೊರ ಲೋಕವನ್ನು ಕಾಣೋದನ್ನೇ ಕಾಯುತ್ತಿದ್ದೆ. ಯಾವಗಲೂ ಆಸೆಯ ಕಂಗಳಿಂದ ಬಿಡುಗಡೆಯ ದಿನ ಎಣಿಸುತ್ತಿದ್ದೆ. ಆದರೆ ಬಿಡುಗಡೆ ವಿಳಂಬವಾದಷ್ಟೂ ಹೆಚ್ಚಿನ ನೋವನ್ನು ಅನುಭವಿಸಿದೆ" ಎಂದರು.
ನಿರಪರಾಧಿ ಎಂದು ಸಾಬೀತು
"ಸುಮಾರು ಆರು ತಿಂಗಳು ನಾನು ನಿರಪರಾಧಿ ಎಂದು ಸಾಬೀತಾಗಲು ಸಮಯ ಕಳೆಯಿತು. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಇಲ್ಲಿ ಒಂದೇ ವಾರದಲ್ಲೇ ಬೇಲ್ ನಲ್ಲಿ ಹೊರಗೆ ಬಂದಿದ್ದಾರೆ. ಅಲ್ಲಿ ಏನೂ ತಪ್ಪು ಮಾಡದೆ ಒಂದು ವರ್ಷ ಎಂಟು ತಿಂಗಳು ಕಠಿಣ ಶಿಕ್ಷೆ ಅನುಭವಿಸಿದ್ದೇನೆ. ತಪ್ಪು ಮಾಡಿದವರಿಗೆ ಯಾವ ಶಿಕ್ಷೆಯೂ ಆಗಿಲ್ಲ. ಹೀಗಾಗಿ ನನ್ನ ಈ ಸ್ಥಿತಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ನಾನು ಅನುಭವಿಸಿದಕ್ಕಿಂತಲೂ ಹೆಚ್ಚಿನ ಶಿಕ್ಷೆಯಾಗಬೇಕು. ಆಗ ಮಾತ್ರ ನನಗೆ ನೆಮ್ಮದಿ ಆಗುತ್ತದೆ" ಎಂದು ಹರೀಶ್ ಬಂಗೇರ ಹೇಳಿದರು.
"ಇಲ್ಲಿನ ಹೋರಾಟ, ಸಹಾಯದಿಂದಲೇ ನಾನು ಇಷ್ಟು ಬೇಗ ಹೊರ ಬರುವಂತಾಯಿತು. ಸ್ನೇಹಿತ ಲೋಕೇಶ್, ಮಾನವ ಹಕ್ಕು ಹೋರಾಟಗಾರ ರವೀಂದ್ರನಾಥ್ ಶ್ಯಾನುಭಾಗ್ ಅವಿರತ ಪ್ರಯತ್ನವೇ ನಾನು ಹೊರಬರಲು ಕಾರಣವಾಯಿತು. ಭಾರತಕ್ಕೆ ಅದರಲ್ಲೂ ನನ್ನ ಊರು ಕುಂದಾಪುರಕ್ಕೆ ಬಂದಿರುವುದು ಖುಷಿ ತಂದಿದೆ. ಆದರೆ ಈ ರೀತಿ ಶಿಕ್ಷೆ ಅನುಭವಿಸಿ ಬಂದಿರುವ ನೋವು ಕೂಡ ಇದೆ" ಎಂದು ಹರೀಶ್ ಬಂಗೇರ ತನ್ನ ಮನದಾಳವನ್ನು ಹೊರ ಹಾಕಿದ್ದಾರೆ.
Recommended Video
ಸಂತಸ ವ್ಯಕ್ತಪಡಿಸಿದ ಪತ್ನಿ
ಗಂಡ ಕೊನೆಗೂ ಮನೆ ಸೇರಿರೋದಕ್ಕೆ ಹರೀಶ್ ಬಂಗೇರ ಪತ್ನಿ ಸುಮನಾ ಕೂಡಾ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ಒಂದೂ ಮುಕ್ಕಾಲು ವರ್ಷದ ಹಿಂದೆ ಆಕಾಶವೇ ಮೇಲೆ ಬಿದ್ದ ಅನುಭವವಾಯಿತು. ನನ್ನ ಗಂಡನಿಗೆ ಏನಾಗುತ್ತಿದೆ ಅಂತಾ ತಿಳಿಯುತ್ತಿರಲ್ಲ. ಸೌದಿಯಲ್ಲಿ ಒಮ್ಮೆ ಬಂಧನವಾದರೆ ಮತ್ತೆ ಬಿಡುಗಡೆಯಾಗಲ್ಲ ಅಂತಾ ಕೆಲವರು ಹೇಳಿದ್ದರಿಂದ ತುಂಬಾ ಭಯವಾಯಿತು. ಗಂಡನನ್ನು ಬಿಡಿಸುವ ಹೋರಾಟದಲ್ಲಿ ತುಂಬಾ ಮಂದಿ ಸಹಾಯ ಮಾಡಿದರು. ಅವರಿಗೆಲ್ಲಾ ಜೀವ ಇರುವವರೆಗೆ ಕೃತಜ್ಞಳಾಗಿರುತ್ತೇನೆ" ಎಂದರು.
ಸಿಎಎ ಗಲಭೆಯ ಸಂದರ್ಭದಲ್ಲಿ ಹರೀಶ್ ಬಂಗೇರ ಫೋಟೋ ಹಾಕಿ ಮೂಡಬಿದಿರೆಯ ಸಹೋದರರಾದ ಅಬ್ದುಲ್ ಹುಯೇಜ್ ಮತ್ತು ಅಬ್ದುಲ್ ತುಯೇಜ್ ಎಂಬುವವರು ನಕಲಿ ಖಾತೆ ಸೃಷ್ಟಿ ಮಾಡಿದ್ದರು ಮತ್ತು ಅಲ್ಲಾ ಮತ್ತು ಸೌದಿ ದೊರೆಗಳ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಸೈಬರ್ ಕ್ರೈಂ ಪೊಲೀಸರು ಈ ಸಹೋದರರನ್ನು ಬಂಧಿಸಿದ್ದರೂ ಆರೋಪಿಗಳು ಮಾತ್ರ ಒಂದು ವಾರದೊಳಗೆ ಜಾಮೀನು ಪಡೆದು ಬಿಡುಗಡೆಯಾಗಿದ್ದರು.